ಧಾರವಾಡ: ಮನಸ್ಸನ್ನು ಏಕಾಗ್ರತೆಗೊಳಿಸಲು ಅಭ್ಯಾಸವೇ ಪ್ರಧಾನ ಸಾಧನ. ಅಭ್ಯಾಸ ಎಂದರೆ ಪ್ರತಿದಿನ ಮಾಡುವ ಪ್ರಯತ್ನ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂಧಗಿ ಹೇಳಿದರು.
ಶಿಕ್ಷಣಕಾಶಿ ಎಂದು ಕರೆಯಲ್ಪಡುವ ಧಾರವಾಡ ಜಿಲ್ಲೆಯು ಕಳೆದ ವರ್ಷ ಎಸ್ಸೆಸ್ಲೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿತ್ತು. ಈ ವರ್ಷ ಧಾರವಾಡ ಜಿಲ್ಲೆ ಉತ್ತೀರ್ಣತೆಯ ಪ್ರಮಾಣ ಹೆಚ್ಚಿಸಲು ಏನೆಲ್ಲಾ ಯೋಜನೆ ರೂಪಿಸಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿರುವ ಈ ಕಾರ್ಯಕ್ರಮ ಮಕ್ಕಳಲ್ಲಿ ಗುಣಾತ್ಮಕ ಬದಲಾವಣೆ ತರುವುದರ ಜೊತೆ ಪರೀಕ್ಷೆ ಬಗ್ಗೆ ನೈತಿಕ ಸ್ಥೈರ್ಯ ತರುತ್ತಿದೆ. ಸಂಘದ ಈ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ವಿಷಯದ ಕಡೆ ಗಮನ ಕೊಡಬೇಕು. ಅವಧಾನಿಗಳಾಗಿ ಓದಬೇಕು. ಸಂಧಿಗ್ದ ಸಮಸ್ಯೆಗಳಿದ್ದರೆ ಪ್ರಶ್ನೆ ಕೇಳುವದರ ಮೂಲಕ ಪರಿಹಾರ ಪಡೆಯಬೇಕು. ಶ್ರದ್ಧೆ ಬದ್ಧತೆಯಿಂದ ಮಾತ್ರ ಏಕಾಗ್ರತೆ ಹೊಂದಲು ಸಾಧ್ಯ ಎಂದರು.ಕರ್ನಾಟಕ ಪ್ರೌಢ ಶಾಲೆಯ ಆಡಳಿತಾಧಿಕಾರಿ ಜಿ.ಆರ್. ಭಟ್ ಮಾತನಾಡಿ, ಸ್ವಭಾವತಃ ಮನಸ್ಸು ಚಂಚಲವಾಗಿರುತ್ತದೆ. ಈ ಮನಸ್ಸನ್ನು ಕೇಂದ್ರಿಕರಿಸಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯ. ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಜ್ಞಾನದಲ್ಲಿ ಶಕ್ತಿ ಇದೆ. ಜ್ಞಾನ ಸಂಪತ್ತು ಹೌದು. ಪಠ್ಯದ ಜೊತೆ ಬೇರೆ ಆಕರ ಓದಿ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು ಎಂದು ತಿಳಿಸಿದರು.