ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿಚಕ್ಷಣ ಜಾಗೃತ ದಳ ನೇಮಕಾತಿ ಸುತ್ತೋಲೆ ಅವೈಜ್ಞಾನಿಕ

KannadaprabhaNewsNetwork | Updated : Jun 02 2025, 09:44 AM IST

 ಉತ್ತರ ವಿಶ್ವವಿದ್ಯಾಲಯದ ವಿಚಕ್ಷಣ ಜಾಗೃತ ದಳ ಸಿಬ್ಬಂದಿ ನೇಮಕಾತಿ ಸುತ್ತೋಲೆ ಅವೈಜ್ಞಾನಿಕವಾಗಿದೆ ಎಂದ ಅತಿಥಿ ಉಪನ್ಯಾಸಕ ಸಂಘದ ಮುಖಂಡರು  

 ಚಿಕ್ಕಬಳ್ಳಾಪುರ : ಉತ್ತರ ವಿಶ್ವವಿದ್ಯಾಲಯದ ವಿಚಕ್ಷಣ ಜಾಗೃತ ದಳ ಸಿಬ್ಬಂದಿ ನೇಮಕಾತಿ ಸುತ್ತೋಲೆ ಅವೈಜ್ಞಾನಿಕವಾಗಿದೆ. ಕೂಡಲೇ ಕುಲಪತಿಗಳು, ಕುಲಸಚಿವರು ಸಮಾಲೋಚನೆ ನಡೆಸಿ ನುರಿತ ಕಾಯಂ ಸಿಬ್ಬಂದಿ ಎಂಬ ಪದವನ್ನು ಬದಲಾಯಿಸಿ ಅತಿಥಿ ಉಪನ್ಯಾಸಕರನ್ನು ಒಳಗೊಂಡಂತೆ ಹೊಸ ಸುತ್ತೋಲೆಯನ್ನು ಹೊರಡಿಸುವುದು ಸೂಕ್ತ ಎಂದು ಅತಿಥಿ ಉಪನ್ಯಾಸಕ ಸಂಘದ ಮುಖಂಡರು ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಪರೀಕ್ಷಾ ವಿಚಕ್ಷಣ ಜಾಗೃತ ದಳದ ನೇಮಕಾತಿಗೆ ಸಂಬಂಧಿಸಿದಂತೆ ನುರಿತ ಖಾಯಂ ಉಪನ್ಯಾಸಕರನ್ನು ಪರಿಗಣಿಸಲು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಅತಿಥಿ ಉಪನ್ಯಾಸಕರ ಮೇಲೆ ಸವಾರಿ ಮಾಡುವಂತ್ತಿರುವುದರಿಂದ ಕೂಡಲೇ ವಿಶ್ವವಿದ್ಯಾಲಯ ಸದರಿ ಸುತ್ತೋಲೆ ವಾಪಸ್ಸು ಪಡೆದು ಪರಿಷ್ಕೃತ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು. ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಮಾತನಾಡಿ, ಜೂನ್ 14 ರಿಂದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನಡೆಸುತ್ತಿರುವ ಸ್ನಾತಕ ಪದವಿಯ 2,4,6ನೇ ಸೆಮಿಸ್ಟರ್ ಪರೀಕ್ಷೆಗೆ ವಿಚಕ್ಷಣ ಜಾಗೃತ ದಳದ ಸದಸ್ಯರ ನೇಮಕಾತಿ ಸಂಬಂಧ ಮೇ 27ರಂದು ಒಂದು ಸುತ್ತೋಲೆ ಹೊರಡಿಸಿರುವುದು ಸರಿ. ಸದರಿ ಸುತ್ತೋಲೆ ನುರಿತ ಖಾಯಂ ಸಿಬ್ಬಂದಿಯನ್ನು ಮಾತ್ರ ವಿಚಕ್ಷಣ ಜಾಗೃತದಳದ ಸದಸ್ಯರಾಗಿ ಪ್ರತಿ ಕಾಲೇಜಿನಿಂದ ಒಬ್ಬರಂತೆ ನೇಮಿಸಲು ಅನುವಾಗುವಂತೆ ಕುಲಸಚಿವರು ಮೌಲ್ಯಮಾಪನ ಕಚೇರಿಗೆ 3 ದಿನಗಳ ಒಳಗಾಗಿ ಸಲ್ಲಿಸುವಂತೆ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ. ಇದು ಅವೈಜ್ಞಾನಿವಾಗಿದ್ದು ಅತಿಥಿ ಉಪನ್ಯಾಸಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ವಿಶ್ವವಿದ್ಯಾಲಯದಲ್ಲಿ ಈವರೆಗೆ ನಡೆದುಕೊಂಡು ಬರುತಿದ್ದ ವ್ಯವಸ್ಥೆಗಿಂತ ತೀರಾ ಭಿನ್ನವಾಗಿರುವ ಈ ಸುತ್ತೋಲೆಯು ಅತಿಥಿ ಉಪನ್ಯಾಸಕರನ್ನು ವ್ಯವಸ್ಥಿತವಾಗಿ ದೂರವಿಡುವಂತೆ ಇದೆ. ಇದೇ ಸುತ್ತೋಲೆ ಮುಂದುವರೆದಲ್ಲಿ ಕೆಲ ಪ್ರಾಂಶುಪಾಲರು ಸಿಟ್ ಇನ್ ಸ್ಕ್ವಾಡ್ ಚೀಫ್‌ಗಳು ಅತಿಥಿ ಉಪನ್ಯಾಸಕರನ್ನು ಈ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

