ಆರ್. ಸುಬ್ರಮಣಿ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಬಂದಿದೆ. ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಭಾಗದ ಕರಡಿಗೋಡು ಗುಹ್ಯ ಬೆಟ್ಟದಕಾಡು ಕುಂಬಾರ ಗುಂಡಿಯಂತಹ ನದಿ ತಟದ ಪ್ರದೇಶಗಳಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.
ಕರಡಿಗೋಡು ರಸ್ತೆ ಮೇಲೆ ನೀರು: ಕರಡಿಗೋಡು ಹೊಳೆಕರೆ ರಸ್ತೆಯಲ್ಲಿ ನೀರು ಬಂದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ನದಿ ದಡದಲ್ಲಿರುವ ಮನೆಗಳ ಸಮೀಪ ಕೂಡ ನೀರು ಬಂದಿದೆ. ಸದ್ಯ ಈ ಭಾಗದಲ್ಲಿ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ. ಕಂದಾಯ ಇಲಾಖೆ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ನೀಡಿದೆ. ಸದ್ಯಕ್ಕೆ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ ಎಂಬ ಮಾಹಿತಿ ಕಂದಾಯ ಅಧಿಕಾರಿಗಳಿಂದ ಬಂದಿದೆ.ನದಿ ದಡದ ನಿವಾಸಿಗಳಲ್ಲಿ ಆತಂಕ: ಕಳೆದ ಎರಡು ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನದಿ ದಡದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. 2018 ರ ಮಳೆಗೆ ಮನೆಗಳಿಗೆ ನೀರು ನುಗ್ಗಿ ಹಲವು ಕಡೆಗಳಲ್ಲಿನ ನದಿ ದಡದ ನಿವಾಸಿಗಳ ಮನೆ ಕುಸಿದಿತ್ತು. ಹಲವರ ಮನೆಗಳಿಗೂ ಹಾನಿಯಾಗಿತ್ತು. ನಂತರ ಅವರೆಲ್ಲರೂ ತಾತ್ಕಾಲಿಕ ಮನೆ ನಿರ್ಮಿಸಿ ಹಾಗೂ ಮನೆ ಹಾನಿಯಾದವರು ಮನೆಗಳನ್ನು ದುರಸ್ತಿ ಪಡಿಸಿ ವಾಸವಾಗಿದ್ದಾರೆ. ಆದರೆ ನಿರಂತರ ಮಳೆಯಿಂದಾಗಿ ನದಿ ನೀರು ಏರಿಕೆಯಾಗುತ್ತಿರುವುದು ಇವರನ್ನು ಆತಂಕಕ್ಕೀಡಾಗಿಸಿದೆ.