ಸಿಂಧನೂರು: ಸರ್ಕಾರಕ್ಕೆ ಕಳೆದ ಎರಡು ದಿನಗಳ ಹಿಂದೆ ನೀಡಿರುವ ಜಾತಿ ಜನಗಣತಿಯ ವರದಿ ಅವೈಜ್ಞಾನಿಕವಾಗಿದ್ದರೆ ವೀರಶೈವ ಲಿಂಗಾಯತರು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಹೋರಾಟ ಮಾಡಿ ಪ್ರತಿಭಟಿಸಿರಿ. ಅದರಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನೆ-ಮನೆಗೆ ತೆರಳಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸದೆ, ಅವೈಜ್ಞಾನಿಕವಾದ ವರದಿಯನ್ನು ಸಲ್ಲಿಸಲಾಗಿದೆ. ವೀರಶೈವ ಲಿಂಗಾಯತ ಸಮಾಜದ ಸಚಿವರು, ಶಾಸಕರು ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಮುಖ್ಯಮಂತ್ರಿಗಳ ಬಳಿ ತಾವು ಸಹ ಬರಲು ಸಿದ್ಧರಿರುವದಾಗಿ ಹೇಳಿದರು.
ರಾಜ್ಯದಲ್ಲಿ 2 ಕೋಟಿಯಷ್ಟು ಜನಸಂಖ್ಯೆ ಇರುವ ವೀರಶೈವ ಲಿಂಗಾಯತರನ್ನು 77 ಲಕ್ಷಕ್ಕೆ ಇಳಿಸಲಾಗಿದೆ. ಜಾತಿ ಗಣತಿ ಸಮೀಕ್ಷೆ ಮಾಡುವಾಗ ಎಲ್ಲರನ್ನು ಸಂಪರ್ಕ ಮಾಡಿಲ್ಲ. ಸಿದ್ದಗಂಗಾ ಶ್ರೀಗಳೇ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಪುನಃ ಜಾತಿಗಣತಿ ಸಮೀಕ್ಷೆ ಮಾಡಿದರೆ ಯಾರು ಸಹ ಉಪ ಪಂಗಡಗಳನ್ನೇ ಪ್ರಧಾನವಾಗಿ ಬಳಸದೆ ಪ್ರಥಮವಾಗಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯ ಎಂದು ಬರೆಸಬೇಕು. ಮತ್ತು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರ್ಪಡೆಗೆ ಮುಖಂಡರು ವಿಶೇಷವಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ, ವೆಂಕಟಗಿರಿಕ್ಯಾಂಪಿನ ಸಿದ್ದಾಶ್ರಮದ ಡಾ.ಸಿದ್ದರಾಮ ಶರಣರು, ರೌಡಕುಂದಾಶ್ರೀಗಳು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ, ಜಂಗಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ, ಪ್ರಧಾನ ಕಾರ್ಯದರ್ಶಿ ಆದಿಬಸವರಾಜ ಹಿರೇಮಠ, ನಗರ ಯುವ ಘಟಕದ ಅಧ್ಯಕ್ಷ ಮಲ್ಲಯ್ಯಸ್ವಾಮಿ ಹಿರೇಮಠ, ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದರಾಮಯ್ಯಸ್ವಾಮಿ ಹಿರೇಮಠ, ವರ್ತಕರ ಘಟಕದ ಅಧ್ಯಕ್ಷ ಮರಿಸ್ವಾಮಿ ಹಿರೇಮಠ ಇದ್ದರು.ನಂತರ ನಗರದಲ್ಲಿ ರೇಣುಕಾಚಾರ್ಯರರ ಭಾವಚಿತ್ರದ ಅದ್ದೂರಿ ಮೆರವಣಿಗೆ ಮತ್ತು ಜಂಗಮ ವಟುಗಳ ಮೆರವಣಿಗೆ ನಡೆಯಿತು. ವೀರಗಾಸೆ, ಪುರವಂತಿಕೆ, ಡೊಳ್ಳು, ಹಲಗೆ, ಜಿಂಜರ್ ಮೇಳಗಳು ಮೆರವಣಿಗೆಗೆ ಕಳೆ ಕಟ್ಟಿದ್ದವು.