ಭರಮಸಾಗರ ಕೆರೆಯಲ್ಲಿ ಅಡಿಕೆ ತ್ಯಾಜ್ಯದ್ದೇ ಕಾರುಬಾರು

KannadaprabhaNewsNetwork | Published : Sep 29, 2024 1:31 AM

ಸಾರಾಂಶ

1000 ಎಕರೆ ವಿಸ್ತೀರ್ಣದ ಕೆರೆಗೆ 56 ಕಿ.ಮೀ. ದೂರದಿಂದ ₹525 ಕೋಟಿ ವೆಚ್ಚದಲ್ಲಿ ತುಂಗಾಭದ್ರ ನೀರು ತಂದು ತುಂಬಿಸಲಾಗಿದೆ. ಈ ಕೆರೆಯಿಂದ 42 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಬಹುದೊಡ್ಡ ಕನಸು ಹೊತ್ತು ಭರಮಸಾಗರದ ಐತಿಹಾಸಿಕ ಕೆರೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ನೀರು ತುಂಬಿಸುವ ಕಾರ್ಯಕ್ಕೆ ಭಾಷ್ಯ ಬರೆದ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕೆರೆಯ ಅಂಗಳದ ಈ ದೃಶ್ಯಗಳನ್ನು ನೋಡಿದರೆ ಒಂದು ಕ್ಷಣ ಮೌನಕ್ಕೆ ಜಾರಿಬಿಡಬಹುದು.

1000 ಎಕರೆ ವಿಸ್ತೀರ್ಣದ ಕೆರೆಗೆ 56 ಕಿ.ಮೀ. ದೂರದಿಂದ ₹525 ಕೋಟಿ ವೆಚ್ಚದಲ್ಲಿ ತುಂಗಾಭದ್ರ ನೀರು ತಂದು ತುಂಬಿಸಲಾಗಿದೆ. ಈ ಕೆರೆಯಿಂದ 42 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಹಲವು ವರ್ಷಗಳ ಕಾಲ ನೀರಿಲ್ಲದೆ ಬತ್ತಿಹೋಗಿದ್ದ ಕೆರೆಯಲ್ಲಿ ಈಗ ಸಮೃದ್ಧ ನೀರು ಶೇಖರಗೊಂಡಿದೆ. ಇದರಿಂದ ಈ ಭಾಗದ ರೈತರ ಮೊಗದಲ್ಲಿ ಹಸನ್ಮುಖಿ ಭಾವ ತುಂಬಿ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆದರೆ ಈ ಭಾವನೆ ಭರಮಸಾಗರ ಅಡಿಕೆ ಬೆಳೆಗಾರರಿಗೆ ಇದ್ದಂತಿಲ್ಲ. ಅವರ ನಡೆಯಿಂದ ಕೆರೆಯ ಅಂಗಳದಲ್ಲಿ ರಾಶಿಗಟ್ಟಲೆ ಅಡಿಕೆ ತ್ಯಾಜ್ಯ ಬಂದು ಬಿದ್ದಿದೆ. ಕೆರೆಯ ಅಂಗಳಕ್ಕೆ ಹೊಂದಿಕೊಂಡಿರುವ ಕೆಲವು ಅಡಿಕೆ ಬೆಳೆಗಾರರು, ವ್ಯಾಪಾರಸ್ಥರು ಸುಲಿದ ಅಡಿಕೆಯ ಹಸಿ ಸಿಪ್ಪೆಯನ್ನು ಕೆರೆಯ ನೀರಿಗೆ ಸಾಗುಹಾಕುವ ಕೆಲಸವನ್ನು ಕಳೆದ ವರ್ಷದಿಂದ ನಿತ್ಯವೂ ಮಾಡುತ್ತಿದ್ದಾರೆ. ಕೆರೆಯ ಅಂಚಿನಲ್ಲಿ ನೂರಾರು ಲೋಡು ತ್ಯಾಜ್ಯವನ್ನು ಸುರಿದಿರುವುದು ಈಗಲೂ ಕಣ್ಣಿಗೆ ರಾಚುವಂತಿದೆ. ಕ್ರಮೇಣ ಈ ತ್ಯಾಜ್ಯ ನೀರಿನಲ್ಲಿ ಬೆರೆತುಹೋಗುತ್ತಿದೆ.

ಇದರಿಂದ ಪರಿಶುಭ್ರವಾಗಿರುವ ತುಂಗಭದ್ರೆಯ ನೀರು ಮಲಿನಗೊಂಡು ಕೊನೆಯಲ್ಲಿ ಕೆರೆಯಲ್ಲಿನ ಜೀವರಾಶಿಗಳ ಪ್ರಾಣಕ್ಕೆ ಎರವಾಗುತ್ತದೆ. ಕೆರೆಯಲ್ಲಿನ ನೀರನ್ನು ಕುಡಿಯುವ ಜಾನುವಾರುಗಳ ಪ್ರಾಣಕ್ಕೂ ಇದು ಕುತ್ತು ತರಬಹುದು. ಈ ಬೃಹತ್‌ ಕೆರೆಯಲ್ಲಿ ಮೀನು ಸಾಕುವ ಉದ್ಯಮ ಮಾಡುವ ಅಪೇಕ್ಷೆ ಇಟ್ಟುಕೊಂಡಿರುವವರಿಗೆ ಹಿನ್ನಡೆಯಾಗಬಹುದು.

