ಚಿತ್ರದುರ್ಗ: ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳ ನಡೆ ಪ್ರಧಾನವಾಗಿರಿಸಿಕೊಂಡು ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನಲೆ ಮುಂದೂಡಿದ ಘಟನೆ ಜರುಗಿದೆ.
ಮನು ಸಂಸ್ಕೃತಿ, ಬಿಜೆಪಿ ಆರ್ಎಸ್ಎಸ್ ಜೊತೆ ಕೈ ಜೋಡಿಸಿದ್ದಾರೆ. ಚುನಾವಣೆಗೂ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆಂಬುದು ಸಂವಾದ ಸಂಘಟಕರ ಪ್ರಮುಖ ಆರೋಪ. ಹಾಗೊಂದು ವೇಳೆ ಶ್ರೀಗಳು ರಾಜಕೀಯ ಪ್ರವೇಶಕ್ಕೆ ಮುಂದಾದಲ್ಲಿ ಪೀಠ ತ್ಯಾಗ ಮಾಡಬೇಕೆಂಬುದು ಅವರ ಬೇಡಿಕೆಯಾಗಿತ್ತು.
ಸಂವಾದ ಆಯೋಜನೆ ಬಗ್ಗೆ ಎರಡು ದಿನಗಳ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಸುಳುವು ನೀಡಲಾಗಿತ್ತು. ಭಾನುವಾರ ಬೆಳಗ್ಗೆ ಸಂವಾದಕ್ಕೆ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಂತೆ ಅತ್ತ ಐದು ನೂರಕ್ಕೂ ಹೆಚ್ಚು ಮಂದಿ ಮಾದಾರಶ್ರೀ ಬೆಂಬಲಿಗರು ಎಸ್ಪಿ ಕಚೇರಿ ಮುಂಭಾಗ ಜಮಾಯಿಸಿ ಸಂವಾದಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು. ಮಾದಾರ ಶ್ರೀ ಮೇಲೆ ಅನಾವಶ್ಯವಾಗಿ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಗುರುವಿಗೆ ಕಪ್ಪು ಚುಕ್ಕೆಗೆ ಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಕೆಲಹೊತ್ತು ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಪತ್ರಕರ್ತರ ಭವನದ ಕಡೆ ಹೊರಟರು. ಲೋಕೋಪಯೋಗಿ ಕಚೇರಿ ಮುಂಭಾಗವೇ ಪೊಲೀಸರು ಮಾದಾರಶ್ರೀ ಬೆಂಬಲಿಗರ ತಡೆದರು.