ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಕ್ಕಳ ಮೇಲೆ ಪೋಷಕರು ಒತ್ತಡ ತರಬೇಡಿ, ಶಿಕ್ಷಕರು ಕೂಡ ಪ್ರೀತಿಯಿಂದ ಮಕ್ಕಳನ್ನು ಕಾಣಿರಿ ಎಂದು ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಸಲಹೆ ನೀಡಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಹಿಂದೂಸ್ಥಾನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ವರ್ಣ ರಂಜಿತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಶಕ್ತ್ಯಾನುಸಾರ ಓದಲಿ ಅದು ಬಿಟ್ಟು ನೆರೆಯ ಮನೆಯ ಮಕ್ಕಳು ಹೆಚ್ಚಿಗೆ ಅಂಕ ಪಡೆದಿದ್ದಾರೆ ನೀವು ಅವರ ಹಾಗೆಯೆ ಓದಬೇಕು ಎಂದು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವುದನ್ನು ಬಿಡಬೇಕು ಎಂದರು. ಮಕ್ಕಳು ತಮ್ಮ ಪ್ರತಿಭೆಗೆ ತಕ್ಕಂತೆ ಓದುತ್ತಾರೆ. ನಾವು ಓದುವ ಕಾಲದಲ್ಲಿ ಎಸ್ಎಸ್ಎಲ್ಸಿ ಪಾಠ ಈಗ ೫ ನೇ ಕ್ಲಾಸಿನ ಮಕ್ಕಳು ಓದುತ್ತಿದ್ದಾರೆ ಹಾಗಾಗಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕದೆ ಓದಲು ಬಿಡಿ ಎಂದರು.ಶಿಕ್ಷಕರು ಸಹ ಎಲ್ಲಾ ಮಕ್ಕಳನ್ನು ಒಂದೇ ತರನಾಗಿ ನೋಡಬೇಕು ಜೊತೆಗೆ ಮಕ್ಕಳಿಗೆ ಪ್ರೀತಿಯಿಂದ ಓದಿಸಲು ಮುಂದಾದರೆ ಮಕ್ಕಳಲ್ಲಿ ಶಿಸ್ತು, ಬದ್ಧತೆ ಬರಲಿದೆ. ಮಕ್ಕಳು ಕೂಡ ಓದಿನ ಮೇಲೆ ಆಸಕ್ತಿ ಇಟ್ಟು ಓದಿ, ಓದಿದ ಶಾಲೆಗೆ ಹೆಸರು ತರುವ ಕೆಲಸ ಮಾಡಬೇಕು ಎಂದರು. ಓದದೇ ಇದ್ದವರು ಪ್ರಪಂಚದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಹಾಗಂತ ನಾನು ನಿಮ್ಮ ಮಕ್ಕಳನ್ನು ಓದಿಸಬೇಡಿ ಎಂದು ಹೇಳುವುದಿಲ್ಲ ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಬೇಡಿ ಎಂಬುದು ನನ್ನ ಬಯಕೆ ಎಂದರು. ಪಟ್ಟಣದಲ್ಲಿ ಬೆರಳಣಿಕೆ ಆಂಗ್ಲ ಮಾಧ್ಯಮ ಶಾಲೆಗಳಿವೆ ಆದರಲ್ಲಿ ಹಿಂದೂಸ್ಥಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಲಿ ಎಂದರು.ಬಿಇಒ ರಾಜಶೇಖರ್ ಮಾತನಾಡಿದರು. ಹಿಂದೂಸ್ಥಾನ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷೆ ಮಂಜುಳ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ನಟ ಜೋಕರ್ ಹನುಮಂತ್ ಕೂಡ ಮಾತನಾಡಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಹಿಂದೂಸ್ಥಾನ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಆರ್.ಮಧು ಕುಮಾರ್, ಶಿವಕುಮಾರ್, ಭಾನುಪ್ರಿಯ, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಸಬ್ ಇನ್ಸ್ಪೆಕ್ಟರ್ ಸಾಹೇಬಗೌಡ ಶಾಲೆಯ ಶಿಕ್ಷಕರು ಇದ್ದರು.