ರಾಮನಗರ: ನಾಡೋಜ ಎಚ್.ಎಲ್ .ನಾಗೇಗೌಡ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ 2024-25ನೇ ಸಾಲಿಗೆ ಪಿಎಚ್ ಡಿ ಸಂಶೋಧನೆ ಪ್ರಾರಂಭಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.
ಕಳೆದ ಒಂದು ವರ್ಷದಿಂದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೋಮಾ ಕೋರ್ಸ್ ನಡೆಸುತ್ತಿದ್ದು, ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದ ನಿಯಮಾನುಸಾರ ಒಟ್ಟು 40 ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಈ ಕೋರ್ಸ್ಗೆ ಶಾಲಾ ಶಿಕ್ಷಕರು, ಪಿಎಚ್ ಡಿ ಸಂಶೋಧನಾರ್ಥಿಗಳು, ಎಂ.ಎ., ಪ್ರದರ್ಶನ ಕಲಾ ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಗಿರಿಜನ ಕುಟೀರ ಭಾಗ -2: ಜಾನಪದ ಲೋಕದಲ್ಲಿ ಈಗಾಗಲೇ ಗಿರಿಜನ ಕುಟೀರದ ಭಾಗ -1ರಲ್ಲಿ ಒಟ್ಟು ಐದು ಬುಡಕಟ್ಟು ಕುಟೀರಗಳು ನಿರ್ಮಾಣವಾಗಿದ್ದು, ಇದು ವೀಕ್ಷಕರ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ. ಪ್ರಸ್ತುತ ಎರಡನೇ ಹಂತದ ಕೆಲಸ ಪ್ರಗತಿಯಲ್ಲಿದ್ದು, ಸೋಲಿಗರು, ಸಿದ್ದಿಯರು, ಕಾಡುಗೊಲ್ಲರು, ಕುಣಿಬಿ ಮತ್ತು ರಾಮನಗರ ಜಿಲ್ಲೆಯ ಇರುಳಿಗ ಸಮುದಾಯಗಳ ಜೀವನ ಕ್ರಮ ಮತ್ತು ಅವರ ಕಲೆಗಳನ್ನು ಪ್ರತಿನಿಧಿಸುವ ಕಲಾ ಪ್ರತಿಮೆಗಳನ್ನು ಆಯಾ ಕುಟೀರಗಳ ಬಳಿ ಇಡಲಾಗುತ್ತಿದೆ.
ಅಲ್ಲದೇ, ಗೊಂಡರ ಧಾನ್ಯ ಸಂಗ್ರಹ ಕಣಜ, ಜೇನು ಕುರುಬರ ಮಾವುತ ಮತ್ತು ಆನೆ, ಬುಡಕಟ್ಟು ದೈವಾರಾಧನೆ ಕೇಂದರ್, ಜೊತೆಗೆ ಬುಡಕಟ್ಟುಗಳ ಕಲೆಗಳನ್ನು ಪರ್ದರ್ಶಿಸಲು ಸುಂದರ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳು 2025ರ ಫೆಬ್ರವರಿಯಲ್ಲಿ ನಡೆಯಲಿರುವ ಲೋಕೋತ್ಸವದ ವೇಳೆಗೆ ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಹಾಜರಿದ್ದರು.