ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬನ್ನಿತಾಳಪುರ ಗ್ರಾಮಕ್ಕೆ ಪಿಯು ಕಾಲೇಜು, ಪಶು ಆಸ್ಪತ್ರೆ ಮಂಜೂರು ಮಾಡಿಸಲು ಪ್ರಯತ್ನಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ತಾಲೂಕಿನ ಬನ್ನಿತಾಳಪುರ ಗ್ರಾಪಂ ನೂತನ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಬನ್ನಿತಾಳಪುರ ಹಿಂದುಳಿದ ವರ್ಗ ಹೆಚ್ಚಿರುವ ಗ್ರಾಮವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಪಿಯು ಕಾಲೇಜು ಹಾಗೂ ಪಶು ಆಸ್ಪತ್ರೆ ನಿರ್ಮಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬನ್ನಿತಾಳಪುರಕ್ಕೆ ೪೦ ಲಕ್ಷ ರು. ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ನಿಮ್ಮೂರಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಅಭಿವೃದ್ಧಿಗೆ ಅನುದಾನ ನೀಡುವೆ ಎಂದರು. ದಿ.ಕೆ.ಎಸ್.ನಾಗರತ್ಮಮ್ಮ, ಅಬ್ದುಲ್ ನಜೀರ್ ಸಾಬ್, ಎಚ್.ಎಸ್.ಮಹದೇವಪ್ರಸಾದ್ ಕ್ಷೇತ್ರದಲ್ಲಿ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡಿ ಹೋಗಿದ್ದಾರೆ. ನಾನು ಕೂಡ ಅವರ ಹಾದಿಯಲ್ಲಿಯೇ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುವೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಮಹದೇವಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ಕಿಲಗೆರೆ ಪ್ರಸಾದ್, ಚಿಕ್ಕತುಪ್ಪೂರು ಕೆ.ಮಹೇಶ್, ಗ್ರಾಪಂ ಸದಸ್ಯರಾದ ಬಿ.ಎಂ.ಮಹೇಶ್, ಮಹದೇವಶೆಟ್ಟಿ, ಅಭಿಷೇಕ್, ಗ್ರಾಪಂ ಪಿಡಿಒ ಎ.ಎಂ.ಮಹೇಶ್ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.
ಪುಟ್ಟರಂಗಶೆಟ್ಟಿ ಮಂತ್ರಿ ಆಗಲಿದ್ದಾರೆಂದ ಗಣೇಶ್ ಪ್ರಸಾದ್ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂತ್ರಿಯಾಗಲಿದ್ದಾರೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭವಿಷ್ಯ ನುಡಿದಿದ್ದಾರೆ. ಪುಟ್ಟರಂಗಶೆಟ್ಟರಿಗೆ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದೆ. ಮುಂದೊಂದು ದಿನ ಮಂತ್ರಿಯಾಗಲಿದ್ದಾರೆ ಎಂದಾಗ ಸಭಿಕರೆಲ್ಲ ಕರತಾಡನ ಮಾಡಿದರು.