ಕೆಲಸ ಬಿಟ್ಟು ನಸುಕಿನಲ್ಲಿಯೇ ಕ್ಯೂ ನಿಂತ ಜನ..!

KannadaprabhaNewsNetwork |  
Published : Dec 29, 2023, 01:30 AM IST
28ಎಚ್ಎಸ್ಎನ್15 : ಆಲೂರು ಪಟ್ಟಣದ ವಿಜಯ ಲಲಿತಾ ಗ್ಯಾಸ್‌ ಏಜೆನ್ಸಿ ಮುಂದೆ ಸಾಲುಗಟ್ಟಿ ನಿಂತಿರುವ ಜನರು. | Kannada Prabha

ಸಾರಾಂಶ

ಗ್ಯಾಸ ಸಿಲಿಂಡರ್ ಇ-ಕೆವೈಸಿಗೆ ಡಿ.31 ಕಡೆ ದಿನವೆಂಬ ವದಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ಸುಳ್ಳು ಸುದ್ದಿಗೆ ಕಿವಿಗೊಟ್ಟು ಸರತಿಯಲ್ಲಿ ನಿಂತ ಗ್ರಾಹಕರು

ಇ-ಕೆವೈಸಿಗೆ ಡಿ.31 ಕಡೆ ದಿನವಲ್ಲ । ಜಿಲ್ಲೆಯಾದ್ಯಂತ ಸುಳ್ಳು ಸುದ್ದಿಗೆ ಕಿವಿಗೊಟ್ಟು ಸರತಿಯಲ್ಲಿ ಗ್ರಾಹಕರು । ಎಲ್‌ಪಿಜಿ ಗ್ರಾಹಕರ ದಿಕ್ಕು ತಪ್ಪಿಸುತ್ತಿರುವ ಸಾಮಾಜಿಕ ಜಾಲತಾಣಗಳು

ಕನ್ನಡಪ್ರಭ ವಾರ್ತೆ ಆಲೂರು

ಅಡುಗೆ ಅನಿಲದ ಸಿಲಿಂಡರ್ ಹೊಂದಿರುವ ಗ್ರಾಹಕರು ಡಿಸೆಂಬರ್ 31ರ ಒಳಗೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣದಿಂದ ವಂಚಿತರಾಗುತ್ತಾರೆಂಬ ಗಾಳಿ ಸುದ್ದಿಯಿಂದಾಗಿ ಪಟ್ಟಣದ ಭಾರತ್ ಗ್ಯಾಸ್ ಕಚೇರಿಯ ಮುಂಭಾಗ ಮೈಲುದ್ದದ ಕ್ಯೂ ನಿರ್ಮಾಣಗೊಂಡು ಇ-ಕೆವೈಸಿ ಮಾಡಿಸಲು ಜನರ ಜಾತ್ರೆಯೇ ನೆರೆದ ಘಟನೆ ಗುರುವಾರ ನಡೆದಿದೆ.

