ಪುತ್ತಿಗೆ ಮಠಾಧೀಶರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ

KannadaprabhaNewsNetwork |  
Published : Jan 06, 2024, 02:00 AM IST
ಫೋಟೋ: ೫ಪಿಟಿಆರ್-ಸ್ವಾಮೀಜಿಸ್ವಾಮೀಜಿಗಳಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ನಡೆಯಿತು. | Kannada Prabha

ಸಾರಾಂಶ

ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ನೆರವೇರಿತು,

ಕನ್ನಡಪ್ರಭ ವಾರ್ತೆ ಪುತ್ತೂರುಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಗುರುವಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಶ್ರೀಗಳ ಸಂಕಲ್ಪದಂತೆ ಆತ್ಮೋದ್ಧಾರ ಮತ್ತು ಲೋಕ ಕಲ್ಯಾಣಾರ್ಥ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಕಾರ್ಯಕ್ರಮವೂ ನಡೆಯಿತು. ಸ್ವಾಮೀಜಿಗಳು ಸಾಂಕೇತಿವಾಗಿ ಭಗವದ್ಗೀತೆಯ ಪುಸ್ತಕ ಮತ್ತು ದೀಕ್ಷೆಯನ್ನು ನೀಡಿದರು.

ಪುತ್ತೂರು ಪೌರ ಸನ್ಮಾನ ಸಮಿತಿಯಿಂದ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಿ, ಭಗವಂತನ ಅನುಗ್ರಹಕ್ಕಾಗಿ ನಾವೆಲ್ಲ ದೇವರ ಪೂಜೆ ಸೇವೆ ಮಾಡಬೇಕು. ಆದರೆ ಭಗದ್ಗೀತೆಯ ಮೂಲಕ ನಾವು ಗರಿಷ್ಟ ಪ್ರಮಾಣದ ಅನುಗ್ರಹ ಪಡೆಯಬಹುದು. ಶ್ರೀ ಕೃಷ್ಣನ ಅನುಗ್ರಹ ಬೇಕಾದರೆ ಶ್ರೀ ಕೃಷ್ಣನಿಗೆ ಪ್ರೀತಿಯಾಗಬೇಕು. ಕೃಷ್ಣನಿಗೆ ಪ್ರೀತಿಯಾಗಬೇಕಾದರೆ ಗೀತೆಯನ್ನು ಪಠಣ ಮಾಡಬೇಕು ಎಂದರು.

ಬಹಳ ಜನರು ನನ್ನ ಪ್ರೀತಿಗಾಗಿ ಪ್ರಯತ್ನಿಸುತ್ತಾರೋ ಆ ಎಲ್ಲ ಮಾರ್ಗಗಳಿಗಿಂತಲೂ ಶ್ರೇಷ್ಠವಾದ ಮಾರ್ಗ ನನ್ನ ಗೀತೆಯನ್ನು ಯಾರು ಓದುತ್ತಾರೋ ಅವರಷ್ಟು ಇಷ್ಟರಾಗುವವರು ನನಗೆ ಬೇರೆ ಯಾರು ಇಲ್ಲ. ಅವನಿಗೆ ನಾನು ಸಂಪೂರ್ಣ ಅನುಗ್ರಹ ಮಾಡುತ್ತೇನೆ ಎಂದು ಶ್ರೀ ಕೃಷ್ಣನೇ ಗೀತೆಯ ಕೊನೆಯಲ್ಲಿ ಘೋಷಣೆ ಮಾಡಿದ್ದಾನೆ. ಹಾಗಾಗಿ ನಾವೆಲ್ಲ ಶ್ರೀಕೃಷ್ಣ ಅನುಗ್ರಹಕ್ಕಾಗಿ ಮಾಡುವ ಸೇವೆ ಪರಿಪೂರ್ಣವಾಗಿ ದೊರಕುವುದು ಭಗದ್ಗೀತೆಯ ಮೂಲಕ ಎಂದು ಅರ್ಥೈಸಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಾವು ನಮ್ಮ ೪ನೇ ಪರ್ಯಾಯವನ್ನು ಭಗದ್ಗೀತಾ ಪರ್ಯಾಯ ಎಂದು ನಾಮಕರಣ ಮಾಡಿದ್ದೇವೆ. ಯಾರು ಗೀತೆಯನ್ನು ಪಠಿಸುತ್ತಾರೋ ಅವರೆಲ್ಲರು ಶ್ರೀ ಕೃಷ್ಣನ ವಿಶೇಷ ಅನುಗ್ರಹ ಪಡೆಯುವಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಮ್ಮ ಪರ್ಯಾಯ ಇಡಿ ಜಗತ್ತಿಗೆ ಕೃಷ್ಣನ ಅನುಗ್ರಹ ದೊರಕುವಂತೆ ಮಾಡಬೇಕೆಂಬ ಉದ್ದೇಶದಿಂದ ಇಡಿ ಜಗತ್ತಿಗೆ ಗೀತೆಯ ಮೂಲಕ ಅನುಗ್ರಹವಾಗಲಿ ಎಂದು ಹೇಳಿದರು.

ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆ ವೈಯಕ್ತಿಕವಲ್ಲ. ಜಗದ್ಗುರು ಶ್ರೀ ಮಧ್ವಾಚಾರ್ಯರು ಜಗತ್‌ ಕಲ್ಯಾಣಕ್ಕಾಗಿ ಉಡುಪಿಯಲ್ಲಿ ನಿರಂತರ ಕೃಷ್ಣನ ಆರಾಧನೆ ನಡೆಯಬೇಕೆಂದು ಏನು ವ್ಯವಸ್ಥೆ ಮಾಡಿದ್ದಾರೋ ಅಂತಹ ವ್ಯವಸ್ಥೆಯನ್ನು ಚೆನ್ನಾಗಿ ನಡೆದರೆ ಲೋಕಕಲ್ಯಾಣ ಆಗುತ್ತದೆ. ಆದ್ದರಿಂದ ಅಂತಹ ಲೋಕಕಲ್ಯಾಣಾರ್ಥವಾದ ಪೂಜೆಯನ್ನು ಎಲ್ಲರೂ ಸೇರಿ ಮಾಡಿದರೆ ಅದಕ್ಕೆ ವಿಶೇಷವಾದ ಅರ್ಥ ಬರುತ್ತದೆ. ವಿಶ್ವದ ಎಲ್ಲ ಭಕ್ತರು ಸೇರಿ ಮಾಡಬೇಕೆಂದು ಎಂಬ ಉದ್ದೇಶದಿಂದ ವಿಶ್ವಗೀತಾ ಪರ್ಯಾಯ ಮಾಡಿದ್ದೇವೆ. ದೇವತಾರಧನೆ ಎಷ್ಟು ಜಾಸ್ತಿ ನಡೆಯುತ್ತದೆಯೋ ಅಷ್ಟು ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಚ್. ಮಾಧವ ಭಟ್ ಅಭಿವಂದನಾ ಭಾಷಣ ಮಾಡಿದರು.

ಪೌರ ಸನ್ಮಾನ- ನಿಧಿ ಸಮರ್ಪಣೆ

ಪರ್ಯಾಯ ಪೀಠ ಏರಲಿರುವ ಶ್ರೀ ಡಾ.ಸುಗುಣೇಂದ್ರ ತೀರ್ಥರನ್ನು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಪೌರ ಸನ್ಮಾನ ಸಮಿತಿಯಿಂದ ಪೇಟ, ಮಾಲೆ ಮತ್ತು ಸನ್ಮಾನ ಪತ್ರ ಫಲವಸ್ತು ನೀಡಿ ಗೌರವಿಸಲಾಯಿತು. ಎ.ಅವಿನಾಶ್ ಕೊಡೆಂಕಿರಿ ಅವರು ಸನ್ಮಾನ ಪತ್ರ ವಾಚಿಸಿದರು. ಸನ್ಮಾನದಲ್ಲಿ ಸುಮಾರು ೧.೭೫ ಲಕ್ಷ ರು. ನಿಧಿ ಸಮರ್ಪಣೆ ಮಾಡಲಾಯಿತು.

ಸಮಿತಿ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಭಾಸ್ಕರ್ ಬಾರ್ಯ, ಕಾರ್ಯದರ್ಶಿ ಮಹಾಬಲ ರೈ ವಳತ್ರಡ್ಕ, ಕೋಶಾಧಿಕಾರಿ ಶ್ರೀಧರ್ ಬೈಪಾಡಿತ್ತಾಯ, ಸದಸ್ಯರಾದ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿ ನಿರ್ದೇಶಕ ಡಾ.ಭಾಸ್ಕರ ಎಸ್, ದಿವಾಕರ ಆಚಾರ್ಯ ಗೇರುಕಟ್ಟೆ, ಉಪಾಧ್ಯಕ್ಷ ಚಂದ್ರಶೇಖರ್ ಆಳ್ವ ಅತಿಥಿಗಳನ್ನು ಗೌರವಿಸಿದರು. ರೇಣುಕಾ ಕಲ್ಲೂರಾಯ ಪ್ರಾರ್ಥಿಸಿದರು.

ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ವಂದಿಸಿದರು. ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಂದ ಶ್ರೀಗಳಿಗೆ ಗೌರವ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾ ಲೇಖನ ದೀಕ್ಷೆಯನ್ನು ಸಾಂಕೇತಿಕವಾಗಿ ಪುಸ್ತಕ ನೀಡುವ ಮೂಲಕ ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