ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಕಾರ್ಯ ಪ್ರಮುಖ: ಎಚ್.ಬಿ. ಮಹಾಂತೇಶ

KannadaprabhaNewsNetwork | Published : Jul 8, 2024 12:32 AM

ಸಾರಾಂಶ

ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಕಾರ್ಯ ಪ್ರಮುಖವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಬಿ. ಮಹಾಂತೇಶ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ, ಬಡವರ ಧ್ವನಿಯಾಗಿ, ಶೋಷಿತರ ಪರವಾಗಿ, ಸಭ್ಯ, ವಂಚಿತ ಜನರ ಸೇವೆಗೆ ಬರವಣಿಗೆ ಮೂಲಕ ಸೌಲಭ್ಯ ದೊರಕಿಸಿಕೊಡುವಲ್ಲಿ ಮತ್ತು ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಕಾರ್ಯ ಬಹು ಮುಖ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಬಿ. ಮಹಾಂತೇಶ ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ತು ಕಲಾದಗಿ ವಲಯ ಘಟಕ ಹಾಗೂ ಕ್ಲಸ್ಟರ್ ಮಟ್ಟದ ಶಿಕ್ಷಕರ ಬಳಗದವರು ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಾಗೂ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಸುಧಾರಣೆ ಮತ್ತು ಸಾಮಾಜಿಕ ಕಾರ್ಯಕ್ಕೆ ಪತ್ರಿಕಾ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಯಾವುದೇ ಸಂಭಾವನೆ ಅಪೇಕ್ಷೆ ಪಡೆಯದೆ ಗೌರವ ಸಂಭಾವನೆಯೊಂದಿಗೆ ಸಮಾಜದ ಪ್ರಗತಿಗಾಗಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿಯ ಬೆನ್ನಿಗೆ ನಿಂತು ನ್ಯಾಯ ಒದಗಿಸುವ ಕೆಲಸ ಮಾಡುತ್ತಿರುವ ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು

ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ವಿ. ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಲೋಕಣ್ಣ ಭಜಂತ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಹೂಗಾರ. ಎಸ್ಡಿಎಂಸಿ ಅಧ್ಯಕ್ಷ ಭೀಮಸಿ ಕರಡಿಗುಡ್ಡ, ಪತ್ರಕರ್ತ ದ.ರಾ. ಪುರೋಹಿತ, ಚಂದ್ರಶೇಖರ ಹಡಪದ, ಎಂ.ಎಚ್. ನದಾಫ್, ಸಿಕಂದರ್‌ ಬಾವಾಖಾನ, ಶಬ್ಬೀರ್‌ ನದಾಫ್. ಬಸಪ್ಪ ಪಾಣಿಶೆಟ್ಟಿ ಇದ್ದರು. ಕ.ಸಾ.ಪ ವಲಯ ಘಟಕದ ಅಧ್ಯಕ್ಷ ಲಕ್ಷ್ಮಣ ಅಂಕಲಗಿ ಸ್ವಾಗತಿಸಿದರು. ಶಿಕ್ಷಕ ಬಾಬು ಪೂಜಾರ ನಿರೂಪಿಸಿದರು. ಸಿಆರ್‌ಪಿ ಮಂಜುನಾಥ ಹೆಡಗಿ ವಂದಿಸಿದರು . ಕಾರ್ಯಕ್ರಮದಲ್ಲಿ ಕಲಾದಗಿ ಹೋಬಳಿ ಕಾರ್ಯನಿರತ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

Share this article