ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಕಲಿಕಾ ಕೇಂದ್ರದ ಶಿಬಿರದಲ್ಲಿ ದಾನೇಶ ಅವಟಿ ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ ವಿಜಯಪುರ

ಶಿಕ್ಷಣದಿಂದ ಮಗು ವಂಚಿತರಾಗಬಾರದು ಎಂದು ಸರ್ಕಾರ ಇಂದು ಕಡ್ಡಾಯ ಶಿಕ್ಷಣ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಹೇಳಿದರು.

ನಗರದ ಫ್ಯಾಂಟಸಿ ಕಿಡ್ಸ್ ಝೋನ್ ಸ್ಕೂಲ್‌ನಲ್ಲಿ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಹಾಗೂ ಸಮಪ್ರಭ ಏಜುಕೇಶನ್ ಆಂಡ್ ಯುಥ್‌ ವಾಲೆಂಟಿಯರ್ ಆಶೋಷಿಯೇಷನ್ ಸಹಯೋಗದಲ್ಲಿ ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಕಲಿಕಾ ಕೇಂದ್ರದ ಮೂಲಕ 21 ದಿನಗಳ ಶೈಕ್ಷಣಿಕ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು. ಶಿಕ್ಷಣ ಎಲ್ಲರ ಬಾಳಿಗೆ ಬೆಳಕಾಗಿದ್ದು, ಎಲ್ಲರಿಗೂ ಅತ್ಯಂತ ಅವಶ್ಯವಾಗಿದೆ. ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ ಬಡತನದಲ್ಲಿರುವ, ನಿರಾಶ್ರಿತರ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಅಂಥಹ ಕುಟುಂಬಗಳನ್ನು ಗುರುತಿಸಿ ಮಕ್ಕಳನ್ನುಕಲಿಕಾ ಕೇಂದ್ರಕ್ಕೆ ಕರೆತಂದು ಉಚಿತವಾಗಿ ಮಕ್ಕಳಿಗೆ ವಿದ್ಯೆ, ವಿನಯ, ಸಂಸ್ಕಾರ ನೀಡುವುದರೊಂದಿಗೆ ಊಟ, ತಿಂಡಿ, ಬಟ್ಟೆ, ಕಲಿಕಾ ಸಾಮಗ್ರಿ ನೀಡುವದರ ಮೂಲಕ ಸ್ಪಂದನ ಹಾಗೂ ಸಮಪ್ರಭ ಸಂಸ್ಥೆಗಳು ಫಲಾಪೇಕ್ಷೆ ಇಲ್ಲದೇ ಮಕ್ಕಳ ಶೈಕ್ಷಣಿಕ ಸೇವೆ ಮಾಡುತ್ತಿವೆ. ಇವರಿಗೆ ಸರ್ಕಾರ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಸಮಪ್ರಭ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಪ್ರಶಾಂತ ದೇಶಪಾಂಡೆ ಮಾತನಾಡಿ, ವಜ್ರ ಹನುಮಾನ ದೇವಸ್ಥಾನ ಹತ್ತಿರ ಇರುವ ಬಯಲು ಪ್ರದೇಶದಲ್ಲಿ ಹೊಟ್ಟೆ ಹೊರೆಯಲು ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ವಲಸೆ ಬಂದ ನಿರಾಶ್ರಿತರ ಅಲೆಮಾರಿ ಕುಟುಂಬಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಉಪಜೀವನಕ್ಕಾಗಿ ವಿವಿಧ ವ್ಯಾಪಾರ, ಉದ್ಯೋಗಕ್ಕಾಗಿ ಹೋಗುವ ತಂದೆ ತಾಯಿಗಳು, ನಮ್ಮ ತಂಡದ ಸದಸ್ಯರು ಮಾತನಾಡಿ, ಮನವೊಲಿಸಿ ಶಾಲೆಗೆ ತಂದು ನುರಿತ ಶಿಕ್ಷಕಿಯರ ಮೂಲಕ ಅನ್ನ ಉಣಿಸಿ, ಬಟ್ಟೆ ಬರೆ ನೀಡಿ, ಅಕ್ಷರಾಭ್ಯಾಸ ಮಾಡಿಸಿದ ತೃಪ್ತಿ ತಮಗಿದೆ. ಈ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಹೇಳಿದರು.

ಸ್ಪಂದನ ಸ್ವಯಂ ಸೇವಾ ಸಂಸ್ಥೆ ಹಾಗೂ ನಿಕಟಪೂರ್ವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಹದೇವಪ್ಪ ದೇವರ ಅಧ್ಯಕ್ಷತೆ ವಹಿಸಿದ್ದರು. ಸಮಪ್ರಭ ಸಂಸ್ಥೆ ಕಾರ್ಯದರ್ಶಿ ಬಸವರಾಜ ಚೌಧರಿ, ಆಡಳಿತಾಧಿಕಾರಿ ಸುಮಾ ಚೌಧರಿ, ವಿಶೇಷ ತರಬೇತುದಾರ ದ್ರಾಕ್ಷಯಣಿ ಹಿರಾಪುರ, ಜಾನ್ವಿ ಪಂಡಿತ್ನೀ, ಸಂಗಮೇಶ ರಾಮಗೊಂಡ ಮುಂತಾದವರು ಇದ್ದರು.

Share this article