ಕೊಪ್ಪಳ : ಅಂಗಡಿ, ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ನಿಯಮ ಮೀರಿ ಆಂಗ್ಲ ಭಾಷೆಯಲ್ಲಿರುವ ನಾಮಫಲಕಗಳಿಗೆ ಮಸಿ ಬಳಿದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆ ದಾರಿಯುದ್ದಕ್ಕೂ ಇದ್ದ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಸಾಂಕೇತಿಕವಾಗಿ ಮಸಿ ಬಳಿಯುವ ಮೂಲಕ ಪ್ರತಿಭಟನೆ ಮಾಡಿದ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಕನ್ನಡದ ಪರವಾಗಿ ನೂತನವಾಗಿ ಜಾರಿ ಮಾಡಿರುವ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಅಲ್ಲಲ್ಲಿ ಮಾತಿನ ಚಕಮಕಿ ನಡೆದವು. ದಾರಿಯುದ್ದಕ್ಕೂ ಮಸಿ ಬಳಿಯುವುದಕ್ಕೆ ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದು,ಕಾಲವಕಾಶ ನೀಡಿ ಎಂದು ಮನವಿ ಮಾಡಿದರು. ಪೊಲೀಸರ ಮಧ್ಯೆಸ್ಥಿತಿಕೆಯಲ್ಲಿ ಜಾಗೃತಿ ಮೂಡಿಸಿ, ವಾರದ ಕಾಲ ಗಡುವು ನೀಡಲಾಯಿತು. ಇನ್ನೊಂದು ವಾರದೊಳಗಾಗಿ ಎಲ್ಲ ಆಂಗ್ಲ ನಾಮಫಲಕ ತೆರವು ಮಾಡಿ ಕನ್ನಡ ನಾಮಫಲಕ ಹಾಕಬೇಕು. ಕನ್ನಡವೇ ಪ್ರಧಾನವಾಗಿ ಇರಬೇಕು. ಇಲ್ಲದಿದ್ದರೇ ನಾವು ಈಗ ಮಸಿ ಬಳಿಯುವುದಿಲ್ಲ, ಫಲಕಗಳನ್ನೇ ಕಿತ್ತು ಬೀಸಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು.ಕೇಂದ್ರಿಯ ಬಸ್ ನಿಲ್ದಾಣದ ಮುಂದುಗಡೆ ಇರುವ ಶ್ರೀಕನಕದಾಸ ವೃತ್ತದಿಂದ ಶ್ರೀಬಸವೇಶ್ವರ ವೃತ್ತದವರೆಗೂ ಕೊಪ್ಪಳ ಜಿಲ್ಲಾ ಘಟಕದಿಂದ ಕರ್ನಾಟಕ ಸರ್ಕಾರದ ಆದೇಶದಂತೆ ಕಡ್ಡಾಯ ಕನ್ನಡ ನಾಮಫಲಕವನ್ನು ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಬೃಹತ್ ಜನಜಾಗೃತಿ ಆಂದೋಲನ ನಡೆಸಲಾಯಿತು.