ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅನುಭವ ಮಂಟಪದಂತೆ ಚರ್ಚೆ ಇರಬೇಕು

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಕರ್ನಾಟಕದ ನೆಲ ಅತ್ಯಂತ ಸೂಕ್ಷ್ಮವಾದುದು. ಕರ್ನಾಟಕದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಎಲ್ಲಾ ಬಂದು ಹೋಗಿದ್ದಾರೆ. ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಸಂದೇಶ ನೀಡಿದ್ದಾನೆ. ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದಾರೆ. ಇದನ್ನೆಲ್ಲಾ ತಿಳಿದು ಸಮಾಜವಾದಿ ರಾಮಮನೋಹರ ಲೋಹಿಯಾ ಅವರು ತುಂಬಾ ಮೆಚ್ಚಿಕೊಂಡಿದ್ದರು

- ದೇವರಿಗೆ ಗಡಗಡ ನಡುಗಬಾರದು: ಪ್ರಗತಿಪರ ಚಿಂತಕ ಪ್ರೊ.ನಾಗವಾರ

- ಡಾ. ಅಮ್ಮಸಂದ್ರ ಸುರೇಶ್‌ ಅವರ ಮೂರು ಕೃತಿಗಳ ಲೋಕಾರ್ಪಣೆ

---------

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪದಂತೆ ಚರ್ಚೆ ಇರಬೇಕೆ ಹೊರತು ದೇವರಿಗೆ ಗಡಗಡ ನಡುಗುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಪ್ರಗತಿಪರ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು, ಮಹಿಮಾ ಪ್ರಕಾಶನ, ವಂಶಿ ಪ್ರಕಾಶನ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಅಮ್ಮಸಂದ್ರ ಸುರೇಶ್‌ ಅವರ ಪತ್ರಕರ್ತ ಗಾಂಧಿ, ಶೋಷಣೆಗಳ ಅನ್ವೇಷಣೆ, ಅಸಮಾನತೆಯ ಉದಾರೀಕರಣ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ನೆಲ ಅತ್ಯಂತ ಸೂಕ್ಷ್ಮವಾದುದು. ಕರ್ನಾಟಕದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಎಲ್ಲಾ ಬಂದು ಹೋಗಿದ್ದಾರೆ. ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಸಂದೇಶ ನೀಡಿದ್ದಾನೆ. ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದಾರೆ. ಇದನ್ನೆಲ್ಲಾ ತಿಳಿದು ಸಮಾಜವಾದಿ ರಾಮಮನೋಹರ ಲೋಹಿಯಾ ಅವರು ತುಂಬಾ ಮೆಚ್ಚಿಕೊಂಡಿದ್ದರು ಎಂದು ಅವರು ಹೇಳಿದರು.

ಅಕ್ಷರಸ್ಥರು ಶ್ರಮಜೀವಿಗಳ ಋಣದ ಮಕ್ಕಳು ಎಂದು ವಿಶ್ಲೇಷಿಸಿದ ಅವರು, ವೈಜ್ಞಾನಿಕ ಚಿಂತನೆಯಲ್ಲಿ ಬುದ್ಧನಿಗೆ ಸರಿಸಾಟಿ ಮತ್ತೊಬ್ಬರಿಲ್ಲ. ಸಮಾನತೆಗೆ ಅತ್ಯುತ್ತಮ ನಿದರ್ಶನ ಬಸವಣ್ಣ. ನಾನು ಬುದ್ಧ, ಬಸವರನ್ನು ನೆನೆಯದ ಕ್ಷಣವೇ ಇಲ್ಲ. ಎಂದರು.

ಗಾಂಧಿ ಮತ್ತು ಅಂಬೇಡ್ಕರ್‌ ವಿಚಾರಧಾರೆಗಳನ್ನು ತುಲನಾತ್ಮಕವಾಗಿ ನೋಡಬೇಕು.ಪೆರಿಯಾರ್‌ ಕೂಡ ದೊಡ್ಡ ವ್ಯಕ್ತಿ. ಅಂಬೇಡ್ಕರ್‌ ಮತ್ತು ಲೋಹಿಯಾ ಅವರನ್ನು ಓದಿಕೊಂಡರೆ ವಿಶ್ವದ ಸಕಲ ಜ್ಞಾನವನ್ನೂ ಓದಿಕೊಂಡಂತೆ ಎಂದು ಅವರು ಹೇಳಿದರು.

