- ವಿಧಾನಪರಿಷತ್ ಪ್ರತಿಪಕ್ಷದ ನಾಯಕ ನಾರಾಯಣಸ್ವಾಮಿಗೆ ಸರ್ಕಾರಿ ಸವಲತ್ತು ನೀಡಲು ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಮೂಲ ಸವಲತ್ತು ಒದಗಿಸದೇ ವಂಚಿಸಿದೆ ಎಂದು ಆರೋಪಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಅಹಿಂದಾ ಹೆಸರಿನಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ನ ರಾಜ್ಯ ಸರ್ಕಾರ ದಲಿತರನ್ನು ಪ್ರತಿ ಹಂತದಲ್ಲೂ ಕಡೆಗಣಿಸುತ್ತಿದೆ. ಶೋಷಿತರ ರಕ್ತಹೀರುವ ಮೂಲಕ ತುಳಿತಕ್ಕೆ ಒಳಗಾಗಿಸಿ ಪರಿಶಿಷ್ಟರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕರು ಪರಿಶಿಷ್ಟರೆಂಬ ಕಾರಣಕ್ಕೆ ಅಧಿಕಾರ ಪಡೆದ ಕ್ಷಣದಿಂದ ಇಲ್ಲಿಯವರೆಗೂ ನಾರಾಯಣಸ್ವಾಮಿ ಅವರಿಗೆ ರಾಜ್ಯ ಸರ್ಕಾರ ವಾಹನ ಸೇರಿದಂತೆ ಹುದ್ದೆಗೆ ಸಲ್ಲಬೇಕಾದ ಯಾವುದೇ ಸೌಕರ್ಯ ಒದಗಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಮೌನ ಪರಿಶಿಷ್ಟರಿಗೆ ಅವಮಾನಿಸುತ್ತಿದೆ ಎಂದು ತಿಳಿಸಿದರು.ಡಾ.ಬಿ.ಆರ್.ಅಂಬೇಡ್ಕರ್ರ ಸಂವಿಧಾನಿಕ ಹುದ್ದೆಗೆ ಸವಲತ್ತು ನೀಡದೇ ರಾಜ್ಯ ಸರ್ಕಾರ ಅಗೌರವ ತೋರಿದೆ. ಶೋಷಿತರು, ದೀನ ದಲಿತರ ಉದ್ದಾರಕ್ಕೆಂದು ಭಾಷಣ ಬೀಗುವ ಮುಖ್ಯಮಂತ್ರಿಗಳು ನೈಜವಾಗಿ ಪರಿಶಿಷ್ಟರಿಗೆ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಅನೇಕ ಅವಕಾಶ ಕಲ್ಪಿಸಿ ಬೆಳವಣಿಗೆಗೆ ಸಹಕರಿ ಸಿತ್ತು ಎಂದು ಹೇಳಿದರು.ಪರಿಶಿಷ್ಟರ ಹಣವನ್ನು ಜನಾಂಗದ ಅಭಿವೃದ್ಧಿಗೆ ಬಳಸದೇ ಗ್ಯಾರಂಟಿಗೆ ಪೂರೈಸುತ್ತಿದೆ. ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ರು.ಗಳನ್ನು ನೆರೆ ರಾಜ್ಯದ ಚುನಾವಣೆಗೆ ಖರ್ಚಿಗೆ ವ್ಯಯಿಸಿ ಸಮುದಾಯಕ್ಕೆ ಮೀಸಲಿಟ್ಟ ಹಣ ದೋಚುತ್ತಿದೆ. ಅಲ್ಲದೇ ಮುಡಾ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿ ಗಳೇ ಭ್ರಷ್ಟಾಚಾರವೆಸಗಿದ್ದರೂ ಅಧಿಕಾರಕ್ಕೋಸ್ಕರ ಖುರ್ಚಿಗೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ವಿರೋಧ ಪಕ್ಷದ ಸ್ಥಾನ ಅಲಂಕರಿಸಿ ಹಾಗೂ ಪತ್ರಿಕಾಗೋಷ್ಠಿ ಮುಖಾಂತರ ರಾಜ್ಯಸರ್ಕಾರಕ್ಕೆ ಸವಲತ್ತಿಗೆ ಒತ್ತಾಯಿಸಿದರೂ ಮುಖ್ಯಮಂತ್ರಿಗಳು ಚಕಾರವೆತ್ತದಿರುವುದು ಸರಿಯಲ್ಲ. ಈ ವಿಚಾರವಾಗಿ ಇಪ್ಪತ್ತಾಲ್ಕು ಗಂಟೆಯೊಳಗೆ ನಾರಾಯಣಸ್ವಾಮಿ ಅವರಿಗೆ ಸೌಕರ್ಯ ಒದಗಿಸದಿದ್ದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಶೋಷಿತ ದಲಿತರಿಗೆ ಅನ್ಯಾಯವೆಸಗಿ ಕೀಳಾಗಿ ಕಾಣುತ್ತಿದೆ. ಕೇವಲ ದಲಿತರನ್ನು ಚುನಾವಣಾ ಆಟಿಕೆಗಳಂತೆ ಬಳಸಿಕೊಂಡಿರುವ ಕಾಂಗ್ರೆಸ್ ಸೂಕ್ತ ಸ್ಥಾನ ಒದಗಿಸದೇ ಇರುವುದಕ್ಕೆ ಮೂಲ ಉದಾಹರಣೆ ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ ಎಂದು ಹೇಳಿದರು.ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ ಅವರಿಗೆ ಶೀಘ್ರವೇ ಸವಲತ್ತು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಜಿಪಂ ಮಾಜಿ ಸದಸ್ಯ ಜೆ.ಡಿ.ಲೋಕೇಶ್, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್, ಉಪಾಧ್ಯಕ್ಷ ವೈ.ಜಿ.ಸುರೇಶ್, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ನಗರಸಭೆ ಸದಸ್ಯ ಮಣಿಕಂಠ, ಮುಖಂ ಡರಾದ ಕೊಲ್ಲಾ ಬೋವಿ, ಬೀರಪ್ಪ, ಕೃಷ್ಣಮೂರ್ತಿ, ಸಂತೋಷ್ ಕೋಟ್ಯಾನ್, ರಾಜಕುಮಾರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.14 ಕೆಸಿಕೆಎಂ 2ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಮೂಲ ಸವಲತ್ತು ಒದಗಿಸದೇ ವಂಚಿಸಿದೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.