ಸರ್ಕಾರದಿಂದ ಈ ಕೆವೈಸಿ ಮಾಡಿಸಬೇಕೆಂಬ ಆದೇಶವಿದ್ದು, ಇದಕ್ಕೆ ಯಾವುದೇ ಕಡೆಯ ದಿನಾಂಕವನ್ನು ನಿಗದಿಗೊಳಿಸಲಾಗಿಲ್ಲವಾದರೂ, ಜನರು ನಾ ಮುಂದು, ತಾ ಮುಂದು ಎಂಬಂತೆ ಮುಗಿಬೀಳುತ್ತಿರುವುದು ನೋಡಿದರೆ ಜನ ಮರುಳೋ ಜಾತ್ರೆ ಮರುಳೋ ಎಂಬುದಾಗಿದೆ. ನಮ್ಮ ಜನರು ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಏಕೆ ಈ ರೀತಿ ವರ್ತಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ, ಈ ರೀತಿ ಸುಳ್ಳು ಸುದ್ದಿಗಳು ಹಬ್ಬಿದಾಗ ಸಂಬಂಧಪಟ್ಟ ಇಲಾಖೆಯಲ್ಲಿ ಅಥವಾ ಏಜೆನ್ಸಿಗಳಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ದೊರೆಯುತ್ತದೆ. ಅದನ್ನು ಬಿಟ್ಟು ಸಮೂಹ ಸನ್ನಿಗೊಳಗಾದವರಂತೆ ಸಾರ್ವಜನಿಕರು ತಮ್ಮ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದವರು ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸಲು ತಾಲೂಕು ಆಡಳಿತಕ್ಕೆ ಆದೇಶಿಸಿ, ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಮಾಡಿ ಸಾರ್ವಜನಿಕರು ಸುಳ್ಳುಸುದ್ದಿಗೆ ಬಲಿಯಾಗದಂತೆ ತಡೆಯಬೇಕಿದೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಹಾರ ನಿರೀಕ್ಷಕ ಮೋಹನ್ ಕುಮಾರ್, ಗ್ರಾಹಕರು ಇ- ಕೆವೈಸಿ ಮಾಡಿಸಬೇಕೆಂಬ ಸರ್ಕಾರದ ಆದೇಶವಿದೆ. ಆದರೆ ಇದಕ್ಕೆ ಯಾವುದೇ ಕಡೆಯ ದಿನಾಂಕ ನಿಗದಿಪಡಿಸಿಲ್ಲ. ಮೊಬೈಲ್ಗಳಲ್ಲಿ ಬರುವ ಸುಳ್ಳುಸುದ್ದಿಗಳಿಂದಾಗಿ ಜನರು ಗ್ಯಾಸ್ ಏಜೆನ್ಸಿಗಳ ಬಳಿ ಈ ಇ-ಕೆವೈಸಿ ಮಾಡಿಸಲು ಮುಗಿಬೀಳುತ್ತಿದ್ದಾರೆ. ಸರ್ಕಾರ ಯಾವುದೇ ರೀತಿಯ ಸಬ್ಸಿಡಿ ನೀಡುತ್ತೇವೆಂದು ಘೋಷಣೆ ಮಾಡಿಲ್ಲವಾದರೂ ಸಹ ಜನರು ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇ- ಕೆವೈಸಿಗೆ ಯಾವುದೇ ಕಡೆಯ ದಿನಾಂಕ ನಿಗದಿಯಾಗಿಲ್ಲ, ನಮ್ಮ ಸಿಬ್ಬಂದಿ ಗ್ರಾಮಗಳಲ್ಲಿ ಸಿಲಿಂಡರ್ ವಿತರಣೆಗೆ ಹೋದ ಸಂದರ್ಭದಲ್ಲಿ ಅಲ್ಲಿಯೇ ಇ-ಕೆವೈಸಿ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಈ ರೀತಿ ಜನ ನಮ್ಮ ಏಜೆನ್ಸಿಯ ಬಳಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ನೂಕುನುಗ್ಗಲು ಉಂಟುಮಾಡುತ್ತಿದ್ದಾರೆ. ಇ-ಕೆವೈಸಿ ಮಾಡಿಸಿದರೆ ಸಬ್ಸಿಡಿ ಹಣ ನೀಡುತ್ತಾರೆಂಬ ತಪ್ಪು ಮಾಹಿತಿಯಿಂದಾಗಿ ಜನ ಈ ರೀತಿ ವರ್ತಿಸುತ್ತಿದ್ದಾರೆ. ನಾವು ಸಹ ಜನರಿಗೆ ಸರಿಯಾದ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತೇವೆ.

-ಮಂಜುನಾಥ್,

ವಿಜಯಲಲಿತಾ ಗ್ಯಾಸ್ ಏಜೆನ್ಸಿ ಮಾಲೀಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಸಂಸ್ಥಾನ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ನಳಿನ್‌
ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹೆಚ್ಚಳ: ಡಾ. ಮಂತರ್ ಗೌಡ