ಜ್ಞಾನ ಎಂಬುದಕ್ಕೆ ಕೊನೆ ಮೊದಲಿಲ್ಲ. ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕು. ಬಸವಣ್ಣನಿಗೆ ಅಹಂಕಾರವೇ ಇರಲಿಲ್ಲ. ನಾವು ಕೂಡ ಜ್ಞಾನದ ಕಡೆ ಹೋಗೋಣ ಎಂದು ಅವರು ಕರೆ ನೀಡಿದರು.

ಕೃತಿಗಳನ್ನು ಬಿಡುಗಡೆ ಮಾಡಿದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್‌ ವಿ. ಬೆಟ್ಟಕೋಟೆ ಮಾತನಾಡಿ, ಶೈಕ್ಷಣಿಕವಾಗಿ ಪ್ರಬುದ್ಧವಾಗಿರುವ ಡಾ. ಅಮ್ಮಸಂದ್ರ ಸುರೇಶ್‌ ಅವರಿಗೂ ಜ್ಞಾನದಾಹ ಇನ್ನೂ ತೀರಿಲ್ಲ. ಸಂಗೀತ ವಿವಿಯಲ್ಲಿ ಡಿ.ಲಿಟ್‌ಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಹಲವಾರು ಕೃತಿಗಳ ರಚನೆಯಲ್ಲಿ ನಿರತರಾಗಿದ್ದಾರೆ ಎಂದರು.

ಶೈಕ್ಷಣಿಕ ಅರ್ಹತೆ ಹೊಂದಿರುವ ಡಾ.ಅಮ್ಮಸಂದ್ರ ಸುರೇಶ್‌ ಅವರು ಪ್ರಾಧ್ಯಾಪಕರಾಗಬೇಕಿತ್ತು. ಆದರೂ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಪ್ರಗತಿಪರ ವಿಚಾರಧಾರೆ, ವಿಶ್ವಮಾನವ ಸಂದೇಶವನ್ನು ಆಧಾರವಾಗಿಟ್ಟುಕೊಂಡು ಸಾಂಸ್ಕೃತಿಕ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಸಂಗೀತ ವಿವಿಯು ಸುಗಮ ಸಂಗೀತ ಮತ್ತು ಭಾವಗೀತೆಗಳ ಕಲಿಕೆಗೆ ಸಂಬಂಧಿಸಿದಂತೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಶರಣರ ವಿಚಾರಧಾರೆ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಕೃತಿಗಳನ್ನು ಕುರಿತು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್‌. ನರೇಂದ್ರ ಕುಮಾರ್‌ ಮಾತನಾಡಿ, ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ಧತೆ ಈ ಕೃತಿಗಳ ವಿಶೇಷ. ಅಸಮಾನತೆ, ದೌರ್ಜನ್ಯ, ನಿರ್ಲಕ್ಷಿತ ಸಮುದಾಯ ವಿಷಯ ವಸ್ತು ಎಂದರು.

ಎಲ್ಲಕ್ಕಿಂತ ಮಾನವೀಯತೆ ಮುಖ್ಯ. ಸಮಸಮಾಜ ಎಂದರೇ ಎಲ್ಲರನ್ನು ಸಮಾನಾಗಿ ಕಾಣುವುದು ಎಂಬುದನ್ನು ಲೇಖಕರು ಅತ್ಯಂತ ಸರಳವಾಗಿ ತಿಳಿಯಪಡಿಸಿದ್ದಾರೆ ಎಂದರು.

ಹಂಪಿ ಕನ್ನಡ ವಿವಿ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಚಿನ್ನಸ್ವಾಮಿ ಎಂ. ಸೋಸಲೆ ಮಾತನಾಡಿ, ಸಾಹಿತ್ಯ ಕೃತಿ ಯಾಕಾಗಿ, ಯಾರಿಂದ, ಯಾವ ಸಮಯದಲ್ಲಿ ಪ್ರಕಟವಾಯಿತು ಎಂಬುದು ಮುಖ್ಯವಾಗುತ್ತದೆ. ಆಗ ಮಾತ್ರ ದಲಿತರಿಗೆ ಗಾಂಧಿ ದತ್ತು ಮಗನಾ, ಅಂಬೇಡ್ಕರ್‌ ಮನೆ ಮಗನಾ? ಎಂಬುದು ಗೊತ್ತಾಗುತ್ತದೆ. ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಹೋಲಿಕೆ ಮಾಡುವಾಗ ಭಾರತ, ಭಾರತೀಯ, ಭಾರತೀಯತೆಯನ್ನು ಇಟ್ಟುಕೊಂಡು ವಿಶ್ಲೇಷಿಸಬೇಕು ಎಂದು ಸಲಹೆ ಮಾಡಿದರು.

