ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನನ್ನ 40 ವರ್ಷ ಸಾರ್ವಜನಿಕ ಜೀವನದಲ್ಲಿ 1987ರಿಂದ ಅನೇಕ ಜನಪರ ಕೆಲಸ, ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರೂ ವಿ. ಶ್ರೀನಿವಾಸ ಪ್ರಸಾದ್ ಅವರು ಗಳಿಸಿದ ಹೆಸರನ್ನು ನಾನು ಗಳಿಸಲಾಗಲಿಲ್ಲ. ಬದುಕಿನ ಕೊನೆಯ ಪಯಣವೇ ಸಾವು, ಹಾಗಾಗಿ ಸಾವಿಗೂ ಮುನ್ನ ಅವರು ಮಾಡಿದ್ದ ಜನಪರ ಕಾರ್ಯಕ್ರಮ, ನಿಲುವು, ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ ಹೇಳಿದರು.ಕೊಳ್ಳೇಗಾಲದಲ್ಲಿ ಪ್ರಸಾದ್ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ಸ್ವಾಭಿಮಾನದ ದೊರೆ ಅಜರಾಮರ ಎಂಬ ಶೀರ್ಷಿಕೆಯಡಿ ಕೇಂದ್ರದ ನಾಯಕ, ಸ್ವಾಭಿಮಾನಿ ರಾಜಕಾರಣಿಗೆ ನುಡಿ ನಮನ, ಗಾನ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನ್ಮ, ಪುನರ್ಜನ್ಮ ಇಲ್ಲವೇ ಇಲ್ಲ, ಸ್ವರ್ಗ, ನರಕವೂ ಇಲ್ಲ, ಆತ್ಮವೂ ಇಲ್ಲ, ಪರಮಾತ್ಮನೂ ಇಲ್ಲ, ಶ್ರೀನಿವಾಸ ಪ್ರಸಾದ್ ಅವರ ಬಗ್ಗೆ ಮಾತನಾಡುವಾಗ ನಾವು ಇವೆಲ್ಲವನ್ನು ಅರಿತು ಮಾಡಬೇಕಿದೆ. ನಾವು ಬದುಕಿದ್ದೆವು, ಉಸಿರು ನಿಂತಿದೆ, ಮಣ್ಣಲ್ಲಿ ಮಣ್ಣಾಗುತ್ತೇವೆ, ಎಂಬುದಷ್ಟೆ ಸತ್ಯ ಎಂದರು.
ಉತ್ತರಾಧಿಕಾರಿ ಹೊಣೆ ಯಾರು?:ಪ್ರಸಾದ್ ಅವರು ನನ್ನೊಡನೆ ರಾಜಕೀಯವಾಗಿ ಒಗ್ಗೂಡಿ ಕೆಲಸ ಮಾಡಿದ್ದು 2008ರಲ್ಲಿ ಹಾಗೂ ಚಾಮುಂಡೇಶ್ವರ ಉಪಚುನಾವಣೆಯಲ್ಲಿ, ನನ್ನನ್ನು ಆಂತರಿಕವಾಗಿ ಅವರು ಇಷ್ಟಪಡುತ್ತಿದ್ದರು, ಒಮ್ಮೆ ಚುನಾವಣೆ ಪ್ರಚಾರ ವೇಳೆ ನನ್ನನ್ನು ಕತ್ತೆ ಎಂದು ಟೀಕಿಸಿದ್ದರು. ಆಗ ನಾನು ಪ್ರತಿಕ್ರಿಯೆ ಕೊಡಲೆ ಬೇಕಿತ್ತು. ಹಾಗಾಗಿ ಕತ್ತೆ ಎಷ್ಚು ಹೊರೆ ಬೇಕಾದರೂ ಹೊರತ್ತದೆ, ಅವರು ಹೆಸರುಗತ್ತೆ ಎಂದಿದ್ದೆ, ರಾಜಕಾರಣದಲ್ಲಿ ಟೀಕೆ, ಟಿಪ್ಪಣೆಗಳು ಸರ್ವೇ ಸಾಮಾನ್ಯ, ಆದರೆ ಇಂದು ಪ್ರಸಾದ್ ಅವರಿಲ್ಲ, ಅವರ ಉತ್ತರಾಧಿಕಾರಿ ಹೊಣೆ ಯಾರು ಹೊರಬೇಕು. ಅವರ ಉತ್ತರಾಧಿಕಾರಿ ಯಾರಾಗಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅವರ ಜಾಗ ತುಂಬಲು ನಮ್ಮಿಂದ ಖಂಡಿತ ಸಾದ್ಯವಾಗಲ್ಲ. ಅಂಬೇಡ್ಕರ್ ಅವರಿಗೆ ಪರ್ಯಾಯ ನಾಯಕ ಇಲ್ಲ. ಅದೇ ರೀತಿ ಪ್ರಸಾದ್ ಅವರ ಸ್ಥಾನ ತುಂಬಲು, ಉತ್ತರಾಧಿಕಾರಿಯಾಗಲು ಯಾರಿಗೂ ಸಾಧ್ಯವಿಲ್ಲ. ಒಂದು ಸಮಾಜ ಬಯಸುವುದು ನಾಯಕತ್ವದ ಗುಣ, ಅವರು ಮಾಡಿದ ಕೆಲಸಕ್ಕಿಂತ ಸಮುದಾಯದ ಜಾಗೃತಿ ಮೂಡಿಸುವ ಕಾರ್ಯಕ್ರಮ, ಅಂತಹ ಅನೇಕ ಕಾರ್ಯಕ್ರಮಗಳಿಂದ ರಾಜ್ಯಾದ್ಯಂತ ಸಮಾಜಗಳು ಒಂದಾದವು. ಅವರು ನಾಯಕತ್ವದಲ್ಲಿ ಮೇಲ್ಪಂಕ್ತಿಯಾಗಿದ್ದಾರೆ. ಅವರ ಶಕ್ತಿ ಪ್ರಬಲವಾದ ಅಂಬೇಡ್ಕರ್ ವಾದವೇ ಆಗಿತ್ತು. ಅವರ ಧ್ವನಿಯಾಗಲು, ಎತ್ತರಕ್ಕೆ ಬೆಳೆಯಲು ಇಲ್ಲಿನ ಜನರೇ ಕಾರಣ ಎಂದು ಹೇಳಿದರು.
ಬದನವಾಳು ಪ್ರಕರಣ ಅವರನ್ನು ಎತ್ತರಕ್ಕೇರುವಂತೆ ಮಾಡಿತು: ನಾನು ಮತ್ತು ಸಿದ್ದರಾಮಯ್ಯ ಅವರು ಮಾಡಿದ ಅಭಿವೃದ್ಧಿ ಕೆಲಸವನ್ನು ಪ್ರಸಾದ್ ಅವರು ಮಾಡಲಾಗಲಿಲ್ಲ, ಆದರೆ ಬದನವಾಳುವಿನ ಗಲಭೆಯಲ್ಲಿ ಅವರು ಒಂದು ಸಮಾಜದ ಪರವಾಗಿ ತೆಗೆದುಕೊಂಡ ತೀರ್ಮಾನವೆ ಅವರನ್ನು ಅತ್ಯಂತ ಎತ್ತರಕ್ಕೇರಿಸಿತು. ಕೊನೆಯ ದಿನದಲ್ಲಿ ಒಪ್ಪದ ಸಿದ್ಧಾಂತದ ಜೊತೆಗೆ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅವರಿಗೆ ಒದಗಿ ಬಂತು. ನಾನು ಪಕ್ಷಾಂತರಿಯಾಗಿದ್ದೇನೆ ಆದರೆ, ತತ್ವಾಂತರಿಯಲ್ಲ ಎಂದಿದ್ದರು. ಅವರೊಬ್ಬ ಪ್ರಜಾಪ್ರಭುತ್ವದ ವಾದಿಯಾಗಿದ್ದರು.ಈ ವೇಳೆ ಶಾಸಕ ಎ.ಆರ್. ಕೃಷ್ಣಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಮಾಜಿ ಶಾಸಕರಾದ ಆರ್ ನರೇಂದ್ರ, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ, ಎಚ್.ಕೆ. ಟ್ರಸ್ಟ್ ಅಧ್ಯಕ್ಷೆ ಪ್ರೇಮಲತ, ಡಿವೈಎಸ್ಪಿ ಮಹಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್, ಕಾರ್ಯದರ್ಶಿ ರವಿ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ರೇಖಾ ರಮೇಶ್, ಬಸ್ತಿಪುರ ಶಾಂತು, ನಗರಸಭೆ ಸದಸ್ಯ ಮಂಜುನಾಥ್, ಸುಮ ಸುಬ್ಬಣ್ಣ, ನಟರಾಜು (ಕಪೀಲ್), ಹೊಂಗನೂರು ಚಂದ್ರು, ಪುಟ್ಟಬುದ್ದಿ, ಮಾಂಬಳ್ಳಿ ನಂಜುಂಡಸ್ವಾಮಿ ಸೇರಿದಂತೆ ಅಪಾರ ಪ್ರಸಾದ್ ಅಭಿಮಾನಿಗಳಿದ್ದರು.ಇವರನ್ಯಾಕೆ ಮಂತ್ರಿ ಮಾಡಲಿಲ್ಲ
