ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಜಾಗವನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ನಾಗತವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ನಾಗತವಳ್ಳಿ ಗ್ರಾಮಸ್ಥರು ಗುರುವಾರ ಕೆ.ಐ.ಎ.ಡಿ.ಬಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮದ ಸುನಿಲ್ ಮಾತನಾಡಿ, ಗ್ರಾಮದ ಅನುಕೂಲಕ್ಕೆ ನಗರದ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ ೫೪ರಲ್ಲಿ ಎರಡು ಎಕರೆ ಜಾಗವನ್ನು ಪಾರ್ಕ್ಗಾಗಿ ಮೀಸಲಿಡಲಾಗಿತ್ತು. ಆದರೆ ಕೆಐಎಡಿಬಿ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ದೂರಿದರು. ಇದೆ ವಿಚಾರವಾಗಿ ಫೆಬ್ರವರಿ ೮ರಂದು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ಮಾಡಲಾಗಿ ಪಾರ್ಕ್ ಜಾಗವನ್ನು ಪಾರ್ಕ್ ಉದ್ದೇಶಕ್ಕೆ ಬಳಸಲು ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದೀಗ ಪುಷ್ಪಗಿರಿ ವೇರ್ಹೌಸ್ನ ಮಾಲೀಕ ಜಗದೀಶ್ ಅವರಿಗೆ ಜಾಗವನ್ನು ಮಂಜೂರು ಮಾಡಿ ಈಗಾಗಲೇ ಕೆಲಸ ಮಾಡಲು ಅವಕಾಶ ನೀಡಿದ್ದಾರೆ ಎಂದು ದೂರಿದರು.
ಈ ಹಿಂದೆ ಪುಷ್ಪಗಿರಿ ವೇರ್ಹೌಸ್ ಮಾಲೀಕರು ಪಾರ್ಕ್ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಗ್ರಾಮಸ್ಥರು ನೀಡಿರುವ ದೂರನ್ನು ಕಡೆಗಣಿಸಿ ಇದೀಗ ಗ್ರಾಮಸ್ಥರ ಮೇಲೆಯೇ ಪ್ರಕರಣ ದಾಖಲಿಸುವ ಜೊತೆಗೆ ಪೊಲೀಸರ ಸರ್ಪಗಾವಲಿನಲ್ಲಿ ಖಾಸಗಿಯವರಿಗೆ ಕೆಲಸ ಮಾಡಲು ರಕ್ಷಣೆ ನೀಡಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು. ನಮಗೆ ಮಾತು ಕೊಟ್ಟಿರುವಂತೆ ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ ೫೪ರಲ್ಲಿ ಪ್ರತ್ಯೇಕ ಎರಡು ಎಕರೆ ಜಾಗವನ್ನು ನಮಗೆ ಗುರುತಿಸಿ ಕೊಡಬೇಕು. ಇಲ್ಲವಾದರೆ ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶರತ್, ರವಿ, ಪುಟ್ಟಣ್ಣ, ಮಂಜ, ಜಯರಾಂ, ರೇಣುಕಾ, ಕಮಲಮ್ಮ, ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.