ಕನ್ನಡಪ್ರಭ ವಾರ್ತೆ ಬಂಗಾರಪೇಟೆಶಿಕ್ಷಣ ವ್ಯಾಪಾರೀಕರಣವಾಗಿದ್ದು, ಹಣ ಇರುವವರಿಗೆ ಮಾತ್ರ ಗುಣಮಟ್ಟ ಶಿಕ್ಷಣ ಸಿಗುತ್ತಿದೆ. ಹಣವಿಲ್ಲದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಕಾರಮಾನಹಳ್ಳಿ ಗರಿಕೆ ಸಾಂಸ್ಕೃತಿಕ ಕೇಂದ್ರದಲ್ಲಿ ನಾಟಕ ಪ್ರದರ್ಶನ ಹಾಗೂ ಪಾಠಶಾಲೆ ತರಗತಿ ಉದ್ಘಾಟಿಸಿ ಮಾತನಾಡಿ, ಆಧುನಿಕತೆ ಬೆಳೆಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ವ್ಯಾಪಾರ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಹಣವಿಲ್ಲದೆ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.ಗ್ರಾಮೀಣರು ಬದುಕುದು ಕಷ್ಟ
ಗ್ರಾಮೀಣ ಭಾಗದ ಜನ ಇಷ್ಟು ದಿನ ಹಸು ಕುರಿ ಸಾಕಿಕೊಂಡು, ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ದಿನ ಕಳೆಯುತ್ತಿದ್ದರು. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಬಡತನ, ಬರಗಾಲ ಹಾಗೂ ಮನುಷ್ಯ ಹಸಿವಿನಿಂತ ಸಾಯುವಂತಹ ಸಂದರ್ಭಗಳನ್ನು ಸರ್ಕಾರಗಳು ಅವರ ಲಾಭಕ್ಕೆ ಸೃಷ್ಟಿ ಮಾಡುತ್ತವೆ ಎಂದರು. ಮಕ್ಕಳಿಗೆ ಒಳ್ಳೆ ಬಟ್ಟೆ ಹಾಗೂ ಪೌಷ್ಟಿಕ ಆಹಾರ ನೀಡುವಂತೆ ಅದಕ್ಕಿಂತಲೂ ಹೆಚ್ಚಾಗಿ ಮನಸ್ಸಿಗೆ ಮತ್ತು ಮೆದುಳಿಗೆ ಗಟ್ಟಿತನ ಕೊಡಬೇಕಾಗುತ್ತದೆ. ಆದರೆ ಶಿಕ್ಷಣದಿಂದ ಅದು ಸಿಗುತ್ತಿಲ್ಲ. ಗರಿಕೆ ಸಾಂಸ್ಕೃತಿಕೆ ಕೇಂದ್ರದಲ್ಲಿ ಮುಂದಿನ ಪೀಳಿಗೆಗಳನ್ನು ಸಜ್ಜು ಮಾಡುವಂತಹ ಶಿಕ್ಷಣದ ಮಾದರಿ ಸಿಗುತ್ತಿದೆ. ಇಲ್ಲಿ ಕಲಿಯುತ್ತಿರುವಂತಹ ಮಕ್ಕಳು ಪ್ರಪಂಚವೇ ತಿರುಗಿ ನೋಡುವಂತಹ ಮಕ್ಕಳಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಮಕ್ಕಳಿಗೆ ಪುಸ್ತಕ ಕೊಡಿಸಿ
ಪ್ರತಿ ಭಾನುವಾರ ಅಂಗಡಿಯಿಂದ ಮಾಂಸವನ್ನು ತರುತ್ತೇವೆ ಎನ್ನುತ್ತಾರೆ. ಆದರೆ ಮಗುವಿಗಾಗಿ ಒಂದು ಪುಸ್ತಕ ತರುತ್ತೇವೆ ಎನ್ನುವವರು ಯಾರೂ ಇಲ್ಲ. ಅಂತಹ ದಿನಗಳು ಬರಬೇಕು ಎಂದರು. ಇದೇ ವೇಳೆ ಮಕ್ಕಳಿಂದ ಗಾದೆ ಗುರ್ರಕ್ಕೆ ಎಂಬ ನಾಟಕ ಪ್ರದರ್ಶಿಸಿದರು. ಚಿಂತಕ ದೊಡ್ಡಿ ನಾರಾಯಣಸ್ವಾಮಿ, ಉಪನ್ಯಾಸಕಿ ಜಯಶ್ರೀ, ಗರಿಕೆ ಕೇಂದ್ರದ ಕಿರಣ್, ಮಂಜುನಾಥ ಇದ್ದರು.