ಪ್ರತಿಭೆ ಪ್ರೋತ್ಸಾಹಿಸಲು ಪುರಸ್ಕಾರ ಸಹಕಾರಿ

KannadaprabhaNewsNetwork | Published : Aug 25, 2024 1:48 AM

ಸಾರಾಂಶ

ಬಾಲ್ಯದಿಂದಲೇ ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಮುಂದೆ ಸಮಾಜದ ನಾಯಕರಾಗಿ ಬೆಳೆಯುತ್ತಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಮಾತ್ರ ಪುರಸ್ಕಾರ ನೀಡಲಾಗುತ್ತಿದೆ, ಖಾಸಗಿ ಶಾಲಾ ಮಕ್ಕಳೂ ಪ್ರತಿಭಾವಂತರಿದ್ದರೂ ಸ್ಥಿತವಂತರಾಗಿರುವ ಕಾರಣ ಅವರನ್ನು ಕೈಬಿಡಲಾಗಿದೆ,

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬಡ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರಲ್ಲಿರುವ ಮತ್ತಷ್ಟು ಪ್ರತಿಭೆಯನ್ನು ಹೊರ ತರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಸ್.ಎನ್. ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಎಸ್.ಎನ್. ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲಾ ಮಕ್ಕಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಸಮಾಜದ ಶೋಷಿತ ವರ್ಗದ ಜನರು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದೇ ಇದರ ಉದ್ದೇಶವಾಗಿದೆ.

ಖಾಸಗಿ ಶಾಲೆ ಮಕ್ಕಳನ್ನೂ ಪ್ರೋತ್ಸಾಹಿಸಿ

ಮಕ್ಕಳು ದೇಶದ ಆಸ್ತಿಯಾಗಿದ್ದು ಅವರಿಗೆ ಬಾಲ್ಯದಿಂದಲೇ ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಮುಂದೆ ಸಮಾಜದ ನಾಯಕರಾಗಿ ಬೆಳೆಯುತ್ತಾರೆ. ಬರೀ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಮಾತ್ರ ಪ್ರೋತ್ಸಾಹಿಸಿ ಪುರಸ್ಕಾರ ನೀಡಲಾಗುತ್ತಿದೆ, ಖಾಸಗಿ ಶಾಲಾ ಮಕ್ಕಳೂ ಪ್ರತಿಭಾವಂತರಿದ್ದರೂ ಖಾಸಗಿ ಶಾಲೆಗಳಲ್ಲಿ ಓದಿದವರು ಸ್ಥಿತವಂತರಾಗಿರುವ ಕಾರಣ ಅವರನ್ನು ಕೈಬಿಡಲಾಗಿದೆ, ಮುಂದೆ ಅವರನ್ನೂ ಗುರುತಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಐಎಎಸ್‌, ಕೆಎಎಸ್‌ಗೆ ತರಬೇತಿ

ಶೀಘ್ರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತೇವೆ ಎಂದ ಶಾಸಕರು, ಐಎಎಸ್, ಕೆಎಎಸ್, ಐಪಿಎಸ್ ಮಾಡಬೇಕೆಂಬ ಆಸೆ ಇರುವ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಮೂರು ತಿಂಗಳ ಕಾಲ ಉಚಿತ ತರಬೇತಿಯನ್ನು ಪ್ರಾರಂಭ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವೆಂಕಟೇಶಪ್ಪ, ಕೆಡಿಎ ಅಧ್ಯಕ್ಷ ಗೋಪಾಲ ರೆಡ್ಡಿ, ಪುರಸಭೆ ಅಧ್ಯಕ್ಷ ಗೋವಿಂದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಸಮಾಜ ಸೇವಕರಾದ ಮುನಿರಾಜು, ಆಲೂಗಡ್ಡೆ ಶೇಖರ್,ಎ. ಬಾಬು, ವರ್ತೂರು ಬಾಬು, ಬಿಇಒ ಸುಕನ್ಯ, ಸಮನ್ವಯ ಅಧಿಕಾರಿ ಶಶಿಕಲಾ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ ಇತರರು ಇದ್ದರು.

Share this article