ಅಸಹಾಯಕರ ನೆರವಿಗೆ ನಿಲ್ಲುವಂತಹ ಶಿಕ್ಷಣ ನೀಡಬೇಕು

KannadaprabhaNewsNetwork |  
Published : Aug 14, 2024, 12:46 AM IST
10 | Kannada Prabha

ಸಾರಾಂಶ

ಜನಕ್ಕೆ ಕಾನೂನಿನಿಂದ ನ್ಯಾಯ ದೊರಕಿಸಿ ಕೊಡುವುದೇ ಕಾನೂನಿನ ಮುಖ್ಯ ಕೆಲಸ.

ಕನ್ನಡಪ್ರಭ ವಾರ್ತೆ ಮೈಸೂರು

ಅಸಹಾಯಕರ ನೆರವಿಗೆ ನಿಲ್ಲುವಂತಹ ಶಿಕ್ಷಣವನ್ನು ಕಾನೂನು ಕಾಲೇಜುಗಳು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಎನ್ಎಲ್ಎಸ್ಐಯು ನಿವೃತ್ತ ಕಾನೂನು ಪ್ರಾಧ್ಯಾಪಕ ಎಂ.ಕೆ. ರಮೇಶ್‌ ತಿಳಿಸಿದರು.

ವಿದ್ಯಾವರ್ದಕ ಕಾನೂನು ಕಾಲೇಜು ಮಂಗಳವಾರ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನೇತರ ಕಾರಣಗಳಿಂದಾಗಿ ವಂಚಿತರಾದ ಈ ದೇಶದ ಜನಕ್ಕೆ ಕಾನೂನಿನಿಂದ ನ್ಯಾಯ ದೊರಕಿಸಿ ಕೊಡುವುದೇ ಕಾನೂನಿನ ಮುಖ್ಯ ಕೆಲಸ. ಕಾನೂನು ಶಿಕ್ಷಣದ ಮುಖ್ಯ ಗುರಿಯೇ ವಂಚಿತರಿಗೆ ಸಾಮಾಜಿಕ ನ್ಯಾಯ ನೀಡುವುದಾಗಿದೆ ಎಂದರು.

ಸಾಮಾಜಿಕ ಅಸಮಾನತೆಗೆ ನಮ್ಮಲ್ಲಿ ನೂರಾರು ಕಾರಣಗಳನ್ನು ಕೊಡಬಹುದು; ಆದರೆ, ಕಾನೂನನ್ನು ಒಂದು ಅಸ್ತ್ರವಾಗಿ, ಒಂದು ಸಾಧನವಾಗಿ ಬಳಸುವ ಮೂಲಕ ಈ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬಹುದಾಗಿದೆ ಎಂದು ಅವರು ಹೇಳಿದರು.

ಯಾವುದೇ ಶಿಕ್ಷಣವಾಗಲಿ ಪೇ ಬ್ಯಾಕ್‌ ಟು ಸೊಸೈಟಿ ಎನ್ನುವ ತತ್ವದ ಮೇಲೆಯೇ ವಿದ್ಯಾರ್ಥಿಗಳನ್ನು ರೂಪಿಸಬೇಕು. ಕಾನೂನು ಶಿಕ್ಷಣವಂತೂ ಬರಿಯ ಹಣ ಮಾಡುವುದಕ್ಕೆ, ಅಧಿಕಾರಶಾಹಿ ಗದ್ದುಗೆ ಏರುವುದಕ್ಕೆ ಮಾತ್ರ ಸೀಮಿತ ಆಗಬಾರದು. ಕಾನೂನು ಶಿಕ್ಷಣ ಬೇರೆ, ಕಾನೂನು ಅರಿವು ಬೇರೆ ಎನ್ನುವುದನ್ನು ನಾವು ಇನ್ನಾದರೂ ಮನಗಾಣಬೇಕಿದೆ. ಕಾನೂನು ಶಿಕ್ಷಣ ಪಡೆದವರೆಲ್ಲ ಕಾನೂನಿನ ಅರಿವು ವಿವೇಚನೆ ಪಡೆದಿರುತ್ತಾರೆ ಎನ್ನುವುದು ತಪ್ಪು ಎಂದು ಅವರು ಕಿವಿಮಾತು ಹೇಳಿದರು.

ಕಾನೂನು ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಂಡಂತೆ, ಕಾನೂನು ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ವೃತ್ತಿಬದುಕಿನ ಆರಂಭದಲ್ಲಿ ಅಪಾರ ಸಂಯಮ, ತಾಳ್ಮೆಯನ್ನು ವಕೀಲಿ ವೃತ್ತಿ ಬೇಡುತ್ತದೆ. ಈ ವೃತ್ತಿಗೆ ಬರುವ ಕಾನೂನು ವಿದ್ಯಾರ್ಥಿಗಳು ಅಪಾರ ಪ್ರಯತ್ನ, ನಿರೀಕ್ಷೆ, ಪರಿಶ್ರಮ, ಶ್ರದ್ಧೆಗಳೊಂದಿಗೆ ಬರುವುದಾದರೆ ಮಾತ್ರ ಅಂಥವರಿಗೆ ಯಶಸ್ಸು ಖಚಿತ. ಇಲ್ಲಿ ಕಾಲುದಾರಿಗಿಂತಲೂ ಹೆದ್ದಾರಿಯ ಮೇಲೆ ನಡೆಯುವುದು ಹೆಚ್ಚು ಒಳ್ಳೆಯದು ಎಂದರು.

ಇದೇ ವೇಳೆ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಮೂರು ಮತ್ತು ಐದು ವರ್ಷಗಳ ಕಾನೂನು ಪದವಿಗಳ 21 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ವಿದ್ಯಾರ್ಥಿವೇತನ ನೀಡಲಾಯಿತು. 5 ವರ್ಷಗಳ ಕಾನೂನು ವ್ಯಾಸಂಗದಲ್ಲಿ ತೋರಿದ ಬಹುಮುಖ ಪ್ರತಿಭೆಯ ಆಧಾರದ ಮೇಲೆ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಸಿ. ಸುಮಂತ್‌ ಅವರಿಗೆ ವಿದ್ಯಾವರ್ಧಕ ಕಾನೂನು ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿ ಎಂದು ಗುರುತಿಸಿ ಸನ್ಮಾನಿಸಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್‌, ಆಡಳಿತ ಮಂಡಳಿ ಸದಸ್ಯ ಎಸ್. ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಆಯೋಜಕ ಡಾ.ಕೆ.ಎಲ್. ಚಂದ್ರಶೇಖರ್‌ ಐಜೂರ್‌ ಇದ್ದರು. ವಿದ್ಯಾರ್ಥಿನಿ ಐ.ಜಿ. ಸ್ವಾತಿ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