ಕೇಂದ್ರ ಸರ್ಕಾರದಿಂದ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ -ಸಚಿವ ಜೋಶಿ

KannadaprabhaNewsNetwork | Published : Apr 6, 2024 12:47 AM

ಸಾರಾಂಶ

ಕಳೆದ 10 ವರ್ಷಗಳಿಂದ ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ನಮ್ಮ ರಾಷ್ಟ್ರದ ಇತಿಹಾಸ ಸಂಸ್ಕೃತಿ ಎತ್ತಿ ಹಿಡಿದಿದ್ದಲ್ಲದೆ, ಭಾರತೀಯರ ಕನಸಾಗಿದ್ದ ರಾಮ ಮಂದಿರವನ್ನು ನನಸು ಮಾಡಿತು. ಇದರ ಜೊತೆಗೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡಿದೆ.

ಶಿಗ್ಗಾವಿ: ಕಳೆದ 10 ವರ್ಷಗಳಿಂದ ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ನಮ್ಮ ರಾಷ್ಟ್ರದ ಇತಿಹಾಸ ಸಂಸ್ಕೃತಿ ಎತ್ತಿ ಹಿಡಿದಿದ್ದಲ್ಲದೆ, ಭಾರತೀಯರ ಕನಸಾಗಿದ್ದ ರಾಮ ಮಂದಿರವನ್ನು ನನಸು ಮಾಡಿತು. ಇದರ ಜೊತೆಗೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡಿದೆ ಎಂದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ತಾಲೂಕಿನ ಬಂಕಾಪುರದಲ್ಲಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸಾಧನೆ ಮುಂದುವರೆಸಲು ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸುವುದಕ್ಕಾಗಿ ಶ್ರಮಿಸುವುದಾಗಿ ಕಾರ್ಯಕರ್ತರು ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡುವಂತೆ ಮನವಿ ಮಾಡಿದರು.

೫ ಲಕ್ಷ ಕೋಟಿಯಲ್ಲಿ ಜಲಜೀವನ ಮಿಷನ್‌ ಯೋಜನೆ ಪ್ರಗತಿಯಲ್ಲಿದೆ. ಮೋದಿಯವರ ನೀರಿನ ಅಭಾವ ನೀಗಿಸುವ ಪರಿಕಲ್ಪನೆಯಿಂದ ಇದು ಸಾಧ್ಯವಾಗಿದೆ. ಶಿಗ್ಗಾವಿ- ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ೬ ವೇ ಸೇರಿದಂತೆ ಒಟ್ಟು ೩೯ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ, ದೇಶದಲ್ಲಿ ಬದಲಾವಣೆಯಾಗುತ್ತಿದೆ. ಆರ್ಥಿಕತೆಯಲ್ಲಿ ದುರ್ಬಲ ದೇಶ ಭಾರತ ಎಂದು ಹೇಳಲಾಗುತ್ತಿತ್ತು, ಆದರೆ ಇಂದು ಆರ್ಥಿಕತೆಯಲ್ಲಿ ಭಾರತ ವಿಶ್ವಕ್ಕೆ ೫ನೇ ಸ್ಥಾನದಲ್ಲಿದೆ. ಬಿಜೆಪಿ ಸದೃಢವಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಮುಂದಿನ ದಿನದಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದ ಭದ್ರತೆ ಸುರಕ್ಷತೆ ಹೊಂದಿರಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು, ದೇಶದ ಜನತೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯೆಂದು ಒಪ್ಪಿಕೊಂಡಾಗಿದೆ. ಆದರೆ ಕಾಂಗ್ರೆಸ್‌ದಲ್ಲಿ ಇದುವರೆಗೂ ಪ್ರಧಾನಿ ಅಭ್ಯರ್ಥಿಯ ಆಯ್ಕೆ ಮಾಡಲಾಗಿಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳು ಪರದಾಡುತ್ತಿವೆ. ಮುಂದಿನ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಬರುವದು ಎಂದು ಭವಿಷ್ಯ ನುಡಿದರು.ಬಿಜೆಪಿ ಮುಖಂಡ ಶಶಿಧರ ಯಲಿಗಾರ, ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು.

ಡಿ.ಎಸ್. ಮಾಳಗಿ, ಶಶಿಧರ ಹೊಣ್ಣನವರ, ಡಾ. ಮಲ್ಲೇಶಪ್ಪ ಹರಿಜನ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಬಿಳೆಕುದರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಈರಣ್ಣಾ ನವಲಗುಂದ, ಎನ್.ವಿ. ಪದ್ಮಾ, ಹೊನ್ನಪ್ಪ ಹೂಗಾರ, ಉಮೇಶ ಅಂಗಡಿ, ಬಸವರಾಜ ಕುರಗೋಡಿ, ಮೋಹನ ಕಲಾಲ, ಮಂಜುನಾಥ ಗುಡಗೇರಿ, ಈಶ್ವರ ಹರವಿ,ಮಾಲತೇಶ ನಾಯ್ಕರ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಷಣ್ಮಖ ಕಾಳಣ್ಣವರ ಇದ್ದರು. ಸೋಮಶೇಖರ ಗೌರಿಮಠ ಕಾರ್ಯಕ್ರಮ ನಿರೂಪಿಸಿದರು.

Share this article