ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ಅಗತ್ಯ

KannadaprabhaNewsNetwork | Published : May 20, 2024 1:38 AM

ಸಾರಾಂಶ

ಪದವಿ ಹಂತದ ವಿದ್ಯಾರ್ಥಿಗಳ ವಿಷಯಗಳಲ್ಲಿನ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ನೀಡುವುದು ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಪದವಿ ಹಂತದ ವಿದ್ಯಾರ್ಥಿಗಳ ವಿಷಯಗಳಲ್ಲಿನ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ನೀಡುವುದು ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಂಥನ ಸಭಾಂಗಣದಲ್ಲಿ ‘ಕಲಿಕೆ ಜೊತೆಗೆ ಕೌಶಲ್ಯ’ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ನಾತಕ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ರೂಪಿಸಿರುವ ವೃತ್ತಿ ಕೌಶಲ್ಯ ಯೋಜನೆ ನಾಲ್ಕು ವರ್ಷಗಳಲ್ಲಿ ಕಾರ್ಯಗತಗೊಳ್ಳಲಿದೆ.

ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಯೋಜಕರು ವಿದ್ಯಾರ್ಥಿಗಳ ಮಾಹಿತಿಯನ್ನು ಪಾಲುದಾರಿಕೆ ಸಂಸ್ಥೆ ಹಾಗೂ ಕೈಗಾರಿಕೆಗಳಿಗೆ ಒದಗಿಸಬೇಕು. ವಿವಿಧ ಸಂಸ್ಥೆಗಳಿಗೆ ಅಗತ್ಯವಿರುವ ವೃತ್ತಿ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ಬೆಳೆಸಬೇಕು. ಆಧುನಿಕ ತಂತ್ರಾಂಶಗಳ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ಡೇಟಾಗಳನ್ನು ಕೈಗಾರಿಕೆಗಳ ಸಹಭಾಗಿದರರಿಗೆ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕು ಎಂದ ಅವರು ‘ಹೇಳುವುದು ಎಲ್ಲಾ ಮುಗಿದಿದೆ; ಮಾಡುವುದು ಬಾಕಿ ಇದೆ’ ಎಂಬ ಸಿದ್ದೇಶ್ವರ ಸ್ವಾಮಿಗಳ ಮಾತನ್ನು ನೆನಪಿಸಿಕೊಂಡರು.

ಕಾಲೇಜು ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಡಾ. ನಾಗೇಶ್ ಮಾತನಾಡಿ, ಸ್ನಾತಕ ವಿಷಯಗಳಾದ ಬಿಎ, ಬಿಎಸ್ಸಿ ಮತ್ತು ಬಿಕಾಂ ಆರನೇ ಸೆಮಿಸ್ಟರನಲ್ಲಿ ಆಂತರಿಕ ವೃತ್ತಿ ತರಬೇತಿಯನ್ನು ಅಳವಡಿಸಿದೆ. ಪದವಿಗೆ ಸಂಬಂಧಿತ ಕೌಶಲ್ಯ ತರಬೇತಿಗೆ ಒತ್ತು ನೀಡಲಾಗುತ್ತದೆ, ಮಾರ್ಕೆಟಿನಲ್ಲಿ ಅವಶ್ಯಕವಿರುವ ಹುದ್ದೆಗಳಿಗೆ ತಕ್ಕಂತೆ ಕೌಶಲ್ಯ ಜ್ಞಾನ ವೃದ್ಧಿಸಿಕೊಳ್ಳಬಹುದು. ಇದರ ಜೊತೆಗೆ ಸ್ವಂತ ಬುಸಿನೆಸ್ ಸಹ ಕೈಗೊಳ್ಳಬಹುದು. ವಿವಿಧ ಇಂಡಸ್ಟ್ರಿ ಪಾರ್ಟ್ನರ್ಸ್ ನವರ ಸಹಕಾರದೊಂದಿಗೆ ವಿವಿಧ ಕ್ಷೇತ್ರದ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಇದರಿಂದ ಕೌಶಲಗಳನ್ನು ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿನ ವಿವಿಧ ಹುದ್ದೆಗಳ ಅವಕಾಶ ಹೆಚ್ಚಾಗುತ್ತದೆ.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಸಿ ಕೋರ್ಸ್ ಮ್ಯಾಪಿಂಗ್ ಮಾಡಲಾಗುತ್ತದೆ. ಕೋರ್ಸ್ ತರಬೇತಿಗೆ ಥಿಯರಿ ಜೊತೆಗೆ ಪ್ರಾಕ್ಟಿಕಲ್ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವಂತಹ ವಿವಿಧ ಸಾಫ್ಟ ವೇರ್ ತರಬೇತಿ ನೀಡಲಾಗುತ್ತದೆ. ಈ ಕೌಶಲ್ಯ ಕ್ರೆಡಿಟ್ ಗಳನ್ನು ಹೊಂದಿದ್ದು ಕರಿಕುಲಂ ಅಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರ ಮಾಹಿತಿಯನ್ನು ಯುಯುಸಿಎಂಎಸ್ ನಲ್ಲಿ ಮ್ಯಾಪ್ ಆಗುತ್ತದೆ. ಈ ಕಲಿಕೆ ಜೊತೆಗೆ ಕೌಶಲ್ಯ ಕಾರ್ಯಕ್ರಮವನ್ನು ಮೊದಲ ಬಾರಿಗೆ ತುಮಕೂರು ದಾವಣಗೆರೆ ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗುತ್ತಿದೆ. ಈ ಬಾರಿ ನಾಲ್ಕು ಜಿಲ್ಲೆಗಳ ಎಲ್ಲಾ ಪ್ರಥಮ ದರ್ಜೆ ಕಾಲೇಜ್ ಗಳು ಒಳಗೊಂಡು 29,000 ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 7,200 ವಿದ್ಯಾರ್ಥಿಗಳು ಕೌಶಲ್ಯ ತರಬೇತಿಯ ಲಾಭ ಪಡೆಯಲಿದ್ದಾರೆ. ಕಾರ್ಯಗಾರದಲ್ಲಿ ಹಾಜರಿದ್ದ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಯೋಜಕರು ಇಂಡಸ್ಟ್ರಿ ಪಾರ್ಟ್ನರ್ ಜೊತೆಗೆ ಸಂವಹನ ಮಾಡಿ ತಮ್ಮ ಕಾಲೇಜಿನ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಡೇಟಾ ಒದಗಿಸಿಕೊಡಬೇಕು ಎಂದು ವಿವರಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಗೊಳ್ಳೆ ಶಿವಶರಣ ಬಿ ಮಾತನಾಡಿದರು. ಕಾರ್ಯಾಗಾರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು, ಸಂಯೋಜಕರು, ಕೌಶಲ್ಯ ತರಬೇತಿದಾರರು, ರಾಜ್ಯದ ವಿವಿಧ ಕೈಗರಿಕೊದ್ಯಮಿಗಳು, ಕೈಗಾರಿಕೆಗಳ ಪಾಲುದಾರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ. ಆರ್. ಎಲ್. ರಾಯಬಾಗ್ಕರ್, ಕಾಲೇಜು ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಪ್ರೊ. ಮಣಿಕಂದನ್, ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಪ್ರಾದೇಶಿಕ ಕಚೇರಿಯ ವಿಶೇಷಾಧಿಕಾರಿ ಡಾ. ಬಿ. ಸರೋಜಾ ಹಾಗೂ ಡಾ. ಸೂರ್ಯಕಾಂತ್ ಉಮ್ಮಪುರೆ ಉಪಸ್ಥಿತರಿದ್ದರು.

Share this article