ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಒಬ್ಬ ಯುವಕನಾಗಿ, ಸೌಮ್ಯ ಸ್ವಭಾವದವನಾಗಿ, ಮುಂದಿನ ದಿನಗಳಲ್ಲಿ ದೊಡ್ಡ ಲೀಡರ್ ಆಗಿ ಹಾಸನ ಜಿಲ್ಲೆಗಷ್ಟೇ ಅಲ್ಲ, ರಾಜ್ಯಕ್ಕೆ ಪರಿಚಿತರಾಗಿ ಜಿಲ್ಲೆಯ ಕೀರ್ತಿ ಹೆಚ್ಚು ಮಾಡಲಿ. ನಮಗೆ ಸಂಸದರಾದ ಶ್ರೇಯಸ್ ಪಟೇಲ್ ಬಗ್ಗೆ ಬಹಳ ಗೌರವವಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಕುಟುಂಬದವರು ಏನು ಎಂದು ಕೆಲಸ ಮಾಡಿದ್ದಾರೆ ಎಂದು ಹೇಳುವುದಾದರೆ ಒಂದು ದಿನ ಬೇಕಾಗುತ್ತದೆ. ಶ್ರೇಯಸ್ ಪಟೇಲ್ ಅವರು ನಮ್ಮ ಜಿಲ್ಲೆಯ ಪ್ರವಾಸ ಕೈಗೊಂಡು ಸಂಚಾರ ಮಾಡಲಿ. ಎಲ್ಲೆಲ್ಲಿ ಏನೇನು ಕೆಲಸ ಆಗಿದೆ ಎಂಬುದನ್ನು ಪಟ್ಟಿ ಮಾಡಲಿ. ತಾತ ಹಾಗೂ ಶ್ರೀಕಂಠಯ್ಯ ಅವರ ಸಾಧನೆಯನ್ನು ಜಿಲ್ಲೆಯ ಜನ ಕಂಡಿದ್ದಾರೆ. ಹಳೇಬೀಡಿಗೆ ಯಗಚಿ ನೀರು ಹರಿಸುವುದಾಗಿ ಪುಟ್ಟಸ್ವಾಮಿಗೌಡ ಭರವಸೆ ನೀಡಿದರು ಆದರೆ ಮುಂದೆ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಎಚ್ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ೧೩೦ ಕೋಟಿ ರಣಘಟ್ಟ ಯೋಜನೆಗೆ ಚಾಲನೆ ನೀಡಲಾಯಿತು. ಯಡಿಯೂರಪ್ಪ ಅವರೂ ಹಣ ಬಿಡುಗಡೆ ಮಾಡಿದರು ಎಂದರು.
ಹೆಚ್ಚು ಅನುದಾನ ತನ್ನಿಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗ್ಗೆ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಗಮನಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದು, ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಿ ಆಗ ಜನರು ಭೇಷ್ ಎನ್ನುತ್ತಾರೆ ಎಂದು ಸಲಹೆ ನೀಡಿದರು. ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ಜನರು ಈಗಲೇ ಪ್ರಶ್ನೆ ಮಾಡುತ್ತಿದ್ದಾರೆ. ಇದು ಅಧಿವೇಶನ ಮಾಡಿಲ್ಲ. ದೇವೇಗೌಡರ ಕುಟುಂಬವನ್ನು ಬಯ್ಯುವುದಕ್ಕೆ ಮಾಡಿರುವ ಅಧಿವೇಶನವಾಗಿದೆ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಮಾಡಿ ಕನಿಷ್ಠ ನೂರು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರೆ ಬಹಳ ಸಂತೋಷವಾಗುತಿತ್ತು. ಒಂದು ಕಡೆ ಗ್ಯಾರಂಟಿ ತಂದು ಅರ್ಧಂಬರ್ಧವಾಗಿ ಎಲ್ಲಾ ಅಭಿವೃದ್ಧಿ ಶೂನ್ಯವಾಗಿ ಜನರು ಬಯ್ಯುವ ಕಾಲದಲ್ಲಿ ಅನುದಾನ ತಂದು ಅದನ್ನಾದರೂ ಫೋಕಸ್ ಮಾಡಬಹುದಿತ್ತು ಎಂದು ಕುಟುಕಿದರು.
ಹಾಸನಾಂಬೆ ದೇವಾಲಯದ ಜಾತ್ರೆ ವೇಳೆ ಮಧುಗಿರಿ ಮತ್ತು ಅರಸೀಕೆರೆ ಕಡೆಯಿಂದ ಬಸ್ ಟಿಕೆಟ್ ಹಂಚುವ ರೀತಿ ವಿತರಣೆ ಮಾಡಿರುವ ಬಗ್ಗೆ ಜನರು ಮಾತನಾಡಿದ್ದಾರೆ. ಈ ವೇಳೆ ಸಂಸದರು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಗುಡುಗಿದರು. ಸಂಸದರಾಗಿ ಶ್ರೇಯಸ್ ಪಟೇಲ್ ಪ್ರಮುಖವಾಗಿ ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮವಹಿಸಬೇಕು. ಸಾಕ್ಷಿಗುಡ್ಡೆಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ಜೆಡಿಎಸ್ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡುವ ಶ್ರೇಯಸ್ ಪಟೇಲ್ ಅಧಿವೇಶನದಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ, ಕೇಂದ್ರ ಸಚಿವರು ಹಾಸನಕ್ಕೆ ಬಂದಾಗ ಅವರಿಗೆ ಮನವಿ ಮಾಡುವ ಬದಲಾಗಿ ಅವರ ವಿರುದ್ಧವೇ ಮಾತನಾಡುವ ಮೂಲಕ ಆಗುವ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಡಿ ಬಗ್ಗೆ ಮಾತನಾಡುವ ಸಂಸದರು ಸಿಡಿ ಬಿಡುಗಡೆ ಮಾಡಿ ಜಿಲ್ಲೆಯ ಗೌರವವನ್ನು ಬೀದಿಪಾಲು ಮಾಡಿದವರ ಜೊತೆಗೆ ಊಟ ಮಾಡುವ ಕೆಲಸ ಮಾಡುತ್ತಿದ್ದಾರೆ ಹಾಗಾದರೆ ಕುತಂತ್ರ ಯಾರದ್ದು ಎಂಬ ಬಗ್ಗೆ ಜನ ಯೋಚಿಸಬೇಕಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಕ್ಷದ ಮಾಧ್ಯಮ ವಕ್ತಾರ ಹೊಂಗೆರೆ ರಘು, ಎಚ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ ಇತರರು ಉಪಸ್ಥಿತರಿದ್ದರು.