ನೇಮಕಾತಿ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ: ಸಂಸದ ಡಾ.ಸಿ.ಎನ್. ಮಂಜುನಾಥ್

KannadaprabhaNewsNetwork |  
Published : Aug 20, 2024, 12:47 AM IST
1 | Kannada Prabha

ಸಾರಾಂಶ

ಸರ್ಕಾರಗಳು ಅಗತ್ಯವಿರುವ ಕಾಲೇಜು, ಆಸ್ಪತ್ರೆಯನ್ನು ನೂರಾರು ಕೋಟಿ ರು. ವೆಚ್ಚ ಮಾಡಿ ನಿರ್ಮಿಸುತ್ತದೆ. ನೋಡಲು ಸುಂದರವಾಗಿರುತ್ತದೆ. ಆದರೆ ಆಸ್ಪತ್ರೆಗಳಲ್ಲಿ ನುರಿತ ತಜ್ಞ ವೈದ್ಯರೇ ಇರುವುದಿಲ್ಲ. ಅಗತ್ಯ ಸಿಬ್ಬಂದಿ ಕೊರತೆ ಇರುತ್ತದೆ. ಕಾಲೇಜುಗಳಲ್ಲಿ ಬೋಧಕರೇ ಇರುವುದಿಲ್ಲ. ಆದ್ದರಿಂದ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಆಡಳಿತ ಯಂತ್ರ ಎಡವುತ್ತಿರುವುದು ಇಲ್ಲೇ.

ಕನ್ನಡಪ್ರಭ ವಾರ್ತೆ ಮೈಸೂರು

ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ಕೊಡುವ ಸಚಿವ ಸಂಪುಟ ನೇಮಕಾತಿ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತದೆ. ಕಾಲಮಾನಕ್ಕೆ ತಕ್ಕಂತೆ ದೇಶದ ಆಡಳಿತ ವ್ಯವಸ್ಥೆಯ ಪರಿಕಲ್ಪನೆ ಬದಲಾಗಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗವು ಸೋಮವಾರ ಏರ್ಪಡಿಸಿದ್ದ ಡಾ. ಸುಕನ್ಯಾ ಸೂನಗಹಳ್ಳಿ ಅವರು ಸಂಪಾದಿಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಗ್ರಂಥ ‘ಆಧುನಿಕ ಧನ್ವಂತರಿ’, ಮೈವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಎಸ್. ಮಾಲಿನಿ ಬರೆದ ಪುರುಷರ ಲೈಂಗಿಕ ಆರೋಗ್ಯ, ಮಹಿಳೆಯ ಲೈಂಗಿಕ ಆರೋಗ್ಯ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ಅಗತ್ಯವಿರುವ ಕಾಲೇಜು, ಆಸ್ಪತ್ರೆಯನ್ನು ನೂರಾರು ಕೋಟಿ ರು. ವೆಚ್ಚ ಮಾಡಿ ನಿರ್ಮಿಸುತ್ತದೆ. ನೋಡಲು ಸುಂದರವಾಗಿರುತ್ತದೆ. ಆದರೆ ಆಸ್ಪತ್ರೆಗಳಲ್ಲಿ ನುರಿತ ತಜ್ಞ ವೈದ್ಯರೇ ಇರುವುದಿಲ್ಲ. ಅಗತ್ಯ ಸಿಬ್ಬಂದಿ ಕೊರತೆ ಇರುತ್ತದೆ. ಕಾಲೇಜುಗಳಲ್ಲಿ ಬೋಧಕರೇ ಇರುವುದಿಲ್ಲ. ಆದ್ದರಿಂದ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಆಡಳಿತ ಯಂತ್ರ ಎಡವುತ್ತಿರುವುದು ಇಲ್ಲೇ ಎಂದರು.

ಒಂದು ಕಟ್ಟಡ ನಿರ್ಮಾಣದ ವೇಳೆಯೇ ಅದಕ್ಕೆ ತಕ್ಕನಾದ ಹುದ್ದೆಗಳನ್ನು ಸೃಜಸಿ, ನೇಮಕಾತಿ ಮಾಡಿಕೊಂಡು, ಸಮರ್ಪಕವಾಗಿ ನಿರ್ವಹಿಸುವಂತೆ ಆಗಬೇಕು. ನೇಮಕಾತಿ ವಿಷಯದಲ್ಲಿ ಸಚಿವ ಸಂಪುಟದ ತೀರ್ಮಾನವನ್ನು ಆ ಇಲಾಖೆಯ ಕೇಸ್ ವರ್ಕರ್ ಷರಾ ಬರೆದು ಸರಿಯಲ್ಲ ಎನ್ನುತ್ತಾನೆ. ಇಂತಹ ಸಮಸ್ಯೆಯಿಂದ ನೇಕಮಾತಿ ಆಗುತ್ತಿಲ್ಲ ಎಂದರು.

