ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ರಸ್ತೆಗಳು, ಗ್ರಾಮೀಣ ಭಾಗದ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ 44ರ ರಸ್ತೆಯಲ್ಲಿ ಯುವಕರು ನಿಯಮ ಮೀರಿ ಭಾರೀ ಶಬ್ದಗಳೊಂದಿಗೆ ಬೈಕ್ಗಳ ರೈಡ್ ಮಾಡುತ್ತಾರೆ. ಇದರೊಂದಿಗೆ ಕೆಲ ಆಟೋಗಳು ಸಹ ನಿಯಮ ಪಾಲನೆ ಮಾಡುತ್ತಿಲ್ಲ. ಯದ್ವಾ- ತದ್ವಾ ವಾಹನಗಳ ಓಡಾಟದಿಂದಾಗಿ ಪಾದಚಾರಿಗಳು, ಇತರೆ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ. ಜಿಲ್ಲಾ ಸಂಚಾರಿ ಪೊಲೀಸ್ ಠಾಣೆ ಕಟ್ಟುನಿಟ್ಟಿನ ನಿಯಮ ಪಾಲನೆ ಜಾರಿ ಮಾಡಬೇಕಿದೆ.
ಹೆಲ್ಮೆಟ್, ಲೈಸೆನ್ಸ್ ಇಲ್ಲಜಿಲ್ಲೆಯಲ್ಲಿ ಶೇ. 98 ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲ್ಲ. ಶೇ. 60 ಜನರಿಗೆ ವಾಹನ ಚಲಾವಣಾ ಪರವಾನಗಿಯೇ ಇರುವುದಿಲ್ಲ, ಓಡಾಡುವ ಪ್ರತಿ 20 ದ್ವಿಚಕ್ರ ವಾಹನಗಳಲ್ಲಿ ಒಂದು ವಾಹನ ತ್ರಿಬಲ್ ರೈಡಿಂಗ್ ಚಲಾವಣೆ, ಪ್ರತಿ 30 ದ್ವಿಚಕ್ರ ವಾಹನಗಳಲ್ಲಿ ಒಂದು ವಾಹನವನ್ನು ಅಪ್ರಾಪ್ತರೇ ಚಲಾಯಿಸುತ್ತಾರೆ. ಇನ್ನು ಶೇ. 20 ರಷ್ಟು ಜನ ಏಕಮುಖ ಸಂಚಾರದಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಾರೆ. ನೋ ಪಾರ್ಕಿಂಗ್ ನಲ್ಲೇ ಕಾರು, ಬೈಕ್, ಆಟೋ, ಗೂಡ್ಸ್ ವಾಹನ, ಬಸ್, ಲಾರಿ ಸೇರಿ ಇನ್ನಿತರ ವಾಹನಗಳನ್ನು ನಿಲ್ಲಿಸುತ್ತಾರೆ.
ಈ ಬಗ್ಗೆ ಸಂಚಾರಿ ಪೊಲೀಸರೇನಾದರೂ ಪ್ರಶ್ನಿಸಿದರೆ, ನಾವು ಬೆಂಗಳೂರಿನವರು ನಮಗೆ ಗೊತ್ತಿಲ್ಲ, ನಾವು ರೈತರು, ನಾವು ಮಾಧ್ಯಮದವರು, ನಾವು ಜನಪ್ರತಿನಿಧಿಗಳ ಕಡೆಯವರು ಎಂದು ಹೇಳುತ್ತಾರೆ ಎಂದು ಬಹುತೇಕ ಹೆಸರೇಳಲು ಇಚ್ಛಿಸದ ಪೊಲೀಸರು ಸಹಾಯಕತೆ ವ್ಯಕ್ತಪಡಿಸುತ್ತಾರೆ.
ಈಗಲಾದರೂ ಜಿಲ್ಲಾಡಳಿತ, ಪೊಲೀಸ್ ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತು ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಮುಂದಾಗಬೇಕಿದೆ.