ಹಾವುಗಳನ್ನು ಗೌರವಿಸಿ, ಗಾಬರಿ ಪಡಬೇಡಿ: ಪ್ರೊ. ಕಲ್ಲೂರ

KannadaprabhaNewsNetwork |  
Published : Jul 18, 2025, 12:45 AM IST
16ಡಿಡಬ್ಲೂಡಿ7ಮಾಳಮಡ್ಡಿಯ, ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಬುಧವಾರ ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಗಂಗಾಧರ ಕಲ್ಲೂರ ಮಾತನಾಡಿದರು.  | Kannada Prabha

ಸಾರಾಂಶ

ಇತ್ತೀಚೆಗೆ ಹಾವುಗಳ ಆವಾಸ ಸ್ಥಳದ ಅತಿಕ್ರಮಣ, ರಾತ್ರಿಯೂ ಹಗಲಿನಷ್ಟೇ ಮನುಷ್ಯರ ಚಟುವಟಿಕೆ, ಕಣ್ಣು ಕೋರೈಸುವಷ್ಟು ಬೆಳಕು, ಭೂಮಿಗೇ ಜ್ವರ ಬಂದಂತೆ ಕಾವು, ವಾಣಿಜ್ಯಿಕ ಬೆಳೆಗಳ ದೆಸೆಯಿಂದ ಆಹಾರದ ಅಲಭ್ಯತೆ, ರೈತನ ಮಿತ್ರನಾದ ಹಾವಿಗೆ ಆಹಾರ ಬೆಳೆಗಳ ತಾಕು ಕ್ಷೀಣಿಸಿ, ಬೆಳೆ ಪೀಡೆಗಳಾದ ಇಲಿ, ಹೆಗ್ಗಣ, ಮೊಲಗಳ ಸಂಖ್ಯೆಯಲ್ಲಿ ಇಳಿಮುಖವಾಗಿ ಆಹಾರ ಸರಪಳಿ ತುಂಡಾಗಿದ್ದೂ ಕಾರಣ.

ಧಾರವಾಡ: ಹಾವುಗಳನ್ನು ಗೌರವಿಸಿ, ಗಾಬರಿ ಪಡಬೇಡಿ: ನಿಸರ್ಗದ ಮೌನ ರಕ್ಷಕರನ್ನು ಕಾಪಾಡಿ ಎಂಬುದು 2025ನೇ ಸಾಲಿನ ವಿಶ್ವ ಉರಗಗಳ ದಿನಾಚರಣೆ ಧ್ಯೇಯ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ -1972ರ ಅಡಿ ಹಾವುಗಳು, ಕಾನೂನಿನಡಿ ಸಂರಕ್ಷಿತ ಪ್ರಾಣಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅವುಗಳಿಗೆ ತೊಂದರೆ ಉಂಟುಮಾಡುವುದು ಶಿಕ್ಷಾರ್ಹ ಅಪರಾಧ ಎಂದು ವನ್ಯಜೀವಿ ಕ್ಷೇಮಪಾಲಕ ಪ್ರೊ. ಗಂಗಾಧರ ಕಲ್ಲೂರ ಹೇಳಿದರು.

ಇಲ್ಲಿಯ ನಿಸರ್ಗ ಸಂಶೋಧನಾ ಕೇಂದ್ರವು ನಗರದ ಮಾಳಮಡ್ಡಿಯ ಕೆ.ಇ. ಬೋರ್ಡ್ ಸಂಸ್ಥೆಯ ವಿವಿಧ ಶಾಲೆಗಳ ಮಕ್ಕಳಿಗೆ ಬುಧವಾರ ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆಯಲ್ಲಿ ಕೆರೆಹಾವು (ರ‍್ಯಾಟ್ ಸ್ನೇಕ್) ಹಾಗೂ ಆಭರಣ ಹಾವು (ಟ್ರಿಂಕಟ್)ಗಳ ಮೂಲಕ, ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಹಾವುಗಳು ಮನೆಗಳಲ್ಲಿ ಕಂಡುಬಂದಲ್ಲಿ ವಿಷಕಾರಿಯೋ ಅಥವಾ ಅಲ್ಲವೋ ಎಂಬುದನ್ನು ಗುರುತಿಸುವ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರೂ ಹೊಂದಬೇಕು. ಇತ್ತೀಚೆಗೆ ಹಾವುಗಳ ಆವಾಸ ಸ್ಥಳದ ಅತಿಕ್ರಮಣ, ರಾತ್ರಿಯೂ ಹಗಲಿನಷ್ಟೇ ಮನುಷ್ಯರ ಚಟುವಟಿಕೆ, ಕಣ್ಣು ಕೋರೈಸುವಷ್ಟು ಬೆಳಕು, ಭೂಮಿಗೇ ಜ್ವರ ಬಂದಂತೆ ಕಾವು, ವಾಣಿಜ್ಯಿಕ ಬೆಳೆಗಳ ದೆಸೆಯಿಂದ ಆಹಾರದ ಅಲಭ್ಯತೆ, ರೈತನ ಮಿತ್ರನಾದ ಹಾವಿಗೆ ಆಹಾರ ಬೆಳೆಗಳ ತಾಕು ಕ್ಷೀಣಿಸಿ, ಬೆಳೆ ಪೀಡೆಗಳಾದ ಇಲಿ, ಹೆಗ್ಗಣ, ಮೊಲಗಳ ಸಂಖ್ಯೆಯಲ್ಲಿ ಇಳಿಮುಖವಾಗಿ ಆಹಾರ ಸರಪಳಿ ತುಂಡಾಗಿದ್ದೂ ಕಾರಣ ಎಂದು, ಪ್ರೊ. ಕಲ್ಲೂರ ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದರೆಡ್ಡಿ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ವಿಷ್ಣು ಹುಕ್ಕೇರಿ, ಉರಗ ರಕ್ಷಕರಾದ ಮಂಜುನಾಥ, ಸೌರಭ ಸಬನೀಸ್, ಸಮೀರ ಕುಲಕರ್ಣಿ ಹಾಗೂ ಹರ್ಷವರ್ಧನ ಶೀಲವಂತ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.

