ಮನೆ, ಶುದ್ಧ ಕುಡಿವ ನೀರು, ವಿದ್ಯುತ್‌, ಶೌಚಾಲಯಕ್ಕೆ ಪ್ರಧಾನಿ ಆದ್ಯತೆ: ಶಾಸಕ ಜ್ಞಾನೇಂದ್ರ

KannadaprabhaNewsNetwork |  
Published : Mar 04, 2024, 01:17 AM ISTUpdated : Mar 04, 2024, 04:06 PM IST
 ಫೋಟೋ 03 ಟಿಟಿಎಚ್ 01: 9 ಕೋಟಿ ರೂ ಅನುದಾನದಲ್ಲಿ ಮಂಡಗದ್ದೆಯಲ್ಲಿ ನಿರ್ಮಾಣಗೊಳ್ಳಲಿರುವ 110/10 ಕೆವಿ ವಿದ್ಯುತ್ ಪವರ್ ಸ್ಟೇಷನ್ ಕಾಮಗಾರಿಗೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವುದಲ್ಲದೇ, ವಿದ್ಯುತ್, ಮನೆ, ಶೌಚಾಲಯ ಈ ನಾಲ್ಕೂ ಸೌಲಭ್ಯಗಳ ಕಲ್ಪಿಸಲು ಆದ್ಯತೆಗಳನ್ನು ನೀಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವುದಲ್ಲದೇ ವಿದ್ಯುತ್, ಮನೆ, ಶೌಚಾಲಯ ಈ ನಾಲ್ಕೂ ಸೌಲಭ್ಯಗಳ ಕಲ್ಪಿಸಲು ಆದ್ಯತೆಗಳನ್ನು ನೀಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಮಂಡಗದ್ದೆಯಲ್ಲಿ ನಿರ್ಮಾಣಗೊಳ್ಳಲಿರುವ ₹9 ಕೋಟಿ ಅನುದಾನದ 110/10 ಕೆವಿ ವಿದ್ಯುತ್ ಪವರ್ ಸ್ಟೇಷನ್ ಕಾಮಗಾರಿಗೆ ಶನಿವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಸಂದಿದ್ದರೂ ವಿದ್ಯುತ್ ಸೇರಿದಂತೆ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೊರತೆಯನ್ನು ನೀಗಿಸುವಲ್ಲಿ ಕೇಂದ್ರ ಸರ್ಕಾರ ಬದ್ಧತೆಯನ್ನು ಹೊಂದಿದೆ ಎಂದರು.

ಆರಂಭದಲ್ಲಿ ತಾಲೂಕಿನಲ್ಲಿ ಕೇವಲ ಒಂದೇ ಪವರ್ ಸ್ಟೇಷನ್ ಇದ್ದು, ಅದರಿಂದ ಇಡೀ ತಾಲೂಕಿಗೆ ವಿದ್ಯುತ್ ಒದಗಿಸುವ ಅನಿವಾರ್ಯತೆ ಇತ್ತು. ಪರಿಣಾಮ ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್‌ಸೆಟ್ ಮಾತ್ರವಲ್ಲದೇ, ಮನೆ ಉಪಯೋಗದ ಮಿಕ್ಸಿ ಮುಂತಾದ ಎಲೆಕ್ಟ್ರಿಕ್ ಉಪಕರಣಗಳಿಗೂ ವಿದ್ಯುತ್ ಕೊರತೆ ಇತ್ತು. 

ಅನಂತರದಲ್ಲಿ ನನ್ನ ಅವಧಿಯಲ್ಲಿ ಕಮ್ಮರಡಿ ಮತ್ತು ಕೋಣಂದೂರಿನಲ್ಲಿ ಎರಡು ಸ್ಟೇಷನ್‌ಗಳ ಮಂಜೂರು ಮಾಡಿಸಿದ್ದು, ಈ ಎರಡೂ ಸ್ಟೇಷನ್ ಆರಂಭವಾದ ನಂತರದಲ್ಲಿ ಒಂದಿಷ್ಟು ಈ ಸಮಸ್ಯೆ ಬಗೆಹರಿದಿತ್ತು ಎಂದು ತಿಳಿಸಿದರು.

ಮಂಡಗದ್ದೆ ಹೋಬಳಿಯ ಸಮಸ್ಯೆಯನ್ನು ಗಮನಿಸಿ, ಈಚೆಗೆ ಬೆಜ್ಜವಳ್ಳಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ವಿದ್ಯುತ್ ವಿತರಣಾ ಸ್ಟೇಷನ್ ಮಂಜೂರು ಮಾಡಿಸಿದ್ದು ಕಾರ್ಯರಂಭಗೊಂಡಿದೆ. 

ಆದರೆ, ಈ ಹೋಬಳಿಯಲ್ಲಿ ಶಿವಮೊಗ್ಗ ತಾಲೂಕಿನ ಗಡಿಭಾಗದವರೆಗೂ ಕೊರತೆ ಇದೆ. ಇದನ್ನು ಸರಿದೂಗಿಸುವ ಸಲುವಾಗಿ ₹9 ಕೋಟಿ ವೆಚ್ಚದಲ್ಲಿ ತಾಲೂಕಿನ ನಾಲ್ಕನೇ ಪವರ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ ಎಂದೂ ಹೇಳಿದರು.

ಮಂಡಗದ್ದೆ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಸುನಿಲ್ ಶೆಟ್ಟಿ, ತೂದೂರು ಗ್ರಾಪಂ ಸದಸ್ಯ ಮಧುರಾಜ್ ಹೆಗ್ಡೆ, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಮೆಸ್ಕಾಂ ಅಧಿಕಾರಿಗಳಾದ ಸುರೇಶ್, ಕುಮಾರಸ್ವಾಮಿ, ಪ್ರಶಾಂತ್ ಹಾಗೂ ಕೃಷ್ಣಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