ಗಾಂಧಿ ಪುರಾಣ ಹೇಳಿದರೆ ಅಂಬೇಡ್ಕರ್‌ ವಾಸ್ತವ ಹೇಳುತ್ತಿದ್ದರು. ಇವರಿಬ್ಬಂರ ಬೌದ್ಧಿಕ ಸಂಘರ್ಷವೇ ಅವರವರು ಆರಂಭಿಸಿದ ಪತ್ರಿಕೆಗಳ ಜೀವಾಳವಾಗಿತ್ತು. ಬಸವಣ್ಣನವರ ಕಾಲದಲ್ಲಿ ಕ್ರಾಂತಿ ಯಾಕಾಯಿತು? ಅಂತ್ಯ ಹೇಗಾಯಿತು? ಎಂಬುದನ್ನು ಗಮನಿಸಿದರೆ ಪ್ರಸ್ತುತ ನಡೆಯುತ್ತಿರುವ ಇಕ್ಕುಟ್ಟು- ಬಿಕ್ಕಟ್ಟಿನ ವಿದ್ಯಮಾನಗಳು ಗೊತ್ತಾಗುತ್ತದೆ ಎಂದರು.

ಸಂಶೋಧನಾತ್ಮಕ ಸಾಹಿತ್ಯ, ಜನಮುಖಿ ಚಿಂತನೆಗಳು ಬರಬೇಕು. ಆಗ ಮಾತ್ರ ಸಮಸಮಾಜದ ಆಶಯ ಈಡೇರುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕಸಾಪ ನಗರಾಧ್ಯಕ್ಷ ಕೆ.ಎಸ್‌. ಶಿವರಾಂ, ಪ್ರಕಾಶಾಕ ಮಾಹಿಮಾ ಶ್ರೀನಿವಾಸ್‌ ಮುಖ್ಯಅತಿಥಿಗಳಾಗಿದ್ದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಪುರುಷೋತ್ತಮ ಸ್ವಾಗತಿಸಿದರು. ಸಾಲುಂಡಿ ದೊರೆಸ್ವಾಮಿ ನಿರೂಪಿಸಿ, ವಂದಿಸಿದರು. ಹನುಮಂತಯ್ಯ ಪ್ರಾರ್ಥಿಸಿದರು. ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕಿ ಡಾ.ಏಂಜಲ್‌ ರಾಜ್‌ ಅವರ ಸಂದೇಶವನ್ನು ವಿಜಯಲಕ್ಷ್ಮಿ ಓದಿದರು.

ಜಿಲ್ಲಾ ಕಸಾಪ ಮಾಜಿ ಅದ್ಯಕ್ಷ ಡಾ.ವೈ.ಡಿ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಚೀಲೂರು ಚಂದ್ರಶೇಖರ, ಕೋಶಾಧ್ಯಕ್ಷ ಜಿ. ಪ್ರಕಾಶ್‌, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್‌, ಪ್ರೊ.ಎನ್‌. ಮಮತಾ, ಪ್ರೊ.ಜಿ. ಚಂದ್ರಶೇಖರ್‌, ಅಖಿಲ ಕರ್ನಾಟಕ ಒಕ್ಕಲಿಗರ ಸಂಘಟನೆಯ ಅಧ್ಯಕ್ಷ ಎನ್‌. ಬೆಟ್ಟೇಗೌಡ, ಡಾ.ಕೃಷ್ಣಮೂರ್ತಿ, ನಾ. ಗಂಗಾಧರಪ್ಪ, ರಾಜಶೇಖರ್‌. ನಟರಾಜ್‌, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್‌.ಎಸ್‌. ಪ್ರಕಾಶ್‌, ಉಪ್ಪಾರ ಸಂಘದ ಅಧ್ಯಕ್ಷ ಯೋಗೀಶ್‌, ವಿಶ್ವಕರ್ಮ ಸಂಘದ ಅಧ್ಯಕ್ಷ ಮೊಗಣ್ಣಾಚಾರ್‌, ಇ,ಧನಂಜಯ ಎಲಿಯೂರು. ಆರ್‌. ಲಕ್ಷ್ಮಣ್‌, ಡಾ.ಶ್ರೀನಿವಾಸ್‌ ಮೊದಲಾದವರು ಪಾಲ್ಗೊಂಡಿದ್ದರು.

Share this article