ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಭರವಸೆ । ತ್ರೈ ಮಾಸಿಕ ಕೆಡಿಪಿ ಸಭೆ । ಒಂದೂವರೆ ತಾಸು ಗಂಭೀರ ಚರ್ಚೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ದಿನೆ ದಿನೇ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಚರ್ಚಿಸಿ ಸೂಕ್ತವಾದ ನಿರ್ಣಯತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೆ ಅನ್ವಯವಾಗುವಂತೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಸಭೆ ಆರಂಭದಲ್ಲಿ ಅನುಪಾಲನಾ ವರದಿ ಆಧಾರದ ಮೇಲೆ ಸಭೆ ನಡೆಸಲು ಕೆಲವು ಶಾಸಕರು ಸಲಹೆ ನೀಡಿದರು. ಆದರೆ, ವಿಧಾನಪರಿಷತ್ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕಾಡಾನೆಗಳ ಉಪಟಳದ ನಿಯಂತ್ರಣದ ಬಗ್ಗೆ ಚರ್ಚೆಯಾಗಬೇಕು ಎಂದು ಮನವಿ ಮಾಡಿದರು.
ಮೂಡಿಗೆರೆ ತಾಲೂಕಿನಲ್ಲಿ ಸುಮಾರು 55 ಕಾಡಾನೆಗಳು ನಾಲ್ಕೈದು ಗುಂಪುಗಳಲ್ಲಿ ಓಡಾಡುತ್ತಿವೆ. ಇವುಗಳಿಂದಾಗಿ ರೈತರಿಗೆ, ಕಾಫಿ ಬೆಳೆಗಾರರಿಗೆ ಅಪಾರ ಹಾನಿ ಸಂಭವಿಸಿದೆ. ಜನ ವಸತಿ ಪ್ರದೇಶಕ್ಕೆ ಬಂದು ಉಪಟಳ ನೀಡುತ್ತಿವೆ. ಇವುಗಳನ್ನು ನಿಯಂತ್ರಣ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಆನೆಗಳಿಂದ ಪ್ರಾಣ ಹಾನಿ ಸಂಭವಿಸಿದರೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಬಿಡುವುದಿಲ್ಲ ಎಂದರು.ವಿಷಯವಾಗಿ ಉತ್ತರಿಸಿದ ಚಿಕ್ಕಮಗಳೂರು ಡಿಎಫ್ಒ ರಮೇಶ್ ಬಾಬು, ಚಿಕ್ಕಮಗಳೂರು ವಲಯದಲ್ಲಿ 35, ಕೊಪ್ಪ ವಲಯ ದಲ್ಲಿ 125, ಭದ್ರಾ ವನ್ಯಜೀವಿ ವಿಭಾಗದಲ್ಲಿ 400 ಕಾಡಾನೆಗಳು ಇವೆ. ಕಳೆದ 2-3 ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತಿವೆ. ಈ ಹಿಂದೆ ಒಂದೆರಡು ಗುಂಪಾಗಿದ್ದ ಆನೆಗಳು ಇದೀಗ ನಾಲ್ಕೈದು ಆಗಿವೆ. ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕೆಲವು ಆನೆಗಳಿಗೆ ಕಾಲರ್ ಐಡಿ ಹಾಕಲಾಗಿದೆ ಎಂದು ಹೇಳಿದರು.
ಗುಂಪು ಗುಂಪಾಗಿ ಬರುವ ಆನೆಗಳನ್ನು ಪಟಾಕಿ ಸಿಡಿಸಿ ಓಡಿಸಲು ಸಾಧ್ಯವಿಲ್ಲ. ಅವುಗಳು ಬಂದ ದಾರಿಯಲ್ಲಿಯೇ ವಾಪಸ್ ಹೋಗುವವರೆಗೆ ಕಾಯಬೇಕಾಗಿದೆ ಎಂದು ಡಿಎಫ್ಒ ಹೇಳಿದಾಗ, ಕಾಡಾನೆಗಳಿಗೆ ಕಾಡಿನಲ್ಲಿಯೇ ಬೇಕಾಗುವಷ್ಟು ಆಹಾರ ಸಿಕ್ಕರೆ ಅವುಗಳು ಜನ ವಸತಿ ಪ್ರದೇಶಕ್ಕೆ ಬರುವುದಿಲ್ಲ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಕಾಡಿನಲ್ಲಿ ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸುವುದು ನಮ್ಮ ಸರ್ಕಾರ ಜಾರಿಗೆ ತಂದಿರುವ ಪಾಲಿಸಿ ಅಲ್ಲ, ಇದು, ಅನೇಕ ವರ್ಷಗಳಿಂದ ರೂಪಿಸಿಕೊಂಡು ಬರಲಾಗುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದಾಗ, ಆನೆಗಳ ನಿಯಂತ್ರಣಕ್ಕೆ ತಕ್ಷಣಕ್ಕೆ ಹಾಗೂ ಕೆಲವು ವರ್ಷಗಳಲ್ಲಿ ಜಾರಿಗೆ ಬರುವ ಪರಿಹಾರ ಕಂಡುಕೊಳ್ಳಬೇಕೆಂದು ಸಿ.ಟಿ. ರವಿ ಸಲಹೆ ನೀಡಿದರು.
