ಕನ್ನಡಪ್ರಭವಾರ್ತೆ ಸಾಗರ
ಗ್ರಾಮೀಣಮಟ್ಟದ ಕ್ರೀಡಾಕೂಟಗಳು ಸಂಬಂಧವೃದ್ಧಿಗೆ ಸಹಕಾರಿ ಎಂದು ವರದಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಟಿ.ಆರ್. ಗಣಪತಿ ಅಭಿಪ್ರಾಯಪಟ್ಟರು. ತಾಲೂಕಿನ ವರದಾಮೂಲದಲ್ಲಿ ಸ್ಥಳೀಯ ಕೇರಂ ಮಿತ್ರ ಮಂಡಳಿ ಆಯೋಜಿಸಿರುವ ಎರಡು ದಿನಗಳ 3ನೇ ವರ್ಷದ ರಾಜ್ಯಮಟ್ಟದ ಹವ್ಯಕ ಕೇರಂ ಪಂದ್ಯಾವಳಿ ಹಾಗೂ ವಿಶೇಷ ಆಹ್ವಾನಿತರ ಕೇರಂ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಯುಗದಲ್ಲಿ ದೂರದ ಇಸ್ರೇಲ್ನಲ್ಲಿ ನಡೆಯುವ ಯುದ್ಧದ ಕ್ಷಣ ಕ್ಷಣದ ವರದಿ ಸಿಗುತ್ತದೆ. ಆದರೆ, ಪಕ್ಕದ ಮನೆಯಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಾಗದಿರುವುದು ಸಂಬಂಧಗಳು ದೂರ ಆಗುತ್ತಿರುವುದರ ದ್ಯೋತಕ ಎಂದರು.ಸಮುದಾಯದ ಮಟ್ಟದಲ್ಲಿ ನಡೆಯುವ ಕ್ರೀಡೆ ನಮ್ಮೆಲ್ಲರನ್ನು ಬೆಸೆಯುವ ಶಕ್ತಿ ಹೊಂದಿದೆ. ಜೊತೆಗೆ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಆಟ, ಮನರಂಜನೆಗೆ ರಕ್ತದೊತ್ತಡದಂಥ ರೋಗವನ್ನು ಕಡಿಮೆ ಮಾಡುವ ಶಕ್ತಿ ಇದೆ. ಮನಸ್ಸಿಗೆ ಮುದ ನೀಡುವುದಲ್ಲದೆ, ಸಂಘಟನೆಗೆ ಹೆಚ್ಚಿನ ಆದ್ಯತೆ ಒದಗಿಸುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಬಿ.ಮೂರ್ತಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅದನ್ನು ಗುರುತಿಸಲು ಇಂತಹ ಕ್ರೀಡಾಕೂಟ ಸಹಕಾರಿ. ಈ ಭಾಗದಲ್ಲಿ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದವರಿದ್ದಾರೆ. ಪ್ರತಿಭೆಗೆ ನಿರಂತರ ಪೋಷಣೆ ನೀಡಿದಾಗ ಉತ್ತಮ ಪ್ರಜೆಯಾಗಿ ಬೆಳೆಯುತ್ತಾರೆ ಎಂದು ಹೇಳಿದರು.ಮಂಡಳಿ ಅಧ್ಯಕ್ಷ ಗುರುದತ್ತ ಶರ್ಮ ಮಾತನಾಡಿದರು. ಹಿರಿಯ ಕೇರಂ ಆಟಗಾರ ಸೂರ್ಯನಾರಾಯಣ ಉಪಸ್ಥಿತರಿದ್ದರು. ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕ್ಯಾ. ಪ್ರಾಂಜಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಂತರ ರಾಷ್ಟ್ರೀಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶೆಡ್ತಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಿ.ಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಕಾಂತ್ ಸ್ವಾಗತಿಸಿದರು. ಶ್ರೀಹರಿ ಪ್ರಸ್ತಾವಿಕವಾಗಿ ಮಾತನಾಡಿದದರು. ಶ್ರೀನಿಧಿ ವಂದಿಸಿದರು. ರಾಮಚಂದ್ರ ಭಟ್ ನಿರೂಪಿಸಿದರು.- - -
-26ಕೆ.ಎಸ್.ಎ.ಜಿ.2:ಸಾಗರ ತಾಲೂಕಿನ ವರದಾಮೂಲದಲ್ಲಿ ರಾಜ್ಯಮಟ್ಟದ ಹವ್ಯಕ ಕೇರಂ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.