ದೆಹಲಿ ರೈತ ಹೋರಾಟದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹ

KannadaprabhaNewsNetwork | Published : Dec 14, 2024 12:49 AM

ಸಾರಾಂಶ

ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತಿದ್ದರೂ ನಮ್ಮ ಸಂಸದರು ಸುಮ್ಮನಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ದೆಹಲಿಯಲ್ಲಿನ ರೈತ ಹೋರಾಟದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಕಾಡಾ ಆವರಣದಲ್ಲಿರುವ ಮೈಸೂರು ಲೋಕಸಭಾ ಸದಸ್ಯರ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ದೆಹಲಿ ರೈತ ಹೋರಾಟದ ರೂವಾರಿ ರಾಷ್ಟ್ರೀಯ ರೈತ ಮುಖಂಡರಾದ ಜಗಜೀತ್ ಸಿಂಗ್ ದಲೆವಾಲ ಉಪವಾಸ 17ನೇ ದಿನಕ್ಕೆ ಮುಂದುವರಿದು ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್ ಅಧಿವೇಶ ನಡೆಯುತ್ತಿದ್ದರೂ ಈ ಸಂಬಂಧ ಚರ್ಚಿಸದೆ ನಿದ್ರೆ ಮಾಡುವಂತೆ ಸಂಸದರು ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತಿದ್ದರೂ ನಮ್ಮ ಸಂಸದರು ಸುಮ್ಮನಿದ್ದಾರೆ. ಯಾವುದೇ ವಿಚಾರ ಬಂದರೂ ರಾಜ್ಯದ ಸಂಸದರು ಧ್ವನಿಯೆತ್ತದೆ ಇರುವುದು ಮತ ನೀಡಿದ ಜನರಿಗೆ ಮಾಡುವ ಆಪಮಾನವಾಗಿದೆ ಎಂದು ದೂರಿದರು.

ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಾತರಿಯಾದ ಕಾನೂನು ಕೆಳುತ್ತಿದ್ದೇವೆ. ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆ ರೈತರಿಗೆ ಭರವಸೆ ನೀಡಿ ಚಳವಳಿ ಕೈಬಿಡುವಂತೆ ಮನವಿ ಮಾಡಿ ಹುಷಿಗೊಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗ ದೇಶದ ರೈತರಿಗಾಗಿ ತಮ್ಮ ಪ್ರಾಣವನ್ನ ಪಣಕಿಟ್ಟು 17 ದಿನಗಳಿಂದ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೆವಾಲ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೀಗಾಗಿ, ಕೂಡಲೇ ಕೇಂದ್ರ ಸರ್ಕಾರ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ, ರೈತರ ಬೇಡಿಕೆ ಈಡೇರಿಸಬೇಕು. ರೈತ ಮುಖಂಡರ ಪ್ರಾಣ ಉಳಿಸಬೇಕು ಎಂದು ಅವರು ಒತ್ತಾಯಿಸಿದರು.

ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಗಬೇಕು ಪ್ರತಿ ರೈತನ ಹೊಲದ ಬೆಳೆ ವಿಮೆ ಪರಿಹಾರ ಪದ್ಧತಿ ಜಾರಿಗೆ ಬರಬೇಕು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಸಂಸದರ ಕಚೇರಿಯ ಮುಂದೆ ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಲು ರೈತರು ಯತ್ನಿಸಿದಾಗ, ಪೊಲೀಸರು ತಡೆದು ಪ್ರತಿಕೃತಿಯನ್ನು ವಶಪಡಿಸಿಕೊಂಡರು. ನಂತರ ಸಂಸದರ ಆಪ್ತ ಸಹಾಯಕರಿಗೆ ಒತ್ತಾಯ ಪತ್ರ ಸಲ್ಲಿಸಿ, ಸಂಸದರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ, ಬರಡನಪುರ ನಾಗರಾಜ್, ನೀಲಕಂಠಪ್ಪ, ರಾಜೇಶ್ ಪರಶಿವಮೂರ್ತಿ, ಪ್ರಸಾದ ನಾಯಕ್, ಮಂಜುನಾಥ್, ಸುನೀಲ್, ಸೂರಿ, ಕಮಲಮ್ಮ, ನಾಗೇಶ್, ಪ್ರದೀಪ್, ಕೆಂಡಗಣ್ಣಪ್ಪ, ರಾಜು ಮೊದಲಾದವರು ಇದ್ದರು.

Share this article