ವೀರಸಾವರ್ಕರ್ ಹೆಸರಿನ ನಾಮಫಲಕವನ್ನು ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪಂಚಾಯಿತಿ ಎದುರು ಧರಣಿ ನಡೆಸಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನ ಹೆಬಳೆಯ ತೆಂಗಿನಗುಂಡಿ ಬೀಚ್ ರಸ್ತೆಗೆ ಹಾಕಲಾಗಿದ್ದ ವೀರಸಾವರ್ಕರ್ ಹೆಸರಿನ ನಾಮಫಲಕವನ್ನು ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪಂಚಾಯಿತಿ ಎದುರು ಧರಣಿ ನಡೆಸಿದರು. ಅನಧಿಕೃತವಾಗಿ ಹಾಕಲಾದ ಎಲ್ಲ ನಾಮಫಲಕ ಮತ್ತು ಕಟ್ಟಡ ತೆರವುಗೊಳಿಸಲು ಒತ್ತಾಯಿಸಿದರು.
ಆರಂಭದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಧರಣಿ ನಡೆಸಿದರು. ವಿಷಯ ತಿಳಿದು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಸಾವರ್ಕರ್ ನಾಮಫಲಕ ಮರುಸ್ಥಾಪನೆಗೆ ಅವಕಾಶ ಕೊಡಬೇಕು, ಇಲ್ಲದಿದ್ದಲ್ಲಿ ಅನಧಿಕೃತವಾದ ಎಲ್ಲವನ್ನೂ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.
ತೆಂಗಿನಗುಂಡಿ ಬಂದರ ರಸ್ತೆಗೆ ವೀರ ಸಾರ್ವಕರ ಹೆಸರಿಡುವಂತೆ 2022ರಲ್ಲಿ ಸಾರ್ವಜನಿಕರು ನೀಡಿದ ಮನವಿಯನ್ನು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 30 ಸದಸ್ಯರು ಅನುಮೋದನೆ ನೀಡಿದ್ದರು.
ಆದರೆ ಇದಕ್ಕೆ ಅಂದಿನ ಪಿಡಿಒ ಹಿಂಬರಹ ನೀಡದ ಕಾರಣ ನಾಮಫಲಕ ಹಾಕಲು ಅನುಮತಿ ಪಡೆದುಕೊಂಡಿರಲಿಲ್ಲ.
ಯಾವುದೇ ಲಿಖಿತ ದೂರುಗಳು ಪಂಚಾಯಿತಿಗೆ ಬರದೇ ಇದ್ದರೂ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೇ ಶನಿವಾರ ಏಕಾಏಕಿ ಜೆಸಿಬಿ ಯಂತ್ರ ತಂದು ನಾಮಫಲಕ ಮತ್ತು ಧ್ವಜಸ್ತಂಭ ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಮಧ್ಯೆ, ಪಿಡಿಒ ಹೆಬಳೆಯ ಜಾಮಿಯಾಬಾದ್ ರಸ್ತೆ ನಾಮಫಲಕ ತೆರವು ಮಾಡಲು ಮುಂದಾಗದೇ ಇದ್ದಾಗ, ಆಕ್ರೋಶಗೊಂಡ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ ತೆಂಗಿನಗುಂಡಿ ಬಂದರನಲ್ಲಿ ಪುನಃ ವೀರ ಸಾರ್ವಕರ ನಾಮಫಲಕ ಅಳವಡಿಸಲು ಕಟ್ಟೆಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯಲು ಯತ್ನಿಸಿದಾಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.