ಕೆರೆ ತುಂಬಿದ ಬಳಿಕ ಹತ್ತಾರು ಬಾರಿ ಭೇಟಿ ನೀಡಿರುವ ತರಳಬಾಳು ಶ್ರೀಗಳು ಕೆರೆಯ ಅಂಗಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹಲವು ಬಾರಿ ಕೆರೆ ನೀಡಿದ್ದಾರೆ. ಕೆರೆಯ ಏರಿಯ ಮೇಲೆ ಪ್ರವಾಸಿ ತಾಣ ಮಾಡುವ ಕನಸೂ ಅವರಿಗಿದೆ. ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಅವರು ಸಂಬಂಧಿಸಿದವರೊಂದಿಗೆ ಚರ್ಚಿಸಿದ್ದಾರೆ. ಇಂತಿರುವಾಗ ಈ ಜನರು ಮಲಿನಯುಕ್ತ ಸಾಮಗ್ರಿಗಳನ್ನು ಕೆರೆಯ ನೀರಿಗೆ ಸೇರಿಸುವ ಪರಿಪಾಠವನ್ನು ಮುಂದುವರೆಸಿದರೆ ಹೇಗೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ

ದಿನನಿತ್ಯವೂ ತ್ಯಾಜ್ಯ ಕೆರೆಗೆ ಸೇರುತ್ತಿರುವುದನ್ನು ಕಂಡಿಯೂ ಗ್ರಾಮ ಪಂಚಾಯತಿ, ಸ್ಥಳೀಯವಾಗಿ ಇರುವ ನಾಡ ಕಚೇರಿ ಅಧಿಕಾರಿಗಳು, ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ಮೌನವಹಿಸಿದ್ದಾರೆ.

ಇಂತಹ ವೇಳೆಯಲ್ಲಿ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಅಗಮಿಸಿ, ವಾಸ್ತವವನ್ನು ಪರಿಶೀಲಿಸಿ ಕೆರೆಯ ಅಂಗಳದ ಅಂಚಿನಲ್ಲಿ ಅಡಿಕೆ ಸುಲಿಯುವ ಮತ್ತು ಅಲ್ಲಿಗೆ ತಂದು ತ್ಯಾಜ್ಯವನ್ನು ವಿಲೇವಾರಿ ಮಾಡುವ ಜನರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಕೆರೆಗೆ ತ್ಯಾಜ್ಯ ಹಾಕಬೇಡಿ

ರೈತರ ಬಗ್ಗೆ ಅಪಾರ ಕಾಳಜಿಯಿಂದ ತರಳಬಾಳು ಶ್ರೀಗಳು ಭರಮಸಾಗರ ಕೆರೆಗೆ ನೀರು ತಂದಿದ್ದಾರೆ. ಕೆರೆಯ ಆವರಣವನ್ನು ಪರಿಶುಭ್ರವಾಗಿ ಇರಿಸಿಕೊಳ್ಳಲು ಅವರು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಇಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡುವ ಆಲೋಚನೆ ಕೂಡ ಅವರಲ್ಲಿದೆ. ಹೀಗಿರುವಾಗ ಭರಮಸಾಗರದ ಕೆಲವು ನಾಗರೀಕರು ಕೆರೆಯ ಆವರಣದಲ್ಲಿ ಅಡಿಕೆ ತ್ಯಾಜ್ಯವನ್ನು ನೀರಿಗೆ ಸೇರಿಸುವುದು ಅಪೇಕ್ಷಣೀಯವಲ್ಲ. ಕೂಡಲೆ ಸ್ವಯಂ ಪ್ರೇರಿತರಾಗಿ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಬೇಕು.

ಶಶಿ ಪಾಟೀಲ್

ಕೆರೆ ಸಮಿತಿ ಅಧ್ಯಕ್ಷರು, ಭರಮಸಾಗರ

ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಯಲ್ಲಿ ಅಡಿಕೆ ಸುಲಿಯುವವರು ಲೋಡುಗಟ್ಟಲೆ ಸಿಪ್ಪೆಯನ್ನು ತಂದು ಸುರಿಯುತ್ತಿರುವುದು ವಿಷಾದಕರ. ಇದರಿಂದ ಕೆರೆಯ ನೀರು ಮತ್ತು ಕೆರೆಯ ವಾತಾವರಣವೇ ಕೆಡುತ್ತಿದೆ. ಕೂಡಲೇ ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಸಿ.ಆರ್. ನಾಗರಾಜ್

ಕೃಷಿ ಸಮಿತಿ, ಸಿರಿಗೆರೆ

Share this article