ಗಜೇಂದ್ರಗಡ: ಪಟ್ಟಣದ ಮಸ್ಕಿಯವರ ಓಣಿಯ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಗುರುಪಾಡ್ಯಮಿ ಪ್ರಯುಕ್ತ ಏಳು ದಿನದ ಗುರು ಚರಿತ್ರೆ ಸಪ್ತಾಹ ಸಮಾರೋಪ ಹಾಗೂ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ಸಕಲ ಸದ್ಭಕ್ತರ ನಡುವೆ ಅದ್ಧೂರಿಯಾಗಿ ನಡೆಯಿತು.
ಈ ವೇಳೆ ಡಾ.ರಾಮಶಾಸ್ತ್ರೀ ಜೀರೆ ಮಾತನಾಡಿ, ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲಸಲಿದೆ. ತಪಸ್ಸಿನಿಂದ ಆತ್ಮಬಲ ವೃದ್ಧಿಸುತ್ತದೆ. ಇದು ಸಾರ್ಥಕ ಜೀವನದ ಮತ್ತು ಲೋಕ ಹಿತದ ಸಮರ್ಥ ಸಾಧನೆ. ಸನ್ನಡತೆ ಅವಿಭಕ್ತ ಕುಟುಂಬ ಪತಿ, ಪರೋಪಕಾರ,ಕಷ್ಟ, ಧೀರತನ,ತಪಸ್ಸು, ಪ್ರಾರ್ಥನೆ, ಯೋಗ,ಧ್ಯಾನ ಮುಂತಾದವುಗಳು ಪ್ರಾಚೀನ ಕಾಲದಲ್ಲಿ ಭಾರತೀಯರ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದರು.
ಧರ್ಮದ ಸನ್ಮಾರ್ಗ, ತ್ಯಾಗ ಮತ್ತು ಸದ್ಗುಣಗಳೊಂದಿಗೆ ಪರಿಶ್ರಮದಿಂದಾಗಿ ವ್ಯಕ್ತಿ ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಮಾಡಲು ಸಾಧ್ಯ. ಒಳ್ಳೆಯ ಕೆಲಸ ಮಾಡಿರುವುದನ್ನು ಸಮಾಜ ಗುರುತಿಸುತ್ತದೆ, ಗೌರವಿಸುತ್ತದೆ. ಅಂತಹ ಸದ್ಗುಣಗಳು ಪರಿಸರದ ಜನತೆಯಲ್ಲಿದೆ, ಯಾವಾಗಲೂ ಸಾಧಕರು ತಮ್ಮ ಸಾಧನೆ ಮತ್ತು ಗುರಿ ಮುಂದಿಟ್ಟುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು.ಏಳು ದಿನಗಳವರೆಗೆ ಗುರು ಚರಿತ್ರೆ ಪಾರಾಯಣ ಮಾಡಿದ ಕಲ್ಲಿನಾಥಶಾಸ್ತ್ರೀ ಜೀರೆ ಇವರಿಗೆ ಡಾ. ರಾಮಶಾಸ್ತ್ರೀ ಜೀರೆ ದಂಪತಿಗಳಿಂದ ಗುರುಪಾದ ಪೂಜಾ ಕಾರ್ಯ ನಡೆಯಿತು.