ಎಂದು ಸಿದ್ದರಾಮಯ್ಯರನ್ನು ಕೇಳಿದ್ರು..!ಸಿಎಂ ಸಿದ್ದರಾಮಯ್ಯ ಅವರ ಜೊತೆ ಶ್ರೀನಿವಾಸಪ್ರಸಾದ್ ಭೇಟಿಯಾಗಿ, ಆರೋಗ್ಯ ವಿಚಾರಿಸಲು ನಿವಾಸಕ್ಕೆ ತೆರಳಿದ ವೇಳೆ ನನ್ನನ್ನು ಕಂಡು ಕೃಷ್ಣಮೂರ್ತಿಯನ್ನೇಕೆ ನಿಮ್ಮ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿಲ್ಲ ಎಂದು ನೇರವಾಗಿ ಮುಖ್ಯಮಂತ್ರಿಗಳಲ್ಲಿ ಪ್ರಶ್ನಿಸಿದ್ದರು. ಆದರೆ ಇದಕ್ಕೆ ಸಿಎಂ ಉತ್ತರ ನೀಡಲಿಲ್ಲ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಸ್ವಾಭಿಮಾನದ ನಾಯಕ ಅಜರಾಮರ ಕಾರ್ಯಕ್ರಮದಲ್ಲಿ ವಿ ಶ್ರೀನಿವಾಸ ಪ್ರಸಾದ್ ಅವರಿಗೆ ನುಡಿ, ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನನಗೆ ಮಂತ್ರಿಯಾಗಬೇಕೆಂಬ ಹಂಬಲ ಇರಲಿಲ್ಲ, ಆದರೆ ನಾನು ಅವರು ರಾಜಕೀಯವಾಗಿ ಬೇರೆ, ಬೇರೆ ದಿಕ್ಕಿನಲ್ಲಿದ್ದರೂ ಅವರು ನನ್ನನ್ನು ಮಂತ್ರಿ ಮಾಡಿಕೊಳ್ಳಬೇಕಿತ್ತು ಎಂಬ ಉತ್ತಮ ಮಾತುಗಳನ್ನಾಡಿದ್ದರು. ನಾನು ಬಿಜೆಪಿಯಲ್ಲಿದ್ದ ವೇಳೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಪಕ್ಷದಿಂದ ಹೊರಬಂದೆ, ಅಂದು ಪಕ್ಷದಲ್ಲಿದ್ದುಕೊಂಡೆ ಅವರು ಹೇಳಿಕೆಯನ್ನು ಖಂಡಿಸಿದ್ದರು. ತುಳಿತಕ್ಕೊಳಗಾದವರ ಪರ ಗಟ್ಟಿ ಧ್ವನಿಯಾಗಿದ್ದ ಪ್ರಸಾದ್ ಬದುಕಿನ ಉದ್ದಕ್ಕೂ ಬಡವರು, ದೀನ ದಲಿತರ ಪರವಾಗಿ ಎದೆಗಾರಿಕೆಯಿಂದಲೆ ನಿಂತವರು. ಸಾಮಾಜಿಕ ನ್ಯಾಯದ ವಿಚಾರವಾಗಿ ಅವರು ಎಂದೆಂದಿಗೂ ರಾಜಿ ಮಾಡಿಕೊಂಡವರಲ್ಲ. ಅವರದ್ದು ಮೇರು ವ್ಯಕ್ತಿತ್ವ ಎಂದರು. ರಾಜಕಾರಣಿಯಾಗಿಯೇ ಇಹಲೋಕ ತ್ಯಜಿಸಿದರು. ನಮ್ಮ ಸಮುದಾಯದ ಅಭ್ಯರ್ಥಿ ಕೈಬಿಡಬಾರದೆಂದು ತೀರ್ಮಾನಿಸಿದ್ದ ಪ್ರಸಾದ್ ಅವರು ಸಂತೇಮರಳ್ಳಿ ಕ್ಷೇತ್ರದಲ್ಲಿ 1994ರಲ್ಲಿ ಸ್ಪರ್ಧಿಸಿದ್ದ ನನಗೆ ಬೆಂಬಲ ನೀಡಿದ್ದ ಅವರನ್ನು ನಾನು ಮರೆಯುವಂತಿಲ್ಲ ಎಂದರು.