ಶಿರಸಿ: ವಿಜ್ಞಾನ ಪ್ರಶ್ನೆಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಪ್ರೌಢಶಾಲಾ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರ ಮೂಲಕ ಮನವಿ ಸಲ್ಲಿಸಲಾಯಿತು.ವಿಜ್ಞಾನದ ಗುಣಾತ್ಮಕ ಫಲಿತಾಂಶ ಕೆಳಮುಖವಾಗುತ್ತಿದ್ದು, ಹೀಗಾಗಿ ಸೂಕ್ತ ಬದಲಾವಣೆ ಅಗತ್ಯವಾಗಿದೆ. ಪಠ್ಯಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತ್ರಗಳ ವಿಂಗಡನೆ ಇಲ್ಲದಿದ್ದರೂ ಪ್ರಶ್ನೆ ಪತ್ರಿಕೆಯಲ್ಲಿ ವಿಭಾಗವಾರು ವಿಂಗಡನೆ ಆಗುತ್ತಿದೆ. ಭೌತಶಾಸ್ತ್ರ ಪ್ರಥಮವಾಗಿ ಆಯ್ಕೆ ಮಾಡಿರುವುದರಿಂದ ಅಲ್ಲಿನ ಪ್ರಶ್ನೆಗಳ ಕಠಿಣತೆ ಹೆಚ್ಚಿದೆ.
ಶಿರಸಿ: ಇಲ್ಲಿನ ಅನುಬಂಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ೯ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಜಾನ್ಮನೆ ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ, ಗಾಯಕಿ ರೇಖಾ ದಿನೇಶ, ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸುಮನ್ ಹೆಗಡೆ, ಸ್ಕೋಡ್ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಮಹಿಳಾ ಸಾಂತ್ವನ ವೇದಿಕೆಯ ಜ್ಯೋತಿ ಭಟ್ಟ, ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕುರಿ, ಪೌರಕಾರ್ಮಿಕ ಮಂಜುಳಾ ಹರಿಜನ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಯಕ್ಷಗಾನ ಯುವ ಪ್ರತಿಭೆ ತುಳಸಿ ಹೆಗಡೆ ಅವರಿಗೆ ಪುರಸ್ಕಾರ ನೀಡಲಾಯಿತು. ಸನ್ಮಾನ ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಒಂದು ಕಾಲದಲ್ಲಿ ಪುರುಷ ಪ್ರಧಾನ ಸಮಾಜವಿತ್ತು. ಮಹಿಳೆಯರು ಕೇವಲ ಅಡುಗೆ ಮಾಡಲು, ಮಕ್ಕಳನ್ನು ಹೆರಲು ಮಾತ್ರ ಎಂಬ ಕಾಲಘಟ್ಟದಿಂದ ನಾವೀಗ ಮೇಲೆ ಬಂದಿದ್ದೇವೆ. ಸಮಾಜದ ಮುಖ್ಯ ವಾಹಿನಿಯಲ್ಲಿ, ಇಲಾಖೆಗಳಲ್ಲಿ ಅಧಿಕಾರಿಯಾಗಿ ಮಹಿಳೆಯರು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ತಾನೂ ಕಡಿಮೆ ಇಲ್ಲ ಎಂಬುದನ್ನು ಈಗ ಸಾಬೀತುಪಡಿಸುತ್ತಿದ್ದಾರೆ. ಪುರುಷರು ಯಶಸ್ವಿಯಾದರೂ ಅವರಿಗೆ ಬೆಂಬಲವಾಗಿ ನಿಂತು ಸಹಕಾರ ತೋರುತ್ತಿದ್ದಾಳೆ ಎಂದರು.
ಸನ್ಮಾನಿತರ ಪರವಾಗಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಹಳ್ಳಿ ಭಾಗದಲ್ಲಿಯೇ ಹುಟ್ಟಿ, ಶಿಕ್ಷಣ ಪಡೆದ ನನಗೆ ಈ ಸನ್ಮಾನ ಸ್ಫೂರ್ತಿ ತಂದಿದೆ ಎಂದರು.ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಉಪನ್ಯಾಸ ನೀಡಿದರು. ಅನುಬಂಧ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಜ್ಯೋತಿಗೌಡ ಪಾಟೀಲ, ಅರವಿಂದ ತೆಲಗುಂದ, ಗೀತಾ ಭೋವಿ, ಮುಕ್ತೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.