ಕನ್ನಡಪ್ರಭ ವಾರ್ತೆ ವಿಜಯಪುರ
ಲಾಲ್ ಬಹಾದ್ದೂರ ಜಲಾಶಯದ ಬಳೂತಿ ಜಾಕ್ವೆಲ್ ಸೇರಿದಂತೆ ಉಳಿದ ಜಾಕ್ವೆಲ್ಗಳ ನಿರ್ವಹಣೆಗೆ ಸರಕಾರ ಸಕಾಲಕ್ಕೆ ಹಣ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಯಂತ್ರೋಪಕರಣ ಕಾರ್ಯನಿರ್ವಹಣೆ ರಿಪೇರಿ ಸೇರಿದಂತೆ ಇನ್ನೂಳಿದ ನಿರ್ವಹಣೆಗಾಗಿ ಸರಕಾರ ಪ್ರತಿವರ್ಷ ಹಣ ಒದಗಿಸಬೇಕು. ಆದರೆ ಈ ವರ್ಷ ಹಣ ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತದೆ. ಇದರಿಂದ ಯಂತ್ರೋಪಕರಣಗಳ ರಿಪೇರಿ ಹಾಗೂ ಇನ್ನುಳಿದ ಕೆಲಸಗಳು ಕುಂಠಿತಗೊಳುತ್ತಿದೆ. ಒಂದು ವೇಳೆ ಸಕಾಲಕ್ಕೆ ಹಣ ಒದಗಿಸದಿದ್ದಲ್ಲಿ, ಯಂತ್ರೋಪಕರಣಗಳ ದುರಸ್ತಿ ಕಾರ್ಯ ಹಾಗೂ ಅದಕ್ಕೆ ಆಯಿಲಿಂಗ್ ಹಾಗೂ ಗ್ರಿಸ್ ಸೇರಿದಂತೆ ಉಳಿದ ರಿಪೇರಿಗಳು ಸಕಾಲಕ್ಕೆ ಮಾಡದಿದ್ದರೆ ಮೋಟಾರುಗಳು ಹಾಳಾಗುತ್ತವೆ. ಯಂತ್ರೋಪಕರಗಳು ಕೆಟ್ಟು ನಿಂತಲ್ಲಿ ಕಾಲುವೆಗಳಿಗೆ ನೀರು ಹರಿಸಲು ಕಷ್ಟವಾಗುತ್ತದೆ. ರೈತರಿಗೆ ಯಾವ ಸಂದರ್ಭದಲ್ಲಿ ನೀರು ಅಗತ್ಯವಿರುತ್ತದೆ ಎಂಬುದು ಹೇಳಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಯಂತ್ರೋಪಕರಣಗಳು ಕೆಟ್ಟರೆ ರೈತರಿಗೆ ತೊಂದರೆಯಾಗುತ್ತದೆ. ಹೊಸ ಮೋಟಾರ್ಗಳ ಬೆಲೆ ಅಂದಾಜು ಒಂದು ಕೋಟಿ ಹಣಕ್ಕಿಂತಲೂ ಮೇಲ್ಪಟ್ಟಿವೆ. ಒಂದೇ ಮೋಟಾರು ಕೆಟ್ಟರೂ ಕೋಟಿಗಿಂತಲೂ ಹೆಚ್ಚು ಹಣ ಹಾಳಾಗುತ್ತದೆ. ಈ ಮೊದಲು ಜಾಕ್ವೆಲ್ಗಳ ನಿರ್ಮಾಣ ಮಾಡಿದ ಮೆಗಾ ಕಂಪನಿಯವರ ನಿರ್ವಹಣಾ ಅವಧಿ ಮುಕ್ತಾಯಗೊಂಡಿದ್ದು, ಈಗ ಸರಕಾರವೇ ನಿರ್ವಹಣಾ ವೆಚ್ಚ ಭರಿಸಬೇಕಾಗಿದೆ. ಆದರಿಂದ ಪ್ರತಿ ವರ್ಷವೂ ಸಕಾಲಕ್ಕೆ ಅದಕ್ಕೆ ತಗುಲುವ ನಿರ್ವಹಣೆ ವೆಚ್ಚವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಮನವಿ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ನಾಗರಾಳ, ತಾಲೂಕು ಉಪಾಧ್ಯಕ್ಷ ಹೊನ್ನಕೇರಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಶಿವಪ್ಪ ಸುಂಟ್ಯಾನ, ದಾವಲಸಾಬ ನಧಾಫ್, ರಾಜೇಸಾಬ ವಾಲೀಕಾರ, ಪ್ರಭು ದಸ್ತವಾಡ, ಸಿದ್ದಪ್ಪ ಕಲಬೀಳಗಿ, ರೇವಣಸಿದ್ದ ಕೊಂಡಗೂಳಿ, ರಮೇಶ ಕೆಂಪವಾಡ, ಶ್ರೀನಿವಾಸ ಭತಗುಣಕಿ, ಎಸ್.ಜಿ.ಸಂಗೊಂದಿಮಠ, ಎನ್.ಕೆ.ಮನಗೊಂಡ, ಬಸವರಾಜ ಬಾಡಗಿ ಇತರರು ಉಪಸ್ಥಿತರಿದ್ದರು.