ಕಾಡಿನಿಂದ ಬಂದಿರುವ ಆನೆಗಳನ್ನು ಹಿಮ್ಮೆಟ್ಟುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಸೆರೆ ಸಿಕ್ಕ ಆನೆಗಳನ್ನು ಬಿಡಾರಕ್ಕೆ ಬಿಡಲು ಭದ್ರಾ ವನ್ಯಜೀವಿ ವಿಭಾಗದಲ್ಲಿ ಆನೆಗಳ ಧಾಮ ನಿರ್ಮಾಣ ಮಾಡು ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಹೇಳಿದಾಗ, ಸ್ಥಳೀಯವಾಗಿ ಓಡಾಡುತ್ತಿರುವ ಆನೆಗಳಿಂದ ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ, ಹಾಸನ ಜಿಲ್ಲೆಯಿಂದ ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಹಾಗೂ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದರು.
ಆನೆಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಹಣ್ಣಿನ ಮರಗಳು ಹಾಗೂ ಬಿದಿರು ಬೆಳೆಸಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದಾಗ, ಈ ವರ್ಷದಲ್ಲಿ 30 ಸಾವಿರ ಬಿದಿರು ಸಸಿಗಳನ್ನು ನಡೆಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಡಿಎಫ್ಓ ರಮೇಶ್ ಬಾಬು ಹೇಳಿದರು.ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆದ ಬಳಿಕ ಸಚಿವ ಕೆ.ಜೆ. ಜಾರ್ಜ್ ಹಲವು ಸಲಹೆಗಳನ್ನು ಆಲಿಸಿ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಕೆ.ಎಸ್. ಆನಂದ್, ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಜಿಪಂ ಮುಕ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.-- ಬಾಕ್ಸ್ --ತಮ್ಮಯ್ಯ- ಸಿ.ಟಿ. ರವಿ ವಾಕ್ ವಾರ್ಕಳೆದ 2024ರ ಜುಲೈ 12 ರಂದು ಕೆಡಿಪಿ ಸಭೆ ಮಾಡಲಾಗಿದೆ. 10 ತಿಂಗಳ ಬಳಿಕ ಸಭೆ ಕರೆಯಲಾಗಿದೆ. ಇದಕ್ಕೆ ತ್ರೈಮಾಸಿಕ ಅರ್ಥವೇ ಬರುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ತಾಲೂಕು ಮಟ್ಟದಲ್ಲೂ ಕೆಡಿಪಿ ಮಾಡಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳುತ್ತಿದ್ದಂತೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹಿಂದಿನ 5 ವರ್ಷಗಳಲ್ಲಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದೀರಾ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅವರು ಸಿ.ಟಿ. ರವಿ ಅವರನ್ನು ಪ್ರಶ್ನಿಸಿದರು.ವೇದಿಕೆಯಲ್ಲಿ ಕುಳಿತವರು ರೂಲಿಂಗ್ ಕೊಟ್ಟರೆ ನಾನು ಈ ಸಭೆಯಲ್ಲಿ ಇರೋದಿಲ್ಲ, ಅಧ್ಯಕ್ಷರೇ ನೀವೇ ಉತ್ತರ ಕೊಡಬೇಕು. ಮಧ್ಯ ಮಾತನಾಡುವವರು ಸಹ ಅಧ್ಯಕ್ಷರೇ ಎಂದು ಸಿ.ಟಿ. ರವಿ ಹೇಳಿದಾಗ, ದಿಶಾ ಮಿಟಿಂಗ್ ಆಗುವಾಗ ಇದೇ ವೇದಿಕೆ ಯಲ್ಲಿ ಕುಳಿತು ಅವರು (ಸಿ.ಟಿ. ರವಿ) ರೂಲಿಂಗ್ ಕೊಟ್ಟಿಲ್ವಾ ಎಂದು ತಮ್ಮಯ್ಯ ಪ್ರಶ್ನಿಸಿದರು.
--ಅಮೃತ್ ಮಹಲ್ ಕಾವಲ್ಜಿಲ್ಲೆಯಲ್ಲಿ 16,370 ಎಕರೆ ಪ್ರದೇಶದಲ್ಲಿ ಅಮೃತ್ ಮಹಲ್ ಕಾವಲ್ ಇದ್ದು, ಈ ಪೈಕಿ 4599 ಎಕರೆ ಪ್ರದೇಶ ಒತ್ತುವರಿ ಯಾಗಿದೆ. ಇದರಲ್ಲಿ 171 ಎಕರೆ ತೆರವು ಮಾಡಲಾಗಿದೆ. ಇನ್ನು 4406 ಎಕರೆ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದು ಅಮೃತ್ ಮಹಲ್ ಕಾವಲ್ನ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಒತ್ತುವರಿ ಗುರುತು ಮಾಡಿ ಕೊಡಲೇ ತೆರವುಗೊಳಿ ಸಬೇಕು. ಆ ಸ್ಥಳದಲ್ಲಿ ಸುತ್ತಲೂ ಮತ್ತೆ ಒತ್ತುವರಿಯಾಗದಂತೆ ಟ್ರಂಚ್ ಹೊಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.--
17 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.