ದೀಪಕ್ ಅಳದಂಗಡಿ
ಬಿಸಿಲು ಧಗಧಗಿಸುತ್ತಿದೆ. ಜನತೆ ತತ್ತರಿಸಿ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ ಇದುವರೆಗೆ ಕಂಡು ಬಂದಿಲ್ಲ. ಆದರೆ ಅಚಾನಕ್ ಆಗಿ ಧೋ ಎಂದು ಮಳೆ ಸುರಿಯತೊಡಗಿದರೆ ಮಾತ್ರ ತಾಲೂಕಿನ ಹಲವಾರು ಕಡೆ ಜನಜೀವನಕ್ಕೆ ಹಾಗೂ ಸಂಚಾರಕ್ಕೆ ತೊಂದರೆಯಾಗಲಿದೆ.
ಯಾಕೆಂದರೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73 ಇದರ ಕಾಮಗಾರಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಪುಂಜಾಲಕಟ್ಟೆಯಿಂದ ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಕಾಶಿಬೆಟ್ಟು, ಉಜಿರೆ, ಮುಂಡಾಜೆ, ಚಿಬಿದ್ರೆ ಚಾರ್ಮಾಡಿ ತನಕ ಮೊದಲಿನ ಹೆದ್ದಾರಿಯನ್ನುಅಳಿಸಿ ಹೊಸತಾಗಿ ದ್ವಿಪಥವಾಗಿ ರಚನೆಯಾಗುತ್ತಿದೆ. ಇದಕ್ಕಾಗಿ ಮರಗಳನ್ನು ಕಡಿಯಲಾಗಿದೆ. ರಸ್ತೆ ಬದಿಯ ಗುಡ್ಡಗಳನ್ನು ಅಗೆದು ಹಾಕಲಾಗಿದೆ. ಏರು ತಗ್ಗುಗಳನ್ನು ಇಲ್ಲದಂತೆ ಮಾಡಲಾಗುತ್ತಿದೆ. ತಿರುವುಗಳನ್ನು ನೇರಗೊಳಿಸಲಾಗುತ್ತಿದೆ.ಮಳೆ ಬಂದರೆ ಎಲ್ಲ ಅಯೋಮಯ:
ಈಗಾಗಲೇ ಸುಮಾರು 35 ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇನ್ನೂ ಒಂದು ವರ್ಷ ಕಾಮಗಾರಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಯಾವ ರೀತಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಕಾದು ನೋಡಬೇಕಾಗಿದೆ.
2019ರಲ್ಲಿ ನೇತ್ರಾವತಿ, ಮೃತ್ಯುಂಜಯ ನದಿಗಳು ಉಕ್ಕಿ ಹರಿದು ಕಿಲ್ಲೂರು, ದಿಡುಪೆ, ಕಡಿರುದ್ಯಾವರ, ಚಾರ್ಮಾಡಿ, ನೆರಿಯ ಮೊದಲಾದ ಸುಮಾರು 10 ಗ್ರಾ.ಪಂ.ವ್ಯಾಪ್ತಿಯ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ ಭಯಾನಕ ನೆರೆ ಉಂಟಾಗಿತ್ತು. ಅಂದು ಜನಜೀವನ, ಭೂ ಪ್ರದೇಶ ಅಲ್ಲೋಲ್ಲ ಕಲ್ಲೋಲವಾಗಿತ್ತು. ರಸ್ತೆ, ಸೇತುವೆಗಳು ಜಖಂಗೊಂಡಿದ್ದವು. ಹಲವಾರು ಮನೆಗಳು ಹಾನಿಗೊಂಡಿದ್ದವು. ಸಂತ್ರಸ್ತರಿಗೆ ಸರ್ಕಾರ, ಸಂಘ ಸಂಸ್ಥೆಗಳು ಸೂಕ್ತ ಪರಿಹಾರ ನೀಡಿ ಪುನರಪಿ ಜೀವನಕ್ಕೆ ಅನುವು ಮಾಡಿಕೊಟ್ಟಿದ್ದವು. ಆದರೆ ಮಳೆಗಾಲ ಶುರುವಾದರೆ ಅಲ್ಲಿನ ಜನ ಈಗಲೂ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಅರೆಕ್ಷಣ ಭಯಭೀತರಾಗುತ್ತಾರೆ. ಆದರೆ ಅದಾದ ಬಳಿಕ ಕಳೆದ ಬಾರಿಯ ಮಳೆಗಾಲದವರೆಗೆ ಯಾವುದೇ ದುರ್ಘಟನೆ ನಡೆದಿಲ್ಲ.
ವಿಪರೀತ ಮಳೆ ಬಂದು ಹಾನಿಯಾದಲ್ಲಿ ಅದನ್ನು ನಿರ್ವಹಿಸಲು ಧರ್ಮಸ್ಥಳದಿಂದ ನಡೆಸಲ್ಪಡುವ ವಿಪತ್ತು ನಿರ್ವಹಣಾ ತಂಡ ‘ಶೌರ್ಯ’ದ ಸ್ವಯಂಸೇವಕರು ಸದಾ ಸಿದ್ಧರಿರುತ್ತಾರೆ.
ಮಳೆಗಾಲ ಆರಂಭವಾಗುವ ಮೊದಲು ಪ್ರಸ್ತುತ ಅಗೆದು ಹಾಕಿರುವ ಸ್ಥಳಗಳಲ್ಲಿ ವಾಹನ ಸವಾರರಿಗೆ ಹಾಗೂ ಪರಿಸರದ ಜನರಿಗೆ ತೊಂದರೆಯಾಗದಂತೆ ಡಾಮರೀಕರಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ಹಂತದ ಕಾಮಗಾರಿಗಳು ಡಾಮರೀಕರಣ ಪೂರ್ಣಗೊಂಡ ಬಳಿಕವೇ ಪ್ರಾರಂಭವಾಗುತ್ತವೆ
---ಗ್ರಾಹಕರಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಯುತ್ತಿದೆ. ಇದೀಗ ಮೊದಲ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿರುವ ಅಗತ್ಯ ಸ್ಥಳಗಳಲ್ಲಿ ವಿದ್ಯುತ್ ಕಂಬ ಸ್ಥಳಾಂತರ ನಡೆಯುತ್ತಿದ್ದು ಇದು ಹಂತ ಹಂತವಾಗಿ ಮುಂದುವರೆಯಲಿದೆ. ವಿದ್ಯುತ್ ಟವರ್ಗಳ ಸ್ಥಳಾಂತರ ಮುಂದಿನ ದಿನಗಳಲ್ಲಿ ನಡೆಯಲಿದೆ