ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗೆ ಲೋಹಿಯಾ ವಿಚಾರ ಅಗತ್ಯ-ಡಾ.ವಾಸುದೇವ ಬಡಿಗೇರ

KannadaprabhaNewsNetwork | Published : Jan 5, 2024 1:45 AM

ಮನುಷ್ಯ ಹೇಗೆ ಬದುಕಬೇಕು? ಸುಧಾರಣೆ, ಸ್ಥಾನಮಾನ ಗೌರವ ತಂದು ಕೊಡುವಲ್ಲಿ ಲೋಹಿಯಾ ಅವರ ಚಿಂತನೆ ಅಗತ್ಯ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗೆ ಲೋಹಿಯಾ ಅವರ ವಿಚಾರಧಾರೆ ತುಂಬುವುದು ಅನಿವಾರ್ಯ ಆಗಿದೆ.

ಕೊಪ್ಪಳ: ಡಾ.ರಾಮ ಮನೋಹರ್ ಲೋಹಿಯಾ ಚಿಂತನೆ ಆರ್ಥಿಕ, ರಾಜಕೀಯ, ಸಮಾಜಮುಖಿ ಆದದ್ದು ಎಂದು ಉಪನ್ಯಾಸಕಿ ಡಾ.ವಾಸುದೇವ ಬಡಿಗೇರ ಹೇಳಿದರು.ನಗರದ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಮತ್ತು ಡಾ.ರಾಮಮನೋಹರ್ ಲೋಹಿಯಾ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ ಹಂಪಿ ಸಹಯೋಗದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಹೇಗೆ ಬದುಕಬೇಕು? ಸುಧಾರಣೆ, ಸ್ಥಾನಮಾನ ಗೌರವ ತಂದು ಕೊಡುವಲ್ಲಿ ಲೋಹಿಯಾ ಅವರ ಚಿಂತನೆ ಅಗತ್ಯ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗೆ ಲೋಹಿಯಾ ಅವರ ವಿಚಾರಧಾರೆ ತುಂಬುವುದು ಅನಿವಾರ್ಯ ಆಗಿದೆ ಎಂದರು.ಲೋಹಿಯಾ ಇಂಗ್ಲಿಷ್ ಭಾಷೆಯ ವಿರೋಧಿಯಾಗಿದ್ದರು. ಪ್ರಾದೇಶಿಕ ಭಾಷೆಯಲ್ಲಿ ಚಿಂತನೆಗಳು ಇಲ್ಲವಾ? ಎಂದು ಪ್ರಶ್ನಿಸಿದರು. ನಾವೆಲ್ಲರೂ ಒಂದೇ ಎಂಬ ಪರಿಕಲ್ಪನೆ ಸುಧಾರಿಸಬೇಕಾಗಿದೆ. ಪ್ರಾಣಿಗಳನ್ನು ಮನೆಗೆ ಸೇರಿಸಿಕೊಳ್ಳುವ ನಾವು ಮನುಷ್ಯರನ್ನು ಸೇರಿಸಿಕೊಳ್ಳುವುದಕ್ಕೆ ನಮಗೆ ಜಾತಿ ವ್ಯವಸ್ಥೆ ದಟ್ಟವಾಗಿ ಕಾಡುವ ಸ್ಥಿತಿಯಲ್ಲಿ ನಾವು ಇದ್ದೇವೆ. ಎಲ್ಲರಿಗೂ ನ್ಯಾಯ ದೊರಕಿಸುವಲ್ಲಿ ಲೋಹಿಯಾ ಚಿಂತನಾ ಅಧ್ಯಯನ ಅಗತ್ಯ ಎಂದು ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಮಂಡ್ಯದ ಪ್ರಾಧ್ಯಾಪಕಿ ಡಾ.ಹೇಮಲತಾ ಎಎಚ್ಎಂ ಮಾತನಾಡಿ, ಲೋಹಿಯಾ ಮತ್ತು ಮಹಿಳೆ ವಿಷಯದ ಕುರಿತು ಮಾತನಾಡಿದರು.ಮಹಿಳೆಗೂ ಎಲ್ಲ ಅರ್ಹತೆಗಳಿವೆ. ಸ್ತ್ರೀ-ಪುರುಷರ ನಡುವಿನ ತಾರತಮ್ಯ ಸಲ್ಲದು. ಇಂದಿನ ಸಮಾಜದಲ್ಲಿ ಸ್ತ್ರೀಗೂ ಸಿಗಬೇಕಾದ ಎಲ್ಲ ಅವಕಾಶಗಳು ಸಿಗಬೇಕು. ಲೋಹಿಯಾ ಸಮಾಜವಾದಿ ತತ್ವದ ಮೇಲೆ ಜೀವನ ಕಟ್ಟಿಕೊಳ್ಳಬೇಕು ಎಂದರು.ಪ್ರಾಂಶುಪಾಲ ಡಾ.ಚೆನ್ನಬಸವ ಅಧ್ಯಕ್ಷತೆ ವಹಿಸಿದ್ದರು. ಹಂಪಿ ವಿಶ್ವವಿದ್ಯಾಲಯದ ಡಾ.ರಾಮ ಮನೋಹರ್‌ ಅಧ್ಯಯನ ಪೀಠದ ಸಂಚಾಲಕ ಡಾ.ಎರ‍್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ, ಡಾ.ವೆಂಕಟೇಶ ನಾಯ್ಕ ಆರ್., ಮಂಜುನಾಥ ಹೀರೆಮಠ, ಪ್ರವೀಣ ಹಾದಿಮನಿ, ಶರಣಪ್ಪ ಚವ್ಹಾಣ, ಡಾ.ನಾಗಾರಾಜ ದಂಡೋತಿ ಇದ್ದರು.