ಕನ್ನಡಪ್ರಭ ವಾರ್ತೆ ಜಮಖಂಡಿ
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ವಚನ ಶ್ರಾವಣ ಕಾರ್ಯಕ್ರಮದ ಕುರಿತು ಶ್ರೀಮಠದ ಸಭಾಂಗಣದಲ್ಲಿ ಭಾನುವಾರ ನಡೆದ ಸದ್ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜು.25 ರಿಂದ ಆಗಸ್ಟ್ 20ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ಕಾರ್ಯಕ್ರಮಗಳು ದಿನಕ್ಕೊಂದು ಓಣಿಯಲ್ಲಿ ನಡೆಯಲಿವೆ. ಸಂಜೆ 6.30 ರಿಂದ ಸಂಗೀತ ಸೇವೆ, 7ಗಂಟೆಯಿಂದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ 7.30 ರಿಂದ ಶ್ರೀಗಳಿಂದ ಪ್ರವಚನ ನಡೆಯಲಿದೆ.ಆಸ್ತಿ, ಅಂತಸ್ತು, ಹಣ, ಚಿನ್ನ-ಬೆಳ್ಳಿ ಇವು ನಿಜವಾದ ಸಂಪತ್ತು ಅಲ್ಲ. ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಒಳ್ಳೆಯ ವಿಚಾರದ ಮಾತುಗಳು ನಿಜವಾದ ಸಂಪತ್ತು. ಆದ್ದರಿಂದ ಬಸವಾದಿ ಶಿವಶರಣರ ವಚನಗಳನ್ನು ಆಧರಿಸಿ ಒಳ್ಳೆಯ ವಿಚಾರಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಓಲೆಮಠದ ಆವರಣದಲ್ಲಿ ಮಾತ್ರ ಭಕ್ತಿಯ ವಾತಾವರಣ ನಿರ್ಮಿಸುವ ಬದಲಾಗಿ ಓಣಿ ಓಣಿಯಲ್ಲಿ ಶ್ರೀಮಠದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಓಣಿ ಓಣಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶ್ರೀಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ವಚನ ಶ್ರಾವಣ ಕಾರ್ಯಕ್ರಮದ ಯಶಸ್ಸಿಗೆ ಜಮಖಂಡಿ ನಗರಸಭೆ ಸಂಪೂರ್ಣ ಸಹಾಯ, ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಹೃದಯರೋಗ ತಜ್ಞ ಡಾ.ಎಚ್.ಜಿ. ದಡ್ಡಿ, ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ನಗರಸಭೆ ಸದಸ್ಯ ಸಿದ್ದು ಮೀಶಿ, ನಿವೃತ್ತ ಶಿಕ್ಷಕ ಎಂ.ಡಿ. ಸಂಖ ಮಾತನಾಡಿ ಸಲಹೆ, ಸೂಚನೆ ನೀಡಿದರು.ಬಿ.ಎನ್. ಅಸ್ಕಿ ಪ್ರಾರ್ಥನೆ ಗೀತೆ ಹಾಡಿದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ಎಚ್. ಮಠಪತಿ, ಬಸವರಾಜ ಬಳಗಾರ ನಿರೂಪಿಸಿದರು. ರುದ್ರಯ್ಯ ಕರಡಿ ವಂದಿಸಿದರು.