ರಾಮೇಶ್ವರಂ ಕೆಫೆ ಬಾಂಬ್‌: ಹೊರರಾಜ್ಯದಲ್ಲಿ ಎನ್‌ಐಎ ಶೋಧ

KannadaprabhaNewsNetwork | Updated : Mar 06 2024, 10:28 AM IST

ನಗರದ ವೈಟ್‌ಫೀಲ್ಡ್‌ ಸನಿಹದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಚುರುಕುಗೊಳಿಸಿದ್ದು, ಕೆಲವು ಶಂಕಿತರ ಮಾಹಿತಿ ಮೇರೆಗೆ ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಸಹ ಕಾರ್ಯಾಚರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವೈಟ್‌ಫೀಲ್ಡ್‌ ಸನಿಹದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಚುರುಕುಗೊಳಿಸಿದ್ದು, ಕೆಲವು ಶಂಕಿತರ ಮಾಹಿತಿ ಮೇರೆಗೆ ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಸಹ ಕಾರ್ಯಾಚರಣೆ ನಡೆಸಿದೆ. 

ತನಗೆ ಅಧಿಕೃತವಾಗಿ ತನಿಖೆ ವಹಿಸಿದ ಬಳಿಕ ಮಂಗಳವಾರ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಮತ್ತೆ ಎನ್ಐಎ ತಂಡವು ಭೇಟಿ ನೀಡಿ ಪರಿಶೀಲಿಸಿತು. 

ಈ ವೇಳೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು, ಕೆಫೆ ಮುಂಭಾಗದಲ್ಲೇ ಇರುವ ಬಸ್ ನಿಲ್ದಾಣದಿಂದ ಕೆಫೆ ವರೆಗೆ ಶಂಕಿತ ವ್ಯಕ್ತಿ ನಡೆದು ಬಂದಿರುವ ಹಾದಿಯನ್ನು ತೀವ್ರವಾಗಿ ತಪಾಸಣೆ ನಡೆಸಿದರು.

ಅಲ್ಲದೆ ತಮಿಳುನಾಡಿನ ಚೆನ್ನೈ ಹಾಗೂ ಕೇರಳ ರಾಜ್ಯಗಳಲ್ಲಿ ಶಂಕಿತರ ಸಂಪರ್ಕ ಜಾಲದ ಮಾಹಿತಿ ಮೇರೆಗೆ ಎನ್‌ಐಎ ಕಾರ್ಯಾಚರಣೆಗಿಳಿದೆ ಎನ್ನಲಾಗಿದೆ. 

ಇನ್ನು ಕೆಫೆ ಪ್ರಕರಣ ಸಂಬಂಧ ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಮಾಹಿತಿಯನ್ನು ನಿರಾಕರಿಸಿದ ಅಧಿಕಾರಿಗಳು, ಇದುವರೆಗೆ ಯಾರನ್ನು ವಶಕ್ಕೆ ಪಡೆದಿಲ್ಲ ಎಂದಿದ್ದಾರೆ.

ರಾಮೇಶ್ವರ ಕೆಫೆ ಪಕ್ಕದಲ್ಲೇ ಮತ್ತೊಂದು ದರ್ಶಿನಿ ಹೋಟೆಲ್ ಹಾಗೂ ಹಿಂಭಾಗ ಬೋರ್ಡಿಂಗ್ ಕಮ್ ಹೋಟೆಲ್‌ ಇದೆ. 

ಅಲ್ಲದೆ ಕೆಫೆ ಕೂಗಳತೆ ದೂರದಲ್ಲೇ ಐಟಿ ಕಂಪನಿಗಳಿವೆ. ಹೀಗಾಗಿ ರಾಮೇಶ್ವರ ಕೆಫೆಯಲ್ಲಿ ಹೆಚ್ಚಿನ ಗ್ರಾಹಕರು ಜಮಾಯಿಸುತ್ತಾರೆ ಎಂಬ ಖಚಿತ ಮಾಹಿತಿ ಪಡೆಯೇ ದುಷ್ಕರ್ಮಿಗಳು ಟಾರ್ಗೆಟ್ ಮಾಡಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಬಾಂಬ್ ಸ್ಫೋಟ ಪ್ರಕರಣ ಕುರಿತು ಸಿಸಿಬಿ ಹಾಗೂ ಎನ್‌ಐಎ ಅಧಿಕಾರಿಗಳು ಮಂಗಳವಾರ ಭೇಟಿಯಾಗಿ ಸಮಾಲೋಚಿಸಿದ್ದಾರೆ. ಇದುವರೆಗೆ ನಡೆದಿರುವ ತನಿಖೆ ಕುರಿತು ಸಿಸಿಬಿಯಿಂದ ಎನ್‌ಐಎ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.