ಚನ್ನಪಟ್ಟಣ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಭವನದ ಮುಂದೆ ಜಮಾಯಿಸಿದ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ತಾಲೂಕು ಕಚೇರಿಯವರೆಗೆ ಜಾಥಾ ನಡೆಸಿ, ಅಮಿತ್ ಶಾ ಪ್ರತಿಕೃತಿ ದಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸಂಸತ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಇತ್ತೀಚೆಗೆ ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದೆ. ಅದರ ಬದಲು ದೇವರ ನಾಮಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳುವ ಮೂಲಕ ಬಾಬಾ ಸಾಹೇಬರಿಗೆ ಅಗೌರವ ತೋರಿದ್ದು, ಅವರ ಈ ಹೇಳಿಕೆ ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಕೇಂದ್ರ ಸಚಿವರಾಗಿದ್ದರೆ ಅದಕ್ಕೆ ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನವೇ ಕಾರಣ. ಅದನ್ನು ಮರೆತು ಅವರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಂವಿಧಾನದತ್ತ ಹುದ್ದೆಯಲ್ಲಿದ್ದುಕೊಂಡು ಅವರು ನೀಡಿದ ಹೇಳಿಕೆ ಖಂಡನೀಯ. ಅಮಿತ್ ಶಾ ಸಂವಿಧಾನದ ಮೌಲ್ಯಗಳು, ಅದು ನಮಗೆ ನೀಡಿರುವ ಹಕ್ಕುಗಳನ್ನು ಮರೆತಂತೆ ಮಾತನಾಡಿದ್ದಾರೆ. ಅಂಬೇಡ್ಕರ್ ನಮ್ಮ ಬದುಕು, ಭಾಷೆ, ಆತ್ಮ ಆ ಹೆಸರಿಲ್ಲದೆ ನಾವಿಲ್ಲ, ಗೃಹ ಸಚಿವರು ತಮ್ಮ ಮಾತನಿ ಮೂಲಕ ತಮ್ಮಲ್ಲಿರುವ ಮನುವಾದ ಹೊರಹಾಕಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ದಲಿತ ಹೋರಾಟಗಾರ ಸಿದ್ದರಾಮಯ್ಯ, ತಾಪಂ ಮಾಜಿ ಸದಸ್ಯ ಮತ್ತಿಕೆರೆ ಹನುಮಂತಯ್ಯ, ಮುಖಂಡರಾದ ಪಟ್ಲು ಗೋವಿಂದರಾಜು, ಭರತ್, ಪ್ರಸಾದ್, ಗಂಗಾ, ಶ್ರೀನಿವಾಸ್, ಕಿರಣ್ ಇತರರು ಉಪಸ್ಥಿತರಿದ್ದರು.ಪೋಟೊ೨೧ಸಿಪಿಟಿ೧:
ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ದಲಿತ ಸಂಘಟನೆಗಳ ಒಕ್ಕೂಟ ಮುಖಂಡರು ಅಮಿತ್ ಶಾ ಪ್ರತಿಕೃತಿ ದಹಿಸಿದರು.