ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆಯಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ
ರಾಜ್ಯದಾದ್ಯಂತ 20 ಲಕ್ಷಕ್ಕೂ ಹೆಚ್ಚಿರುವ ನೊಳಂಬ ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಬಹುಮುಖ್ಯ ಎಂದು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನೊಳಂಬ ಸ್ವಯಂ ಸೇವಕ ಸಂಘದಿಂದ ಕಡೂರಿನ ಗೆದ್ಲೆ ಹಳ್ಳಿಯ ಬಯಲು ಬಸವೇಶ್ವರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೊಳಂಬ ಸಂಗಮ- ಚಿಕ್ಕಮಗಳೂರು ಜಾತ್ರೆ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಶ್ರೀಮಠ ಅನೇಕ ಕಾರ್ಯ ಮಾಡುತ್ತಿದೆ. 1 ಸಾವಿರಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಆರ್ಥಿಕ ನೆರವು ನೀಡಲಾಗಿದೆ. ನೊಳಂಬ ಸಮಾಜದ ಅಭಿವೃದ್ಧಿಗೆ ಯಾವುದೇ ಅಸಮಾಧಾನ ವಿದ್ದರೂ ಬದಿಗಿಟ್ಟು ಸಮಾಜದ ಏಳಿಗೆಗೆ ಎಲ್ಲರೂ ಒಮ್ಮತದಿಂದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.ನೊಳಂಬ ಸ್ವಯಂ ಸೇವಕ ಸಂಘದ ರಾಜ್ಯಾಧ್ಯಕ್ಷ ಡಾ.ಎಂ.ವಿ.ಧನಂಜಯ ಮಾತನಾಡಿ, ನೊಳಂಬ ಸಮಾಜದ ಸಂಘಟನೆ, ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಧನಸಹಾಯ, ಅಶಕ್ತರಿಗೆ ಆಸರೆ, ಸಮಾಜದ ಸಂಘಟನೆ ಮುಂತಾದ ಉದ್ದೇಶಗಳಿಂದ ಈ ಸ್ವಯಂ ಸೇವಕ ಸಂಘ ಪುಷ್ಪಗಿರಿ ಶಾಖಾ ಮಠದಲ್ಲಿ 3 ವರ್ಷದ ಹಿಂದೆ ಆರಂಭವಾಗಿದ್ದು 18 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಳಂಬ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯ ದೊರೆಯಬೇಕು. ಆ ನಿಟ್ಟಿನಲ್ಲಿ ಇಂತಹ ಸ್ವಯಂ ಸೇವಕ ಸಂಘದ ಕಾರ್ಯ ಶ್ಲಾಘನೀಯ. ವೈಯುಕ್ತಿಕ ಹಿತಾಸಕ್ತಿ ಬದಿಗಿರಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ದೊರೆಯುವುದು ಖಂಡಿತ ಎಂದರು.
ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಡಿ.ಪರಮೇಶ್ವರಪ್ಪ, ವಿಶ್ರಾಂತ ಉಪಕುಲಪತಿ ಡಾ.ಕೆ.ಎಂ.ಇಂದ್ರೇಶ್, ಚಿಕ್ಕದೇವನೂರು ರವಿ, ನವೀನ್, ಡಾ.ಉಮೇಶ್, ಕೆ.ಬಿ. ಬಸವರಾಜಪ್ಪ, ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ್, ಗುಣಸಾಗರ ವಿಜಯ್ ಕುಮಾರ್, ಅರೇಹಳ್ಳಿ ಮಲ್ಲಿಕಾರ್ಜುನ್, ಕಾಮೇನಹಳ್ಳಿ ಯೋಗೀಶ್ ಇದ್ದರು.
ನೊಳಂಬ ಸ್ವಯಂ ಸೇವಕ ಸಂಘದಿಂದ ಕಡೂರಿನ ಗೆದ್ಲೆ ಹಳ್ಳಿಯ ಬಯಲು ಬಸವೇಶ್ವರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಸಂಘದ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೊಳಂಬ ಸಂಗಮ- ಚಿಕ್ಕಮಗಳೂರು ಜಾತ್ರೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.