 ಆದ್ದರಿಂದ ಉಪಕುಲಪತಿಗಳು ಮತ್ತು ಮೌಲ್ಯಮಾಪನ ಕುಲಸಚಿವರು ತಮ್ಮ ಸುತ್ತೋಲೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಪರೀಕ್ಷಾ ಕಾರ್ಯ, ಮೌಲ್ಯಮಾಪನ ಇತ್ಯಾದಿ ಎಲ್ಲವನ್ನೂ ನುರಿತ ಖಾಯಂ ಉಪನ್ಯಾಸಕರಿಂದಲೇ ಮಾಡಿಸಿಕೊಳ್ಳುವುದು ಒಳಿತು. ನಮ್ಮ ಪ್ರತಿರೋಧ ಅತಿಥಿ ಉಪನ್ಯಾಸಕರ ವಿರುದ್ಧವಿರುವ ಸುತ್ತೋಲೆಯ ಬಗ್ಗೆಯ ವಿನಹ ವಿಶ್ವವಿದ್ಯಾಲಯದ ಮೇಲಾಗಲಿ ಕುಲಪತಿ ಕುಲಸಚಿವರ ಮೇಲಾಗಲಿ ಇಲ್ಲ ಎಂದರು.

ಗೌರವಾಧ್ಯಕ್ಷ ಸದಾಶಿವ ಆರಾಧ್ಯ ಮಾತನಾಡಿ, ವಿಚಕ್ಷಣ ಜಾಗೃತ ದಳದ ಸಿಬ್ಬಂದಿ ನೇಮಕಾತಿ ಸಂಬಂಧ ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಕಾಯಂ ಉಪನ್ಯಾಸಕರನ್ನು ನೇಮಕ ಮಾಡುವಂತೆ ಇದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಈ ಹಿಂದಿನಿಂದಲೂ ವಿಚಕ್ಷಣ ಜಾಗೃತ ದಳದ ಸಿಬ್ಬಂದಿಯನ್ನು ನೇಮಕಾತಿ ಮಾಡುವಾಗ ಅತಿಥಿ ಉಪನ್ಯಾಸಕರು ಕಾಯಂ ಉಪನ್ಯಾಸಕರು ಎಂದು ಭೇದ ಮಾಡುತ್ತಿರಲಿಲ್ಲ. ಮೇಲಾಗಿ ಅತಿಥಿ ಉಪನ್ಯಾಸಕರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನುರಿತ ಖಾಯಂ ಉಪನ್ಯಾಸಕರನ್ನು ಎರಡು ನಾಲ್ಕು ಆರನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಮಾತ್ರ ನೇಮಿಸಲು ಹೊರಟಿದೆ.

