ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಮದ್ದೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ರೂಪನಾಗಣ್ಣ ಅವಿರೋಧ ಆಯ್ಕೆಯಾದರು.ಈ ಹಿಂದೆ ಅಧ್ಯಕ್ಷರಾಗಿದ್ದ ಸುಶೀಲಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಒಟ್ಟು ೧೬ ಮಂದಿ ಸದಸ್ಯರಿರುವ ಈ ಪಂಚಾಯಿತಿಯಲ್ಲಿ ೧೨ ಮಂದಿ ಹಾಜರಿದ್ದರು. ಕೋರಂ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ಪಶು ಇಲಾಖೆಯ ಡಾ.ಶಿವರಾಜು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ರೂಪನಾಗಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರನ್ನು ಅಧಿಕೃತ ಅಧ್ಯಕ್ಷ ಎಂದು ಘೋಷಿಸಲಾಯಿತು.
ನಂತರ ಮಾಜಿ ಶಾಸಕ ಎಸ್.ಬಾಲರಾಜು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಗ್ರಾಪಂ ಪರಿಮಿತಿ ಚಿಕ್ಕದಿರುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರತಿನಿತ್ಯ ತಮ್ಮ ಗ್ರಾಮ, ವಾರ್ಡ್ಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ತಮ್ಮ ವಾರ್ಡ್ನ್ನು ಸುತ್ತಬೇಕು. ಆಗ ಅಲ್ಲಿನ ಸಮಸ್ಯೆಗಳ ಅರಿವಾಗುತ್ತದೆ. ಇಲ್ಲಿ ಸ್ವಚ್ಛತೆ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸದಸ್ಯರು ಶ್ರಮ ವಹಿಸಿದರೆ ಅವರು ಜನರ ಮನಸ್ಸಿನಲ್ಲಿ ಅಜರಾಮರವಾಗುತ್ತಾರೆ ಎಂದರು.ಮುಂದಿನ ಚುನಾವಣೆಗೂ ಕೂಡ ಇದು ನಾಂದಿಯಾಗುತ್ತದೆ. ಕಚೇರಿಗೆ ಬರುವ ಜನರು ಹಾಗೂ ಸಮಸ್ಯೆ ಹೇಳಿಕೊಳ್ಳುವ ಜನರರೊಂದಿಗೆ ಪ್ರೀತಿಯಿಂದ ಮಾತನಾಡಿದರೆ ನಾವು ಜನರ ಮನಸ್ಸಿನಲ್ಲಿ ಉಳಿಯಬಹುದು ಎಂದರು. ಈ ಪಂಚಾಯಿತಿಯಲ್ಲಿ ಈ ಅವಧಿಯಲ್ಲಿ ರೂಪನಾಗಣ್ಣ ೪ ನೇ ಅಧ್ಯಕ್ಷರಾಗಿದ್ದಾರೆ. ಅವಧಿ ಕಡಿಮೆ ಇದೆ. ಆದರೂ ಸೇವೆ ಮಾಡಲು ಅವಕಾಶವಿದ್ದು ಸಾರ್ವಜನಿಕ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು.
ಉಪಾಧ್ಯಕ್ಷ ಆರ್.ವೆಂಕಟರಮಣಸ್ವಾಮಿ, ಸದಸ್ಯರಾದ ಪಿ. ಪ್ರಕಾಶ್, ನಂದಿನಿ, ಮಂಜುಳಾ, ಎಂ. ಮಲ್ಲಿಕಾರ್ಜುನ, ಪರಮೇಶ್, ಎಂ.ಎನ್.ಶಶಿಕುಮಾರ್, ಚಂದ್ರಮ್ಮ, ಭಾಗ್ಯ, ಸುಧಾಮಣಿ, ಚಂದ್ರಕಲಾ ಪಿಡಿಒ ನಟರಾಜು, ನಂಜಪ್ಪ ಮುಖಂಡರಾದ ಸೋಮಶೇಖರ್, ಪ್ರಕಾಶ್, ನಾಗಣ್ಣ ಸೇರಿದಂತೆ ಅನೇಕರು ಇದ್ದರು.