ಕನಕ ಪುರಂದರರ ನಡುವೆ ಭೇದ ಬೇಡ: ಡಾ ವಿದ್ಯಾಭೂಷಣ

KannadaprabhaNewsNetwork |  
Published : Nov 22, 2024, 01:20 AM IST
111 | Kannada Prabha

ಸಾರಾಂಶ

ಉದ್ಘಾಟನಾ ಸಮಾರಂಭದ ಬಳಿಕ ವಿವಿ ಮಟ್ಟದ ಅಂತರ್ ಜಿಲ್ಲಾ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಒಟ್ಟು 173 ಗಾಯಕರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಪುರಂದರದಾಸರು ಹಾಗೂ ಕನಕದಾಸರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈಗಿನ ಮುಖಂಡರು ಅಥವಾ ಯಾವುದೇ ರಾಜಕೀಯ ಶಕ್ತಿಗಳು ಅವರನ್ನು ದೂರ ಮಾಡಲು ಪ್ರಯತ್ನಿಸಿದರೂ ಆ ಒಂದು ವಿಭಜನೆ ತಂತ್ರ ಖಂಡಿತ ಫಲಿಸದು. ಅವರಿಬ್ಬರೂ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳು. ಪುರಂದರ ದಾಸರು ಕನಕದಾಸರ ನಡುವೆ ಬೇಧ ಭಾವ ತರಬೇಡಿ ಯಾಕೆಂದರೆ ಅವರಿಬ್ಬರು ಅನೋನ್ಯವಾಗಿ ಇದ್ದವರು. ಅವರಿಬ್ಬರೂ ಭಗವಂತನ ಪ್ರೀತಿಯ ಭಗವದ್ಭಕ್ತರಾಗಿದ್ದರು ಎಂದು ಖ್ಯಾತ ಗಾಯಕ, ಸಂಗೀತ ಕಲಾರತ್ನ ಡಾ. ವಿದ್ಯಾಭೂಷಣ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿಯು ಕನಕ ಜಯಂತಿ ಪ್ರಯುಕ್ತ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನು. ಭಗವಂತ ಅಂತರಂಗದಲ್ಲಿದ್ದಾನೆ ಅದನ್ನು ಅರಿತುಕೊಂಡು ಪೂಜೆ, ಆರಾಧನೆ, ಉಪಾಸನೆ ಮಾಡಬೇಕು ಹಾಗೂ ಭಗವಂತನನ್ನು ಪ್ರೀತಿಯಿಂದ‌,‌ ಅನುಸಂಧಾನದ ಮೂಲಕ ಒಲಿಸಿಕೊಳ್ಳಬೇಕು ಎಂಬುದು ಕನಕದಾಸರ ಆಶಯವಾಗಿತ್ತು ಎಂದರು.

ಭಕ್ತಿ ಚಳುವಳಿ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ಭಾರತೀಯ ಭಕ್ತಿ ಸಾಹಿತ್ಯಕ್ಕೆ ಅದರ ಕೊಡುಗೆ ಅಪಾರ. ಆಧ್ಯಾತ್ಮದ ಚಿಂತನೆ,‌ ಸಾಹಿತ್ಯದ ಆಕರಗಳ ಮೂಲಕ ಹರಿದಾಸ ಸಾಹಿತ್ಯ ಪರಂಪರೆಯು ಸಂಗೀತ ರಚನೆಯೊಂದಿಗೆ ಜನಮನ ತಲುಪುವಲ್ಲಿ ಯಶಸ್ವಿಯಾಯಿತು ಎಂದರು.ಕುಲಸಚಿವರಾದ ಕೆ. ರಾಜು ಮೊಗವೀರ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನವಿದೆ. ಕನಕದಾಸರು ಕಲಿ, ಕವಿ ಹಾಗೂ ಸಂತರೂ ಆಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಮತ್ತು ಅವನತಿ ಕಾಲದಲ್ಲಿ ಬದುಕಿದ್ದ ಕನಕನ ಸಾಹಿತ್ಯವನ್ನು ಚಾರಿತ್ರಿಕ ಹಿನ್ನೆಲೆಯಿಂದ ಪರಿಶೀಲಿಸಬೇಕಿದೆ ಎಂದರು.‌

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.‌ ಧರ್ಮ ಮಾತನಾಡಿ, ಕನಕದಾಸರ ಚಿಂತನೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯವಿದೆ. ಮಡಿವಂತಿಕೆಯಿಲ್ಲದೆ ಜಾತಿ ಸಮೀಕರಣದ ರಾಜಕೀಯಕ್ಕೆ ಬಲಿಯಾಗದೆ ಕನಕನನ್ನು ಅರ್ಥಮಾಡಿಕೊಳ್ಳಬೇಕು. ವಿವಿ ಕನಕ ಅಧ್ಯಯನ ಕೇಂದ್ರವು ಉತ್ತಮ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.ಹಾವೇರಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿನ್ನಪ್ಪ ಗೌಡ, ಹಣಕಾಸು ಅಧಿಕಾರಿ ಪ್ರೊ.ವೈ. ಸಂಗಪ್ಪ, ವಿಶ್ವಮಂಗಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮ ಸ್ವಾತಿ ಕನಕದಾಸರ ಕೀರ್ತನೆಯ ಮೂಲಕ ಪ್ರಾರ್ಥಿಸಿದರು. ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ.ಎನ್ ವಂದಿಸಿದರು.

ಧರ್ಮನಿಧಿ ಯೋಗಪೀಠ, ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವಮಂಗಳ ಪದವಿಪೂರ್ವ ಕಾಲೇಜು, ಕೊಣಾಜೆ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟನಾ ಸಮಾರಂಭದ ಬಳಿಕ ವಿವಿ ಮಟ್ಟದ ಅಂತರ್ ಜಿಲ್ಲಾ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಒಟ್ಟು 173 ಗಾಯಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