ಇದು ಸರಿಯಾದ ಕ್ರಮವಲ್ಲ. ಅತಿಥಿ ಉಪನ್ಯಾಸಕರನ್ನು ಪರೀಕ್ಷಾ ಕಾರ್ಯಗಳಿಗೆ ಮೌಲ್ಯಮಾಪನಕ್ಕೆ ಬಳಸಿಕೊಳ್ಳುವ ವಿಶ್ವವಿದ್ಯಾಲಯ ವಿಚಕ್ಷಣ ಜಾಗೃತದಳದ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ಮಾತ್ರ ಮೀನಾ ಮೇಷ ಎನಿಸುತ್ತಿರುವುದು ಸರಿಯಲ್ಲ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿದ್ದರೆ ಪರೀಕ್ಷಾ ಕಾರ್ಯಗಳು, ಮೌಲ್ಯಮಾಪನ ಕಾರ್ಯಕ್ಕೂ ಕಾಯಂ ಉಪನ್ಯಾಸಕರ ನೇಮಿಸಿಕೊಳ್ಳಲಿ ಎಂದು ಆಗ್ರಹಿಸಿದರು.ಬಾಕ್ಸ್....

ಅತಿಥಿ ಉಪನ್ಯಾಸಕರನ್ನೇ ಖಾಯಂ ಮಾಡಲು ಆಗ್ರಹ

ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರು ಬಹುದಿನಗಳ ಬೇಡಿಕೆಯಾದ ಇಡಿಗಂಟನ್ನು ನೀಡುವ ಸಂಬಂಧ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಇದು ಜಾರಿಯಾಗುವಲ್ಲಿ ಮುತುವರ್ಜಿ ವಹಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ರೀತಿ ಆರೋಗ್ಯವೇ ವಿಮೆ ಸೌಲಭ್ಯವನ್ನು ಕೂಡ ಒದಗಿಸಲು ಕ್ರಮವಹಿಸಬೇಕು. ಅತಿಥಿ ಉಪನ್ಯಾಸಕರ ನೇಮಕಾತಿಯ ತಾರತಮ್ಯವನ್ನು ತೊಡೆದುಹಾಕಿ ಕೃಪಾಂಕ ಸಂಬಂಧ 16 ವರ್ಷಗಳ ಮಿತಿಯನ್ನು ತೆಗೆದು ಸೇವೆ ಸಲ್ಲಿಸಿರುವ ಅಷ್ಟೂ ವರ್ಷಗಳಿಗೆ ಕೃಪಾಂಕ ನೀಡಬೇಕು. 

10 ತಿಂಗಳ ಬದಲಿಗೆ ವರ್ಷದ 12 ತಿಂಗಳು ಗೌರವಧನ ನೀಡುವಂತಾಗಬೇಕು. ಹೊಸ ನೇಮಕಾತಿ ಮಾಡಿಕೊಳ್ಳುವ ಬದಲು ಇರುವ ಅತಿಥಿ ಉಪನ್ಯಾಸಕರನ್ನೇ ಖಾಯಂ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಬಾಳಿಗೆ ಬೆಳಕಾಗಬೇಕು ಎಂದು ಮುನಿರಾಜು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ, ಉಪಾಧ್ಯಕ್ಷ ರಾಜಶೇಖರ್,ಫಯಾಜ್ ಅಹಮದ್ ಸದಸ್ಯರಾದ ರಾಮಚಂದ್ರ, ಡಿ.ವಿ ಶ್ರೀನಿವಾಸ್, ನರಸಿಂಹಮೂರ್ತಿ, ಗಂಗಾಧರ್, ಜಯಚಂದ್ರ ನಾಯಕ್, ಹರೀಶ್, ರಘು , ಆಂಜಿನಪ್ಪ ಮತ್ತಿತರರು ಇದ್ದರು.

Read more Articles on