ಶಿರಸಿ: ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀ ಮಠದಲ್ಲಿ ತಮ್ಮ ೩೪ನೇ ಹಾಗೂ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ ವ್ರತಾಚರಣೆಯಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಭಂಡಾರಿ ಸಮಾಜದವರ ಸಮಸ್ತ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಸಂಸಾರಿಗಳಿಗೆ ಅನೇಕ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳ ಮಧ್ಯದಲ್ಲಿ ದೇವರಲ್ಲಿ ಮನಸ್ಸಿಡುವುದು ಬಹಳ ಮುಖ್ಯ. ಸಂಸಾರದ ಸಮಸ್ಯೆಯಲ್ಲಿದ್ದರೂ ದೇವರಲ್ಲಿ ಮನಸ್ಸಿಡುವವನು ಧೀರ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದರು. ಎಲ್ಲೆಲ್ಲೋ ಓಡಾಡುತ್ತಿರುವ ಮನಸ್ಸನ್ನು ದೇವರ ಧ್ಯಾನದಲ್ಲಿ ಪೂರ್ತಿಯಾಗಿ ತೊಡಗುವ ಹಾಗೆ ಮಾಡಬೇಕು. ಸಂಸಾರ ಎನ್ನುವುದು ಒಂದು ಪ್ರವಾಹ ಇದ್ದ ಹಾಗೆ. ನಮ್ಮನ್ನು ತೇಲಿಸಿಕೊಂಡು ಹೋಗುವಂತಹ ಚಿಂತೆಗಳು ನಮ್ಮನ್ನು ಬಾಧಿಸುತ್ತ ಇರುತ್ತವೆ. ನಮ್ಮ ನಿದ್ರೆ, ಕೆಲಸಗಳಿಗೆ ಭಂಗವನ್ನು ಉಂಟುಮಾಡುತ್ತವೆ. ಈ ಪ್ರವಾಹದಲ್ಲಿ ದುರ್ಬಲ ಮನಸ್ಸಿನ ವ್ಯಕ್ತಿಗಳು ಸಿಲುಕಿಕೊಂಡು ಆಚೆ ಬರಲು ಸಾಧ್ಯವಾಗುವುದಿಲ್ಲ. ಯಾರು ಈ ಸಂಸಾರವೆಂಬ ಪ್ರವಾಹವಾದ ಎದುರು ನಿಂತು ಅದನ್ನು ಎದುರಿಸುತ್ತಾರೋ ಅವರು ಧೀರನೆನಿಸುತ್ತಾರೆ. ದೇವರಲ್ಲಿ ಮನಸ್ಸಿಡುವುದರ ಮೂಲಕ ಆ ಪ್ರಹಾವವನ್ನು ದಾಟಬೇಕು. ಅವನು ಎಲ್ಲಾ ಕಾರ್ಯದಲ್ಲೂ ಜಯಿಸುತ್ತಾನೆ ಎಂದರು.ಮನುಷ್ಯನು ತನ್ನ ಸಮಸ್ಯೆಯಿಂದ ಹೊರಗೆ ಬರುವ ಕಲೆ ಅದುವೇ ದೇವರ ಧ್ಯಾನ. ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದೇ ಸಮಸ್ಯೆಯಿಂದ ಹೊರಗೆ ಬರುವ ಉಪಾಯ ಎಂದ ಶ್ರೀಗಳು ಸಮಸ್ಯೆಯಿಂದ, ಚಿಂತೆಯಿಂದ ಹೊರಬರಲು ಇನ್ನು ಒಂದು ಸಣ್ಣ ಉಪಾಯ ಇದೆ ಎಂದು ವಿವರಿಸಿ, ಅದುವೇ ತಮಗೆ ಇಷ್ಟವಾದ ಕಲೆಯನ್ನು ಆರಾಧಿಸುವುದು. ಅನೇಕ ವರ್ಷಗಳಿಂದ ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿರುವ ಭಂಡಾರಿ ಸಮಾಜದವರು ಸಂಗೀತ ಕಲಾ ಆರಾಧಕರು. ಭಕ್ತಿಯಿಂದ ದೇವರಿಗೆ ಸೇವೆ ಸಲ್ಲಿಸುತ್ತಿದ್ದೀರಿ. ನೀವು ಈ ಸೇವೆಯಲ್ಲಿ ತೊಡಗಿದಾಗ ಸಹಜವಾಗಿಯೇ ನೀವು ಸಂಸಾರದ ಚಿಂತೆಯಿಂದ ಹೊರಗೆ ಬರುತ್ತಿರಿ. ನಿಮ್ಮ ಮನಸ್ಸು ಸಂಪೂರ್ಣವಾಗಿ ಸೇವೆಯಲ್ಲಿ ತೊಡಗಿರುತ್ತದೆ ಎಂದರು.
ಸಂಗೀತದಿಂದ ಆಕರ್ಷಣೆ ಹೊಂದದವರು ಯಾರೂ ಇಲ್ಲ. ಸಣ್ಣ ಮಗು, ಮರ- ಗಿಡಗಳು, ಪ್ರಾಣಿಗಳು ಎಲ್ಲರೂ ಕೂಡ ಇದರಿಂದ ಆಕರ್ಷಣೆಯನ್ನು ಹೊಂದುತ್ತಾರೆ. ಅನೇಕ ಪುರಾತನ ದೇವಸ್ಥಾನಗಳಲ್ಲಿ ಇಂದಿಗೂ ಈ ಸೇವೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಉತ್ಸವಾದಿಗಳಲ್ಲಿ ಇದನ್ನು ನುಡಿಸುವ ಪರಂಪರೆ ನಿಮ್ಮದು. ಹಳೆಯ ಕಾಲದ ಶೈಲಿಯಲ್ಲಿ ಇರುವ ಈ ವಾದ್ಯಗಳು ದೇವಸ್ಥಾನಗಳಲ್ಲಿ ಭಕ್ತಿಯ ವಾತಾವರಣವನ್ನು ಹೆಚ್ಚಿಸುತ್ತದೆ. ಇದೇ ರೀತಿ ಮುಂದೆಯೂ ನಿರಂತರವಾಗಿ ದೇವರಿಗೆ ನಿಮ್ಮ ಸೇವೆಯು ನಡೆದುಕೊಂಡು ಹೋಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಪರಂಪರಾಗತವಾಗಿ ಬಂದ ಭಂಡಾರಿ ಸಮಾಜದ ಪ್ರಮುಖರು ಹಾಗೂ ಹೊರ ಊರಿನ ಪ್ರಮುಖರು ವಿಶೇಷವಾಗಿ ಮಂಜಗುಣಿಯ ವಾದ್ಯ ಸೇವೆಯ ಪ್ರಮುಖರು ಶ್ರೀಮಠಕ್ಕೆ ಆಗಮಿಸಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ್ಯದ ಸಂದರ್ಭದಲ್ಲಿ ತಮ್ಮ ಸೇವೆಯನ್ನು ಉಭಯ ಶ್ರೀಗಳವರಿಗೆ ಸಲ್ಲಿಸಿದರು.