ಚಿತ್ರದುರ್ಗ : ನಮ್ಮದೇನಿದ್ದರೂ ನೈಜ ಅಭಿವೃದ್ದಿ, ಪ್ರಚಾರದ ಗಿಮಿಕ್ ಅಲ್ಲ. ಗ್ರಾಮಗಳ ಅಭಿವೃದ್ಧಿ ವಿಚಾರಗಳಲ್ಲಿ ರಾಜಕಾರಣ ಮಾಡುವುದಿಲ್ಲವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹೇಳಿದರು.
ತಾಲೂಕಿನ ಜಾನುಕೊಂಡ ಗ್ರಾಮದಲ್ಲಿ ಬುಧವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಎಂಜಿಎನ್ಆರ್ ಇಜಿಎ ಯೋಜನೆ, 15ನೇ ಹಣಕಾಸು ಯೋಜನೆ ಹಾಗೂ ಗ್ರಾಪಂ ಇತರೆ ಯೋಜನೆಗಳ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಗ್ರಾಪಂ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜಕಾರಣದಿಂದ ಹೆಸರು ಉಳಿಯುವುದಿಲ್ಲ. ಅಭಿವೃದ್ಧಿಯ ಕೊಡುಗೆ ನೀಡಿದಾಗ ಮಾತ್ರ ಹೆಸರು ಚಿರಸ್ಥಾಯಿ ಆಗುತ್ತದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಅಭಿವೃದ್ಧಿ ಜೊತೆ ಕೈಜೋಡಿಸಬೇಕೆಂದು ತಿಳಿಸಿದರು. ಜಾನುಕೊಂಡ ಗ್ರಾಪಂ ನೂತನ ಕಟ್ಟಡಕ್ಕೆ 29.45 ಲಕ್ಷ ಹಣ ಮೀಸಲಿಡಲಾಗಿದೆ. ಕಟ್ಟಡದ ಸೌಂದರ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲಾಗುವುದು. ಜಾನಕೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಾಗಿವೆ, ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಐಮಾಸ್ಲೈಟ್, ಮುಜರಾಯಿ ಇಲಾಖೆಯ ದೇವಸ್ಥಾನಗಳ ಕಟ್ಟಡ, ಡಾಂಬರೀಕರಣ ಇತರೆ ವಿಶೇಷ ಯೋಜನೆಗಳ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದರು.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಜಾನುಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಟಗರು ಹಟ್ಟಿ, ಕರಿಯಮ್ನಟ್ಟಿ, ಗಂಜಿಗಟ್ಟೆ, ಗ್ರಾಮಗಳನ್ನು ಈಗಾಗಲೇ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಸುಮಾರು 300 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಪ್ಲಾನಿಂಗ್ ಕೂಡ ನಡೆಸಲಾಗಿದೆ ಎಂದರು.
ಜಾನುಕೊಂಡ ಗ್ರಾಪಂ ಅಧ್ಯಕ್ಷೆ ಮಂಜುಳಾ ಸ್ವಾಮಿ ಮಾತನಾಡಿ, ಸುಮಾರು 24.45 ಲಕ್ಷದ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬಹುದಿನಗಳ ಕನಸು ಈಗ ನನಸಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ವೈ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಯರ್ರಿಸ್ವಾಮಿ, ರೂಪಕುಮಾರಿ, ಕೆಡಿಪಿ ಸದಸ್ಯ ನಾಗರಾಜ್, ಸಂತೋಷ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ನಾಗೇಶ್, ಜಾನುಕೊಂಡ ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಪ್ರಾಣೇಶ್, ಚಿಂತಾಮಣಿ, ಅಂಜಿನಿ, ಚಂದ್ರಪ್ಪ, ರಾಮಲಿಂಗಪ್ಪ, ಶೋಭಾ ಸಿದ್ದಪ್ಪ, ಚಂದ್ರು, ಪವಿತ್ರ, ವೆಂಕಟಚಲ, ನಿಜಲಿಂಗಪ್ಪ, ರಾಜಪ್ಪ, ಚಳಕೆರಮ್ಮ ಈಶ್ವರಪ್ಪ, ಗೌರಿಬಾಯಿ ಜಯ ನಾಯ್ಕ್, ಹಾಗೂ ಗ್ರಾಮಸ್ಥರಾದ ಸ್ವಾಮಿ, ಚಂದ್ರಪ್ಪ, ಮಂಜು, ಮೈಲಾರಪ್ಪ, ರಾಜು, ಸುಧಾಕರ್, ಸಿದ್ದಪ್ಪ, ಕರಿಯಪ್ಪ, ರಂಗಪ್ಪ, ಹನುಮಂತಪ್ಪ ಇದ್ದರು.