ತರೀಕೆರೆ ಶಾಲೆಯನ್ನು ದತ್ತು ಸ್ವೀಕಾರ ಮಾಡುವ ಮೂಲಕ ಪುರಸಭೆ ಶಿಕ್ಷಣ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.
ಪುರಸಭೆಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆ
ಶಾಲೆಯನ್ನು ದತ್ತು ಸ್ವೀಕಾರ ಮಾಡುವ ಮೂಲಕ ಪುರಸಭೆ ಶಿಕ್ಷಣ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.
ಸೋಮವಾರ ಪುರಸಭೆಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪುರಸಭೆ ಈಗಾಗಲೇ ಕೆಲವು ಶಾಲೆಗಳಿಗೆ ಸೌಲಭ್ಯ ಒದಗಿಸಿದೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಾಲೆಗಳು ಉಳಿದರೆ ಸಮಾಜ ಉಳಿದಂತೆ, ಶಾಲೆಗಳ ಅಭಿವೃದ್ಧಿಗೆ ಪುರಸಭೆ ಸಹಕರಿಸಲಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಸರ್ಕಾರಿ ಶಾಲೆಗಳು ಬದುಕನ್ನು ರೂಪಿಸುತ್ತವೆ. ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣದ ಶಾಲೆಗಳು ಅಭಿವೃದ್ಧಿಯಲ್ಲಿ ಕುಂಟಿತವಾಗಿವೆ ಎಂದು ಹೇಳಿದರು. ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಸರ್ಕಾರಿ ಶಾಲೆಗಳ ಉಳಿವಿಗೆ ಸ್ಥಳೀಯ ಆಡಳಿತಗಳು ಮನಸ್ಸು ಮಾಡಬೇಕು. ತರೀಕೆರೆ ಪುರಸಭೆಯ ಈ ಕಾರ್ಯಕ್ರಮ ಆಂದೋಲನವಾಗಿ ಮುಂದುವರಿಯಲಿ ಎಂದರು.ಪುರಸಭೆ ಸದಸ್ಯ ಅಶೋಕ್ ಕುಮಾರ್ ಮಾತನಾಡಿ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿದರೂ ಮಕ್ಕಳ ದಾಖಲಾತಿ ಕೊರತೆ ಬೇಸರ ತರುತ್ತದೆ. ಪೋಷಕರು ಸರ್ಕಾರಿ ಶಾಲೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.ದಲಿತ ಸಂಘರ್ಷ ಸಮಿತಿ ಮುಖಂಡ ಎನ್.ವೆಂಕಟೇಶ್ ಮಾತನಾಡಿ ಪೌರ ಕಾರ್ಮಿಕರ ಹಾಗೂ ದಲಿತ ಮಕ್ಕಳು ಹೆಚ್ಚು ಓದುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವುದು ಸಂತಸ ತಂದಿದೆ. ಈ ಹಿಂದೆಯೂ ಪುರಸಭೆ ಕಟ್ಟಡಕ್ಕೆ 3 ಲಕ್ಷರೂ ಒದಗಿಸಿತ್ತು ಎಂದು ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಕೌನ್ಸಿಲಿಂಗ್ ಸಭೆ ನಿರ್ಣಯದ ಮೂಲಕ ಕನ್ನಡದ ಉಳಿವಿಗೆ ಸಕಾ೯ರಿ ಶಾಲೆ ದತ್ತು ಪಡೆಯಲಾಗಿದೆ, ಹಂತ ಹಂತವಾಗಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು, ಸರ್ವ ಸದಸ್ಯರ ಪ್ರಯತ್ನದಿಂದ ಈ ದತ್ತು ಸ್ವೀಕಾರ ನಡೆದಿದೆ. ಪುರಸಭೆ ಹಲವು ಪ್ರಥಮಗಳಿಗೆ ಸಾಕ್ಷಿ ಹಾಗೂ ಮಾದರಿಯಾಗಿದೆ ಎಂದರು.ಬಿಇಒ ಪರುಶುರಾಮಪ್ಪ ಎಚ್.ಎ. ಮಾತನಾಡಿ ಸಮಾಜದ ಸಹಭಾಗಿತ್ವ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕಾರಿ ಯಾಗ ಲಿದೆ. ಪುರಸಭೆ ದಿಟ್ಟ ನಿರ್ಧಾರ ಶಿಕ್ಷಣ ಇಲಾಖೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಮಚಂದ್ರಪ್ಪ ಮಾತನಾಡಿ ಸರ್ಕಾರ ಇನ್ನಷ್ಟು ಸಹಕಾರ ನೀಡಿದರೆ ಒಳಿತು. ಪಟ್ಟಣದ ಎಲ್ಲಾ ಶಾಲೆಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಮನವಿ ಮಾಡಿದರು.
ಸದಸ್ಯರಾದ ರಿಹಾನ ಪರ್ವಿನ್, ರಂಗನಾಥ, ಪಾರ್ವತಮ್ಮ ,ಆದಿಲ್ ಪಾಷ, ಸಿ.ಆರ್.ಪಿ. ಶಿಲ್ಪ, ಮುಖ್ಯ ಶಿಕ್ಷಕಿ ಮೆಹರುನ್ನೀಸಾ. ಎಸ್. ಡಿ.ಎಂ.ಸಿ ಅಧ್ಯಕ್ಷೆ ಗಿರಿಜಾ ಭಾಗವಹಿಸಿದ್ದರು.
2ಕೆಟಿಆರ್.ಕೆ.6ಃ
ತರೀಕೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪುರಸಭೆಯಿಂದ ದತ್ತು ಸ್ವೀಕಾರ ಮಾಡಿದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್.ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಬಿಇಒಪ ರಶುರಾಮಪ್ಪ ಎಚ್.ಎ.ಮತ್ತಿತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.