ಸಮೀಕ್ಷೆಗೆ ಆಕ್ಷೇಪ, ಪತ್ರ ನೀಡಿ ಮಾಹಿತಿ ನಿರಾಕರಣೆ

KannadaprabhaNewsNetwork |  
Published : Sep 26, 2025, 01:00 AM IST
25ಕೆಪಿಎಲ್ 24 ರಾಮಣ್ಣ ಮಂಗಳೂರು 25ಕೆಪಿಎಲ್ 25 ರಾಮಣ್ಣ ಆಕ್ಷೇಪ ವ್ಯಕ್ತಪಡಿಸಿರುವುದು. | Kannada Prabha

ಸಾರಾಂಶ

ಸಮೀಕ್ಷೆಯಲ್ಲಿ ಮಾನವಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೂ ಪೆಟ್ಟುಬಿದ್ದಿದೆ.

ಕೊಪ್ಪಳ: ಹಿಂದುಳಿದ ವರ್ಗ ಆಯೋಗ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಹೆಸರಿನ ಸಮೀಕ್ಷೆಗೆ ಕೊಪ್ಪಳ ವ್ಯಕ್ತಿಯೋರ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕ್ಷೇಪಣೆಯ ಕುರಿತು ಲಿಖಿತ ಪತ್ರ ನೀಡಿದ್ದಾರೆ.

ಹೌದು, ಕೊಪ್ಪಳ ನಗರದ 28 ನೇ ವಾರ್ಡ್‌ನ ರಾಮಣ್ಣ ಮಂಗಳೂರು ಎನ್ನುವ ವ್ಯಕ್ತಿಯೇ ಇಂಥದ್ದೊಂದು ಆಕ್ಷೇಪ ಎತ್ತಿ ಸಮೀಕ್ಷೆಗೆ ಬಂದವರನ್ನು ವಾಪಸ್ಸು ಕಳುಹಿಸಿದ್ದಾನೆ.

ಸಮೀಕ್ಷೆಯಲ್ಲಿ ಮಾನವಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೂ ಪೆಟ್ಟುಬಿದ್ದಿದೆ. ಹೀಗಾಗಿ, ಈ ಸಮೀಕ್ಷೆ ಸರಿಯಲ್ಲ ಎಂದಿದ್ದಾನೆ. ಈ ಕುರಿತು ತನ್ನದೇ ಆದ ವಿವರಣೆಗಳೊಂದಿಗೆ 8 ಅಂಶ ಪಟ್ಟಿ ಮಾಡಿ ಆಕ್ಷೇಪ ಎತ್ತಿದ್ದಾನೆ.

ಏನೇನು ಆಕ್ಷೇಪ: ಸುಪ್ರೀಂ ಕೋರ್ಟ್ ಆದೇಶದಂತೆ ಜಾತಿ ಸಮೀಕ್ಷೆ ಮಾಡುವಂತೆ ಇಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಪದ ಬಳಕೆ ಮಾಡುವಂತೆ ಇಲ್ಲ ( ಜಾತಿ ಕೇಳುವಂತಿಲ್ಲ), ಕಾಲಂ ನಂಬರ್ 12 ರಲ್ಲಿ ಜಾತಿ ಮತ್ತು ಉಪ ಜಾತಿ ನಮೂದಿಸುವಂತೆ ಕೇಳಿದ್ದು, ಇದರ ಅವಶ್ಯಕತೆ ಇಲ್ಲ, 21,22,23 ನೇ ಪ್ರಶ್ನೆಗಳು ಸಂಪೂರ್ಣ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ, 36,37,38 ಮತ್ತು 39 ಕಾಲಂನಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆದಾಯ ಅವನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು, ಮನೆಯಲ್ಲಿ ಎಷ್ಟು ಕೊಠಡಿಗಳು ಇವೆ ಎನ್ನುವ ಪ್ರಶ್ನೆ ಅಸಂಬದ್ಧವಾಗಿದೆ, ಮನೆಯಲ್ಲಿ ಯಾರಾದರೂ ವಿಧವೆಯರು ಇದ್ದಾರೆಯೇ ಎನ್ನುವುದು ಅವರ ವೈಯಕ್ತಿಕ ವಿಷಯವಾಗಿದೆ, 59,60 ನೇ ಪ್ರಶ್ನೆಯೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಎಲ್ಲ ಪ್ರಶ್ನೆಗಳು ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡುವುದರಿಂದ ಜಾತಿ ಸಮೀಕ್ಷೆ ಮಾಡುವುದು ಉರ್ಜಿತವಲ್ಲ ಎನ್ನುವ ಒಕ್ಕಣಿಕೆಯಿರುವ ಪತ್ರ ನೀಡಿ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಸೋರಿಕೆಯಾಗುವ ಅತಂಕ

ಪಡೆಯುವ ಮಾಹಿತಿ ಸೋರಿಕೆಯಾಗುವ ಆತಂಕವಿದೆ. ಇದೆಲ್ಲವನ್ನು ದಾಖಲಿಸಿಕೊಂಡವರು ಅದನ್ನು ಸೋರಿಕೆ ಮಾಡಬಹುದು. ಅಷ್ಟೆ,ಅಲ್ಲ ಅವರ ಎದುರಿಗೆ ಮನೆಯ ಎಲ್ಲ ಮಾಹಿತಿ ಹೇಳಲು ಹೇಗೆ ಸಾಧ್ಯ. ವೆಬ್ ಸೈಟ್ ಹ್ಯಾಕ್ ಆದಾಗಲೂ ಪ್ರತಿಯೊಬ್ಬರ ಮಾಹಿತಿ ಸೋರಿಕೆಯಾಗುವ ಆತಂಕವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಿಐಎಲ್ ಹಾಕಲು ಚಿಂತನೆ

ಈಗಾಗಲೇ ರಾಜ್ಯಾದ್ಯಂತ 19 ಜನರು ಜಾತಿ ಸಮೀಕ್ಷೆ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ನಾನು ಸಹ ಪಿಐಎಲ್ ಹಾಕಲು ಚಿಂತನೆ ನಡೆಸಿದ್ದೇನೆ ಎಂದು ರಾಮಣ್ಣ ಮಂಗಳೂರು ತಿಳಿಸಿದ್ದಾರೆ.

ಈ ರೀತಿ ಜಾತಿ ಸಮೀಕ್ಷೆ ಮತ್ತು ವೈಯಕ್ತಿಕ ಪ್ರಶ್ನೆ ಕೇಳುವುದು ವೈಯಕ್ತಿಕ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಈ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ ಎಂದು ರಾಮಣ್ಣ ಮಂಗಳೂರು ತಿಳಿಸಿದ್ದಾರೆ.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