ಕನ್ನಡಪ್ರಭ ವಾರ್ತೆ ತಿಪಟೂರು
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಅಮಾಯಕ ಪ್ರವಾಸಿಗರನ್ನು ಅದರಲ್ಲೂ ಹಿಂದೂಗಳೇ ಎಂದು ಖಚಿತಪಡಿಸಿಕೊಂಡೇ ಉದ್ದೇಶ ಪೂರ್ವಕವಾಗಿಯೇ ಹೆಂಡತಿ, ಮಕ್ಕಳ ಮುಂದೆಯೇ ಪುರುಷರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ದೇಶದ ಸನಾತನ ಧರ್ಮದ ವಿರುದ್ಧದ ದಾಳಿಯಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸದೆ ಹೀಗೆ ಬಿಟ್ಟರೆ ಬಹುದೊಡ್ಡ ಅಪಾಯ ತಲೆದೋರಲಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.ನಮ್ಮ ದೇಶ ಶಾಂತಿ, ಸೌಹಾರ್ದತೆ, ಬ್ರಾತೃತ್ವಕ್ಕೆ ವಿಶ್ವದಲ್ಲೇ ಹೆಸರಾಗಿದ್ದು ಎಲ್ಲಾ ಧರ್ಮದ ಜನರನ್ನು ಒಂದೇ ಎಂಬ ಭಾವನೆಯಿಂದ ನೋಡಿಕೊಂಡಿದೆ. ಇಂತಹ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಭಾರತೀಯರನ್ನು ನಿರ್ಧಯವಾಗಿ ಕೊಂದಿರುವ ಉಗ್ರರ ಅಟ್ಟಹಾಸಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಬಾಳಿ ಬದುಕಬೇಕಿದ್ದವರು ಉಗ್ರರ ಸಂಚಿಗೆ ಬಲಿಯಾಗಿದ್ದು ತೀವ್ರ ನೋವಿನ ಸಂಗತಿ. ಈ ಸನ್ನಿವೇಶ ನಮ್ಮ ದೇಶದಲ್ಲಿಯೇ ನಮಗೆ ಭಯದ ವಾತಾವರಣ ಸೃಷ್ಟಿಸುತ್ತಿದೆ. ನಮ್ಮ ಹಿಂದೂ ದೇಶದಲ್ಲಿ ನಮಗೇ ರಕ್ಷಣೆ ಇಲ್ಲವೇ ಎಂದೆನಿಸುತ್ತಿದ್ದು ಇಂತಹ ಭಯೋತ್ಪಾದನೆಯನ್ನು ನಾವು ಬೇರು ಸಮೇತ ಮಟ್ಟ ಹಾಕದಿದ್ದರೆ ಮುಂದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ದುರ್ಘಟನೆಯನ್ನು ನಮ್ಮ ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಂಡು ಪಾಕಿಸ್ತಾನ ಬೆಂಬಲಿತ ಉಗ್ರರ ಹುಟ್ಟಡಗಿಸಲು ಮಾಡಿರುವ ಶಪಥಕ್ಕೆ, ದೇಶದ ಸರ್ವ ಪಕ್ಷಗಳು, ಸಂಘಟನೆಗಳು, ಜನತೆ ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೂ ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಎಂದೂ ಮರುಕಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ವಹಿಸಬೇಕೆಂದು ಶ್ರೀಗಳು ಆಗ್ರಹಿಸಿರುವ ಶ್ರೀಗಳು ದುರ್ಘಟನೆಯಲ್ಲಿ ಹತರಾಗಿರುವ ಎಲ್ಲರಿಗೂ ತೀವ್ರ ಸಂತಾಪವ್ಯಕ್ತಪಡಿಸಿ ಅವರ ಕುಟುಂಬದ ಜೊತೆ ದೇಶದ ನಾವೆಲ್ಲರೂ ಇದ್ದೇವೆ ಎಂದು ಧೈರ್ಯ ಹೇಳಿದ್ದಾರೆ.