ಹಾವು ಏಕೆ ಕಚ್ಚುತ್ತದೆ?: ಮಕ್ಕಳು ಹಾವುಗಳನ್ನು ಮುಟ್ಟಿ ನೋಡಿ, ಕುತೂಹಲ ತಾಳದೇ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ. ಗಂಗಾಧರ ಕಲ್ಲೂರ, ಹಾವುಗಳಲ್ಲಿರುವ ವಿಷ ಮನುಷ್ಯರನ್ನು ಕಚ್ಚಲು ಅಲ್ಲ. ಬೇಟೆಯನ್ನು ಪ್ರಜ್ಞೆ ತಪ್ಪಿಸಲು, ಇಡಿಯಾಗಿ ನುಂಗಿದ ಆಹಾರ ಅರಗಿಸಿಕೊಳ್ಳಲು ಬಳಕೆಯಾಗುತ್ತದೆ. ಈ ವಿಷವೂ ತುರ್ತು ಸಂದರ್ಭದಲ್ಲಿ ಮನುಷ್ಯರಿಗೆ ಜೀವರಕ್ಷಕ ಔಷಧಿ! ಅನಗತ್ಯವಾಗಿ ಹಾವುಗಳು ಯಾರ ಮೇಲೂ, ಸೇಡಿನ ದಾಳಿ ಅಥವಾ ಬೆನ್ನಟ್ಟಿ ಕಚ್ಚುವುದಿಲ್ಲ! ಅವು ಭಯಗೊಂಡಾಗ, ಪ್ರಾಣರಕ್ಷಣೆಯ ಕೊನೆ ಅಸ್ತ್ರವಾಗಿ ಕಚ್ಚುವುದು! ಹೀಗಾಗಿ, ಸುರಕ್ಷಿತ ಅಂತರ ನಮ್ಮ ಹೊಣೆ ಎಂದರು.

ಹಾವಿಗೆ ಕಿವಿ ಇದೆಯೇ?: ಹಾವು ನಾಲಿಗೆಯ ಮೂಲಕ ಸಂಗ್ರಹಿಸಿದ ಮಾಹಿತಿ ರವಾನಿಸಿ, ವಿಶ್ಲೇಷಿಸುತ್ತವೆ. ಆಹಾರದ ದೂರ, ಗಾತ್ರ ಮತ್ತು ಬಿಸಿ ರಕ್ತ ಪ್ರಾಣಿಯ ಚಲನೆ ವೇಗ... ಹೀಗೆ. ನೆಲ ಕಂಪಿಸಿದಾಗ ದೇಹದಿಂದ ಸಂಜ್ಞೆ ಸಂಗ್ರಹಿಸುತ್ತವೆ. ‘ಹಾವಿಗೆ ಕಿವಿ ಇಲ್ಲ’! ಎಂಬ ಪ್ರೊ. ಕಲ್ಲೂರ ಮಾತಿಗೆ, ಮಕ್ಕಳು ಆಶ್ಚರ್ಯಚಕಿತರಾದರು.

----

16ಡಿಡಬ್ಲೂಡಿ7

ಮಾಳಮಡ್ಡಿಯ, ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಬುಧವಾರ ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಗಂಗಾಧರ ಕಲ್ಲೂರ ಮಾತನಾಡಿದರು.

----

16ಡಿಡಬ್ಲೂಡಿ8

ಮಾಳಮಡ್ಡಿಯ, ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಬುಧವಾರ ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಗಂಗಾಧರ ಕಲ್ಲೂರ ಆಭರಣ ಹಾವು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