ಯಾವುದೇ ಒಂದು ಸಂಸ್ಥೆಯ ಅಭಿವೃದ್ಧಿ ಮತ್ತು ನೇಮಕಾತಿ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದು. ಸಂಸ್ಥೆಯ ಆಗುಹೋಗು ಅಲ್ಲಿನ ಮುಖ್ಯಸ್ಥನಿಗೆ ಗೊತ್ತಿರುತ್ತದೆ. ನಮಗೆ 40 ಸ್ಟಾಫ್ ನರ್ಸ್ ಬೇಕು ಎಂದು ಕ್ಯಾಬಿನೆಟ್ ಗೆ ಮನವಿ ಸಲ್ಲಿಸಿದರೆ, ಅಷ್ಟು ಯಾಕೆ ಬೇಕು, 10 ಮಂದಿ ಸಾಕು ಎಂದು ಅನುಮೋದನೆ ನೀಡುವುದು. ಈ ರೀತಿಯ ಭಿಕ್ಷೆ ಬೇಡುವ ಪ್ರಕ್ರಿಯೆ ಮೊದಲು ನಿಲ್ಲಬೇಕು. ಅಧಿಕಾರವು ಸ್ಥಳೀಯ ಮುಖ್ಯಸ್ಥನಿಗೆ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು.

ಸಚಿವರು, ಜನಪ್ರತಿನಿಧಿಗಳ ಮನೆಯಲ್ಲಿ ಆಡುಗೆ ಮಾಡುವವರು, ಕಾರಿನ ಚಾಲಕರು, ಮಸಾಜ್ ಮಾಡುವವರು ಅಧಿಕಾರಿಗಳನ್ನು ಬದಲಾಯಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಕೂಡ ಅವರ ಮಾತು ಕೇಳುತ್ತಾರೆ ಎಂದರೇ ವ್ಯವಸ್ಥೆ ಯಾವ ರೀತಿ ಇದೆ ಎಂಬುದು ತಿಳಿಯುತ್ತದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಋಣಾತ್ಮಕ ಧೋರಣೆ ಹೊಂದಿರುವವರು ಒಂದು ರೀತಿಯಲ್ಲಿ ಸಾಮಾಜಿಕ ಭಯೋತ್ಪಾದಕರಾಗಿರುತ್ತಾರೆ. ಅವರು ಇದ್ದ ಪರಿಸರದಲ್ಲಿ ಜಗಳಗಳೇ ಆಗುತ್ತಿರುತ್ತವೆ. ಆದ್ದರಿಂದ ಜೀವನದಲ್ಲಿ ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಯಶಸ್ಸಿನ ಜೀವನಕ್ಕೆ ಸ್ಫೂರ್ತಿ ಆಗುತ್ತದೆ ಎಂದರು.

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಲ್ಲಿ ಶೇ. 55ರಷ್ಟು ಮಹಿಳಾ ವೈದ್ಯರೇ ಇದ್ದಾರೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅವರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಊಟದ ಹಾಲ್, ಸುರಕ್ಷಿತ ಶೌಚಾಲಯ ಇರಬೇಕು. ಕೋಲ್ಕತ್ತಾ ಪರಿಸ್ಥಿತಿ ನೋಡಿದರೆ ಆಸ್ಪತ್ರೆಗೂ ಗನ್ ಮ್ಯಾನ್ನೇಮಿಸಬೇಕಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಸಿ. ನಾಗಣ್ಣ, ಡಾ.ಸಿ. ಶರತ್ ಕುಮಾರ್, ಚಿಕ್ಕತಿಮ್ಮಯ್ಯ, ಡಾ. ಸುತ್ತೂರು ಎಸ್. ಮಾಲಿನಿ ಇದ್ದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಅನುದಾನವನ್ನು ಹೆಚ್ಚಾಗಿ ನೀಡಬೇಕು. ಪ್ರಸ್ತುತ ನಮ್ಮ ದೇಶದ ಜಿಡಿಪಿಯಲ್ಲಿ ಶೇ.2ರಷ್ಟನ್ನು ಮಾತ್ರ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಶೇ. 5ರಷ್ಟನ್ನು ನೀಡಬೇಕು. ಆಗ ವ್ಯವಸ್ಥೆ ಉತ್ತಮವಾಗುತ್ತದೆ. ಬ್ರಿಟೀಷರ ಕಾಲದ ಕಾಯ್ದೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕು.

- ಡಾ.ಸಿ.ಎನ್. ಮಂಜುನಾಥ್, ಸಂಸದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!