ಕನ್ನಡಪ್ರಭ ವಾರ್ತೆ ತುಮಕೂರುರೋಗ ಬಂದ ಮೇಲೆ ಔಷಧಿ ಪಡೆದು ಗುಣ ಹೊಂದುವುದಕ್ಕಿಂತ, ರೋಗ ಬರದಂತೆ ತಡೆಯುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.ನಗರದ ಕುರಿಪಾಳ್ಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಚಿಕನ್ಗುನ್ಯಾ ಮತ್ತು ಡೆಂಘೀ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ರೋಗ ಬರದಂತೆ ತಡೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಪಾತ್ರವಿದೆ. ಈ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.ಮನುಷ್ಯನಿಗೆ ಪರಿಸರದಲ್ಲಿನ ಅಶುಚಿತ್ವದಿಂದ ಹೆಚ್ಚು ರೋಗಗಳು ಬರುವ ಸಾಧ್ಯತೆ ಇದೆ. ಅದರಲ್ಲಿಯೂ ಮಳೆಗಾಲದಲ್ಲಿ ಚರಂಡಿ, ರಸ್ತೆಯ ಮೇಲೆ, ಹಾಗೂ ನೀರು ಸಂಗ್ರಹಗೊಳ್ಳುವ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಮಲೇರಿಯಾ, ಚಿಕನ್ಗುನ್ಯಾ, ಡೆಂಘೀ, ಮೆದುಳು ಜ್ವರದಂತಹ ರೋಗಗಳನ್ನು ತಂದೊಡ್ಡಲಿವೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ, ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ಮನೆಯ ಸುತ್ತಮುತ್ತ ಗಲೀಜು ನೀರು ಸಂಗ್ರಹ ಆಗದಂತೆ ಎಚ್ಚರಿಕೆ ವಹಿಸಬೇಕು. ಹಳೆಯ ಟೈರ್ಗಳಲ್ಲಿ ಎಳೆನೀರು ಬುರುಡೆಗಳಲ್ಲಿ ನೀರು ಸಂಗ್ರಹ ಆಗದೆ ಅಗತ್ಯ ಕ್ರಮ ಕೈಗೊಂಡರೆ ರೋಗಗಳಿಂದ ಮುಕ್ತರಾಗಿ, ಒಳ್ಳೆಯ ಆರೋಗ್ಯವಂತ ಜೀವನ ನಡೆಸಬಹುದು ಎಂದರು.ಸರ್ಕಾರ ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆಗೆ ಸಭೆ ನಡೆಸಿ, ರೋಗ ಬರದಂತೆ ತಡೆಯಲು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುವಂತೆ ಸೂಚಿಸಿದೆ. ಅದರಂತೆ ತುಮಕೂರು ನಗರದಲ್ಲಿ ಜಿಲ್ಲಾಡಳಿತ ಮಹಾನಗರಪಾಲಿಕೆಯೊಂದಿಗೆ ಸೇರಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಿತ್ತಿಪತ್ರ ಬಿಡುಗಡೆ ಮಾಡಲಾಗುತ್ತಿದೆ. ಮನೆ ಮನೆಗೆ ಬಿತ್ತಿ ಪತ್ರ ಅಂಟಿಸುವ ಕೆಲಸವನ್ನು ಆರಂಭಿಸಲಾಗಿದೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಜೊತೆಗೂಡಿ ಈ ಕೆಲಸವನ್ನು ಒಂದು ವಾರಗಳ ಕಾಲ ಮಾಡಬೇಕಿದೆ. ಯಾರು ಈ ವಿಚಾರದಲ್ಲಿ ನಿರ್ಲಕ್ಷ ಮಾಡಬಾರದು. ಪ್ರತಿ ವರ್ಷದ ಕಾರ್ಯಕ್ರಮ ಎಂಬ ಧೋರಣೆ ಬಿಟ್ಟು, ಒಂದು ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂಬ ಮನೋಭಾವನೆಯಿಂದ ಕೆಲಸ ಮಾಡಬೇಕು. ರೋಗಗಳು ಬರದಂತೆ ತಡೆಗಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಮಹಾನಗರಪಾಲಿಕೆ ಆಯುಕ್ತೆ ಬಿ.ವಿ.ಆಶ್ವಿಜ ಮಾತನಾಡಿ, ಮಳೆಗಾಲದ ಆರಂಭದಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ರೋಗ ಹರಡುವ ವೇಗ ಹೆಚ್ಚಿರುತ್ತದೆ. ಈ ಕಾರಣಕ್ಕೆ ನಗರದಲ್ಲಿ ಮಳೆ ನೀರು ಹರಿಯುವ ಚರಂಡಿಗಳನ್ನು ಸ್ವಚ್ಚಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಾಕ್ಸ್ ಚರಂಡಿಗಳಿಗೆ ಹೆಚ್ಚು ಒತ್ತು ನೀಡಿ, ಕುಡಿಯುವ ನೀರಿಗೆ ಚರಂಡಿ ನೀರು ಸೇರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
೧೨೦೦ ಮನೆಗಳಿರುವ ದಿಬ್ಬೂರಿನ ದೇವರಾಜ ಅರಸು ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಎನ್.ಜಿ.ಓ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಕಾರದಲ್ಲಿ ಕಸ ವಿಂಗಡನೆ ಜೊತೆಗೆ, ಅಡಿಕೆಯಿಂದ ಮಾಡಿದ ಸ್ಲಾಬ್ಗಳನ್ನು ತೆರೆದ ಚರಂಡಿ ಮುಚ್ಚು ಕಾರ್ಯಕ್ರಮ ನಡೆಯತ್ತಿದೆ. ಇದಕ್ಕೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ನಡೆದ ಜಾಗೃತಿ ಜಾಥಾದ ವೇಳೆ ಜಿಲ್ಲಾಧಿಕಾರಿಗಳು ಮನೆ ಮನೆಗೆ ತೆರಳಿ ಡೆಂಘೀ, ಚಿಕನ್ಗುನ್ಯಾ ಹಾಗೂ ಮಲೇರಿಯಾ ರೋಗಗಳ ನಿಯಂತ್ರಣ ಕುರಿತು ಹೊರತಂದಿರುವ ಕರಪತ್ರವನ್ನು ಮನೆಗಳ ಗೋಡೆ ಮೇಲೆ ಅಂಟಿಸುವ ಮೂಲಕ ಅರಿವು ಮೂಡಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್, ತಾಲೂಕು ವೈದಾಧಿಕಾರಿ ಲಕ್ಷ್ಮಿಕಾಂತ್, ನಗರಪಾಲಿಕೆಯ ಆರೋಗ್ಯಾಧಿಕಾರಿ ವೀರೇಶ್ ಕಲ್ಮಠ್, ಪರಿಸರ ಎಂಜಿನಿಯರ್ ಪೂರ್ಣಿಮ ಇದ್ದರು.