ಕಳೆದ ಎರಡು ಬಾರಿ ಗೆದ್ದರೂ ಬಿ.ವೈ.ರಾಘವೇಂದ್ರ ಅವರನ್ನು ರಾಘಣ್ಣ ಎಂದೇ ಜನ ಕರೆಯುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಿಕೊಡುವ ಮೂಲಕ ಕೇಂದ್ರದ ಮಂತ್ರಿಯನ್ನಾಗಿಸಿ ಅವರನ್ನು ಸಾಹೇಬರು ಎಂದು ಕರೆಯುವಂತೆ ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಶಿವಮೊಗ್ಗ ಬಿಜೆಪಿ ಸಮಾವೇಶದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಕಳೆದ ಎರಡು ಬಾರಿ ಗೆದ್ದರೂ ಬಿ.ವೈ.ರಾಘವೇಂದ್ರ ಅವರನ್ನು ರಾಘಣ್ಣ ಎಂದೇ ಜನ ಕರೆಯುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಿಕೊಡುವ ಮೂಲಕ ಕೇಂದ್ರದ ಮಂತ್ರಿಯನ್ನಾಗಿಸಿ ಅವರನ್ನು ಸಾಹೇಬರು ಎಂದು ಕರೆಯುವಂತೆ ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಕರೆ ನೀಡಿದರು. ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಹುಡಗನಿಗೆ ಬುದ್ಧಿ ಬರಲ್ಲ, ಸಿಗಂದೂರು ಸೇತುವೆ ಆಗಲ್ಲ ಎಂದು ನಮ್ಮಲ್ಲಿ ಯಾವಾಗಲು ಒಂದು ಗಾದೆಮಾತು ಹೇಳುತ್ತಾರೆ. ಇದನ್ನು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಸುಳ್ಳು ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದಿಂದ ಅವರು ಸಂಸದರಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇನ್ನಷ್ಟು ಅಭಿವೃದ್ಧಿಪಡಿಸಲು ರಾಘವೇಂದ್ರ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ ರಾಘವೇಂದ್ರ ಸೇರಿದಂತೆ ರಾಜ್ಯದ ಎನ್.ಡಿ.ಎ. ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ಇದಕ್ಕೆ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
- - - ಬಾಕ್ಸ್-2
ದೇಶ ಮೊದಲು ಎಂದ ಮೊದಲ ಪಾರ್ಟಿ ಬಿಜೆಪಿ: ಚನ್ನಬಸಪ್ಪ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ದೇಶ ಮೊದಲು ಎಂದ ಮೊದಲ ಪಾರ್ಟಿ ಬಿಜೆಪಿ. ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿ ಪರ ವಿಚಾರ ಬಿಜೆಪಿ ವಿಚಾರವಾಗಿದೆ. ರಾಷ್ಟ್ರೀಯತೆಗೆ ಅಪಮಾನ ಆದರೆ ಅದನ್ನು ಸಹಿಸದ ರೀತಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮುವಾದಿಗಳಿಗೆ ಒಂದು ಶಕ್ತಿ ಬಂದಿದೆ. ರಾಷ್ಟ್ರ ಉಳಿಸುವ ಪಕ್ಷದ ಅಧಿಕಾರದಲ್ಲಿ ಇರಬೇಕೇ ಹೊರತು, ಕೋಮುಗಲಭೆ ಕುಮ್ಮಕ್ಕು ಕೊಡುವ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ರಾಷ್ಟ್ರಭಕ್ತ ನಗರ ಶಿವಮೊಗ್ಗ. ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕಿದ್ದು ಶಿವಮೊಗ್ಗವೇ. ಇಲ್ಲಿ ಸಂಸದರಿಂದ ಕೇವಲ ಅಭಿವೃದ್ಧಿ ಮಾತ್ರ ಆಗಿಲ್ಲ. ಹಿಂದೂ ಧರ್ಮ ಕೂಡ ಉಳಿದಿದೆ. ಆತಂಕವಾದಿಗಳು ಮೂಲೆ ಸೇರಿದ್ದಾರೆ. ಭಯೋತ್ಪಾದನೆಗೆ ಶಿವಮೊಗ್ಗದ ಆತಂಕವಾದಿಗಳಿಗೆ ಬೆಂಬಲ ನೀಡಿದ್ದೇ ಕಾಂಗ್ರೆಸ್. ಆದರೆ, ಅದನ್ನು ಬಗ್ಗುಬಡಿದಿದ್ದು ಬಿಜೆಪಿ ಸರ್ಕಾರ ಎಂದರು.
ಶಿವಮೊಗ್ಗ: ಶ್ರೀರಾಮ ಮಂದಿರ ನಿರ್ಮಾಣ ಮಾಡಿದಾಗ ಕಾಂಗ್ರೆಸ್ನವರು ರಾಮ ದೇವರಲ್ಲ, ಕಾಲ್ಪನಿಕ ಕಲ್ಪನೆ ಅಷ್ಟೇ ಎಂದರು. ಕೊನೆಗೆ ಆ ರೀತಿ ಹೇಳಿದ್ದ ಸಿದ್ದರಾಮಯ್ಯ ಅವರೇ ಜೈ ಸೀತಾರಾಮ ಎಂದು ಹೇಳಿದ್ದಾರೆ. ಇದೇ ಮೋದಿಶಕ್ತಿ ಎಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಅಭ್ಯರ್ಥಿ ಹೇಳಿದರು.ನಗರದ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ರಾಜ್ಯದಲ್ಲಿ ಬರಗಾಲ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರ ₹324 ಕೋಟಿ ಬರ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಕೇಂದ್ರದ ಅನುದಾನವೇ ಹೆಚ್ಚಿದೆ ಎಂದರು.
ಈ ಬಾರಿ ಹಿಂದು ವಿರೋಧಿಗಳನ್ನು ಅಧಿಕಾರದಿಂದ ದೂರವಿಟ್ಟು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಇದಕ್ಕಾಗಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕತರು ಶ್ರಮ ಹಾಕಬೇಕು ಎಂದು ಕರೆ ನೀಡಿದರು.- - - (-ಫೋಟೋ: ಹಾಲಪ್ಪ ಹರತಾಳು)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.